ಕರ್ನಾಟಕ

karnataka

ಕುಡಿತಕ್ಕೆ ಹಣ ನೀಡಿಲ್ಲವೆಂದು ವ್ಯಕ್ತಿ ಕೊಂದವರ ಬಂಧನ: ಚಪ್ಪಲಿ ನೀಡಿತು ಹಂತಕರ ಸುಳಿವು!

By

Published : Jun 24, 2022, 9:28 PM IST

ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯನ್ನು ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ಕಲಬುರಗಿಯಲ್ಲಿ ಬಂಧಿಸಲಾಗಿದೆ.

three-arrested-in-murder-case-at-kalaburagi
ಕುಡಿತಕ್ಕೆ ಹಣ ನೀಡಿಲ್ಲವೆಂದು ವ್ಯಕ್ತಿ ಕೊಂದವರ ಬಂಧನ: ಚಪ್ಪಲಿ ನೀಡಿತು ಹಂತಕರ ಸುಳಿವು!

ಕಲಬುರಗಿ:ಜೂನ್ 11ರಂದು ನಗರದ ಗುಬ್ಬಿ ಕಾಲೋನಿಯ ಕೋಸಗಿ ಲೇಔಟ್‌ನ ನಿರ್ಜನ ಪ್ರದೇಶದಲ್ಲಿ ನಡೆದ ಮಹ್ಮದ್ ಕರೀಂಸಾಬ್(40) ಎಂಬಾತನ ಹತ್ಯೆ ಪ್ರಕರಣ ಸಂಬಂಧ ಎಂಬಿ ನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ನಗರದ ಬಾಪುನಗರ ನಿವಾಸಿಗಳಾದ ಕೇವಲ್ ಉಪಾಧ್ಯಾಯ, ಜಿತೇಶ್ ಉಪಾಧ್ಯಾಯ ಹಾಗೂ ಪ್ರೇಮ್ ಉಪಾಧ್ಯಾಯ ಬಂಧಿತ ಆರೋಪಿಗಳು.

ಕೊಲೆಗೆ ಕಾರಣ: ಆರೋಪಿಗಳಿಗೆ ಕುಡಿಯುವ ಚಟವಿತ್ತು. ಹಣವಿಲ್ಲದ ಕಾರಣ ಗುಬ್ಬಿ ಕಾಲೋನಿಯ ಬಳಿ ಹೋಗುತ್ತಿದ್ದ ಕರಿಂಸಾಬ್‌ನನ್ನ‌ ನಿರ್ಜನ ಪ್ರದೇಶಕ್ಕೆ ಆಟೋದಲ್ಲಿ ಕರೆದುಕೊಂಡು ಹೋಗಿ ಕುಡಿಯುವುದಕ್ಕೆ ಹಣ ಕೇಳಿದ್ದಾರೆ. ಆಗ ಹಣ ಕೊಡದಿದ್ದಾಗ, ಆತನ ಜೊತೆ ಜಗಳವಾಡಿದ್ದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.

ಚಪ್ಪಲಿಯಿಂದ ಹಂತಕರ ಸುಳಿವು: ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯ ಮತ್ತು ಸ್ಥಳದಲ್ಲಿ ಸಿಕ್ಕ ಕೆಲ ವಸ್ತುಗಳ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದು, ಈ ವೇಳೆ ಶವದ ಪಕ್ಕದಲ್ಲಿದ್ದ ಚಪ್ಪಲಿ ಹಂತಕರ ಸುಳಿವು ಕೊಟ್ಟಿದೆ. ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಶವದ ಪಕ್ಕದಲ್ಲೆ ಬಿದ್ದಿದ್ದ ಚಪ್ಪಲಿ ಹಾಗೂ ಆರೋಪಿಯ ಚಪ್ಪಲಿ‌ ಮ್ಯಾಚ್​ ಆಗಿದೆ‌. ಸಂಶಯಗೊಂಡ ಪೊಲೀಸರು ಆರೋಪಿ ಪತ್ತೆ ಹಚ್ಚಿ, ರಾಜಾಪುರ ಬಳಿ ಮೂವರನ್ನು ಬಂಧಿಸಿದ್ದಾರೆ.

ಬಂಧಿತ ಮೂವರು ಆರೋಪಿಗಳ‌ ಪೈಕಿ ಎ1 ಆರೋಪಿ ಕೇವಲ್ ಉಪಾಧ್ಯಾಯ ಮೇಲೆ ಕಲಬುರಗಿ ನಗರದ ಬ್ರಹ್ಮಪುರ, ಮಹಿಳಾ ಠಾಣೆಯಲ್ಲಿ ದರೋಡೆ ಸೇರಿ ಒಟ್ಟು ಮೂರು ಪ್ರಕರಣಗಳಿವೆ. ಕುಡಿದ ಮತ್ತಿನಲ್ಲಿ ಆರೋಪಿಗಳು ಕರೀಂಸಾಬ್ ಜೊತೆಗೆ ಗಲಾಟೆ‌ ಮಾಡಿ ಹತ್ಯೆ ಮಾಡಿದ್ದರು. ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿಸಿಪಿ ಅಡ್ಡೂರು ಶ್ರೀನಿವಾಸಲು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಕುಡಿದು ಬಂದು ಕುಟುಂಬಕ್ಕೆ ಬೆಂಕಿ ಹಚ್ಚಿದ ದುರುಳ: ಹೆಂಡತಿ ಸಾವು, ಮಕ್ಕಳು ಗಂಭೀರ

ABOUT THE AUTHOR

...view details