ಕರ್ನಾಟಕ

karnataka

ETV Bharat / state

ಕಾಡುಪ್ರಾಣಿಗಳ ಬೇಟೆ: ಕಲಬುರಿಗಿಯಲ್ಲಿ ಮೂವರ ಬಂಧನ; ಲಕ್ಷಾಂತರ ಮೌಲ್ಯದ ಪ್ರಾಣಿಗಳ ಅಂಗಾಂಗ ಜಪ್ತಿ - ಚಿತ್ತಾಪುರ ವಲಯ ಅರಣ್ಯ ಇಲಾಖೆ ಅಧಿಕಾರಿಗಳು

ಕಲಬುರಗಿಯ ಚಿತ್ತಾಪುರ ಗುಡ್ಡದಲ್ಲಿ ಕಾಡುಪ್ರಾಣಿಗಳ ಚರ್ಮ, ದಂತ, ಕೂದಲು, ಚಿಪ್ಪು ಮತ್ತು ಮುಳ್ಳುಗಳನ್ನು ಕಳ್ಳಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಕಾಡು ಪ್ರಾಣಿಗಳ ಬೇಟೆ ಮೂವರ ಬಂಧನ
ಕಾಡು ಪ್ರಾಣಿಗಳ ಬೇಟೆ ಮೂವರ ಬಂಧನ

By ETV Bharat Karnataka Team

Published : Sep 14, 2023, 11:48 AM IST

ಕಲಬುರಗಿ:ಚಿತ್ತಾಪುರ ಗುಡ್ಡದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಚರ್ಮ, ದಂತ, ಕೂದಲು, ಚಿಪ್ಪು ಮತ್ತು ಮುಳ್ಳುಗಳನ್ನು ಕಳ್ಳಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಚಿತ್ತಾಪುರ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಚಿತ್ತಾಪುರ ತಾಲೂಕಿನ ರಾಂಪುರಹಳ್ಳಿ ಗ್ರಾಮದ ನಿವಾಸಿ ಹಣಮಂತ ಹೆಳವರ, ಭೀಮರಾಯ ಹೆಳವರ ಮತ್ತು ಮಲ್ಲಪ್ಪ ಹೆಳವರ ಬಂಧಿತರು . ಇನ್ನೋರ್ವ ಆರೋಪಿ ಕುಂಬಾರಹಳ್ಳಿ ಗ್ರಾಮದ ಸಾಯಬಣ್ಣ ಹೆಳವರ ತಲೆಮರೆಸಿಕೊಂಡಿದ್ದು, ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.

ಚಿತ್ತಾಪುರ ತಾಲೂಕಿನ ಗುಡ್ಡಗಳಲ್ಲಿ ಕಾಡು ಪ್ರಾಣಿಗಳ ಬೇಟೆಯಾಡಿ ಅಪಾರ ಪ್ರಮಾಣದ ಪ್ರಾಣಿಗಳ ಅಂಗಾಂಗಗಳ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸನ್ನತಿ ಬಳಿಯ ರಾಂಪೂರ ಹಳ್ಳಿಯಲ್ಲಿ ಅರಣ್ಯ ಇಲಾಖೆ ವನ್ಯಜೀವಿಧಾಮದ ಸಂರಕ್ಷಣಾ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಬೇಟೆಗಾರರ ಮನೆಯಿಂದ ಅಪಾರ ಪ್ರಮಾಣದಲ್ಲಿ ವನ್ಯಪ್ರಾಣಿಗಳ ಅಂಗಾಂಗಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಚಿಪ್ಪು ಹಂದಿಯ ಚಿಪ್ಪುಗಳು, ಮುಳ್ಳು ಹಂದಿಯ ಮುಳ್ಳುಗಳು, ಮುಂಗುಸಿಯ ಕೂದಲು, ನೀರುನಾಯಿಯ ಚರ್ಮ ಮತ್ತು ಕಾಡುಹಂದಿಯ ದಂತ, ಉಡ ಹಾಗೂ ಬೇಟೆಯಾಡಲು ಬಳಸಿದ ಭರ್ಚಿ, ಕ್ಲಚ್‌ವೈರ್ ತಂತಿಗಳು, ಹಾರ್ನ್‌ಸಮೇತ ಇರುವ ಶಿಕಾರಿ ಬ್ಯಾಟರಿ ಟಾರ್ಚ್, ಚೂರಿ, ಪಂಜಾ, ಬಲೆಗಳು, ಕಬ್ಬಿಣದ ರಾಡುಗಳು, ಮೂರು ಮೊಬೈಲ್ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕಲಬುರಗಿ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮೀತಕುಮಾರ ಪಾಟೀಲ, ವಿಭಾಗೀಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹ್ಮದ್ ಮುನೀರ್ ಅಹ್ಮದ್ ಮಾರ್ಗದರ್ಶನದಲ್ಲಿ ತಂಡ ರಚಿಸಿದ ಚಿತ್ತಾಪುರ ತಾಲೂಕು ವಲಯ ಅರಣ್ಯಾಧಿಕಾರಿ ವಿಜಯಕುಮಾರ ಬಡಿಗೇರ, ಉಪ ವಲಯ ಅರಣ್ಯಾಧಿಕಾರಿ ಗಜಾನಂದ, ಮೋಜಣಿದಾರ ಹಾಗೂ ಅರಣ್ಯ ಸಿಬಂದಿಯ ತಂಡ ಪ್ರಾಣಿ ಬೇಟೆಗಾರರ ಮೇಲೆ ದಾಳಿ ನಡೆಸುವ ಮೂಲಕ ಲಕ್ಷಾಂತರ ರೂ. ಮೌಲ್ಯದ ಕಾಡುಪ್ರಾಣಿಗಳ ಅಂಗಾಂಗಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ವನ್ಯಪ್ರಾಣಿಗಳನ್ನು ಅಕ್ರಮವಾಗಿ ಬೇಟೆಯಾಡುವ ಅಥವಾ ಮಾರಾಟ ಮಾಡುವ ಅಪರಾಧ ಕೃತ್ಯ ಕಂಡುಬಂದಲ್ಲಿ ಸಾರ್ವಜನಿಕರು ಕಲಬುರಗಿ ಪ್ರಾದೇಶಿಕ ವಿಭಾಗ ಕಚೇರಿಯ ದೂರವಾಣಿ ಸಂಖ್ಯೆ: 08472 256601ಕ್ಕೆ ಕರೆ ಮಾಡಿ ತಿಳಿಸುವಂತೆ ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ದಕ್ಷಿಣ ಕನ್ನಡ: ಮೀಸಲು ಅರಣ್ಯದೊಳಗೆ ಕಡವೆ ಬೇಟೆಯಾಡಿದ ಮೂವರ ಬಂಧನ

ABOUT THE AUTHOR

...view details