ಕರ್ನಾಟಕ

karnataka

ETV Bharat / state

ಮದುವೆ ಸಿದ್ಧತೆಯಲ್ಲಿದ್ದ ಮನೆಯಲ್ಲಿ 2 ಲಕ್ಷ ಮೌಲ್ಯದ ವಸ್ತು ಕದ್ದೊಯ್ದ ಕಳ್ಳರು : ಕಣ್ಣೀರಲ್ಲಿ ಕುಟುಂಬ

ಇನ್ನೇನು ಕೆಲವೇ ದಿನಗಳಲ್ಲಿ ಮಗಳ ಮದುವೆ.. ಬಡತನ ಇದ್ದರೂ ಸರಿ, ಯಾವುದೇ ಕೊರತೆ ಆಗದಂತೆ ವಿವಾಹ ನೆರವೇರಿಸಬೇಕು ಎಂದು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದ್ರೆ ಸಂಭ್ರಮದಲ್ಲಿರಬೇಕಿದ್ದ ಕುಟುಂಬಸ್ಥರೀಗ ಕಣ್ಣೀರು ಹಾಕುತ್ತಿದ್ದಾರೆ. ಇಷ್ಟಕ್ಕೆಲ್ಲ ಕಾರಣ ಕಳ್ಳರ ಕೃತ್ಯ. ಮದುವೆಗೆ ಮನೆಗೆ ನುಗ್ಗಿದ ಖದೀಮರು ಮನೆಯನ್ನಲ್ಲ ಗುಡಿಸಿ ಗುಂಡಾಂತರ ಮಾಡಿದ್ದಾರೆ. ಸಾಲ ಮಾಡಿ ತಂದಿಟ್ಟಿದ್ದ ವಸ್ತುಗಳು ಕಳ್ಳರ ಪಾಲಾಗಿದ್ದಕ್ಕೆ ಕುಟುಂಬಸ್ಥರಿಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗಿದೆ. ಕಲಬುರಗಿಯಲ್ಲಿ ಈ ಪ್ರಕರಣ ನಡೆದಿದೆ.

By

Published : Dec 24, 2020, 9:18 AM IST

Updated : Dec 24, 2020, 9:38 AM IST

ಕಣ್ಣೀರಲ್ಲಿ ಕುಟುಂಬ
Thieves thefted jewelry,clothes in house at Kalburgi

ಕಲಬುರಗಿ:ಮಗಳ ಮದುವೆಗಾಗಿ ಸಾಲ ಮಾಡಿ ತಂದಿದ್ದ 2 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದು, ಬಡ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.

ಕಳ್ಳತನವಾದ ಮನೆ...ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಕುಟುಂಬ

ನಗರದ ಎನ್​​ಜಿಒ ಕಾಲೋನಿ ನಿವಾಸಿಯಾಗಿರುವ ಶಂಕರ್ ರಾವ್ ಕುಲಕರ್ಣಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಶಂಕರ್​ ರಾವ್​ ತಮ್ಮ ಮಗಳ ಮದುವೆಗಾಗಿ ಸಾಲ-ಸೋಲ ಮಾಡಿ ಒಡವೆ, ಬಟ್ಟೆ, ಪಾತ್ರೆಗಳನ್ನು ತಂದಿಟ್ಟಿದ್ದರು. ಆದರೆ ತಡರಾತ್ರಿ ಮನೆಗೆ ನುಗ್ಗಿದ ಖದೀಮರು ಎಲ್ಲವನ್ನೂ ಕದ್ದು ಪರಾರಿಯಾಗಿದ್ದಾರೆ. ಇದರಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಇದೇ ಜ.03ಕ್ಕೆ ಶಂಕರ್ ರಾವ್ ಅವರ ಎರಡನೇ ಮಗಳು ಪ್ರಿಯಾ ಎಂಬುವರ ಮದುವೆ ನಿಶ್ಚಯ ಮಾಡಲಾಗಿತ್ತು. ಕಡು ಬಡತನವಿದ್ದರೂ ಸಹ ತಮ್ಮ ಮಗಳ ಮದುವೆಗೆ ಯಾವುದೇ ರೀತಿಯ ಕೊರತೆ ಆಗದಂತೆ ಸಾಲ ಮಾಡಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ ಇದೀಗ ಮಗಳ ಮದುವೆಗೆ ತಂದಿಟ್ಟ ವಸ್ತುಗಳು ಕಳ್ಳತನವಾದ ಹಿನ್ನೆಲೆಯಲ್ಲಿ ಇಡೀ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ.

ಶಂಕರ್ ರಾವ್ ತನ್ನ ಕುಟುಂಬದೊಂದಿಗೆ ಎನ್​ಜಿಒ ಕಾಲೋನಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಚಿಕ್ಕದಾದ ಬಾಡಿಗೆ ಮನೆಯಲ್ಲಿ ವಾಸವಿದ್ದ ಹಿನ್ನೆಲೆಯಲ್ಲಿ ಬಾಡಿಗೆ ಮನೆಯಲ್ಲೇ ಮದುವೆ ಸಾಮಾನುಗಳು ಇಟ್ಟರೆ ಮೂರು ಜನ ಮಕ್ಕಳು, ಗಂಡ-ಹೆಂಡತಿ, ಸಂಬಂಧಿಕರು ಬಂದರೆ ಕುಳಿತುಕೊಳ್ಳವುದಕ್ಕೆ ಜಾಗ ಸಾಕಾಗೋದಿಲ್ಲ ಎಂದು ಪರಿಚಯಸ್ಥರ ಮನೆಯ ಖಾಲಿ ರೂಮಿನಲ್ಲಿ ಮದುವೆಗೆ ಬೇಕಾದ ವಸ್ತುಗಳನ್ನಿಟ್ಟು ಬೀಗ ಹಾಕಿದ್ದರು. ಆದರೆ ನಿನ್ನೆ ತಡರಾತ್ರಿ ಖದೀಮರು ಎಲ್ಲಾ ವಸ್ತುಗಳನ್ನು ದೋಚಿದ್ದಾರೆ.

ಓದಿ: ಕ್ರಿಸ್​ಮಸ್, ಹೊಸ ವರ್ಷಾಚರಣೆಗೆ ನಶೆ ಏರಿಸಲು ಮುಂದಾಗಿದ್ದ ಖದೀಮರು : ಬೆಂಗಳೂರಲ್ಲಿ ಡ್ರಗ್ಸ್​ ಪೆಡ್ಲರ್ಸ್​ ಅಂದರ್​

ಶಂಕರ್ ರಾವ್ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದು, ಇವರ ಪತ್ನಿ ಬೇರೆಯವರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಾರೆ‌. ಮೊದಲನೇ ಮಗಳ ಮದುವೆ ಆಗಿದ್ದು, ಇದೀಗ ಎರಡನೆ ಮಗಳ ಮದುವೆಗೆ ಕುಟುಂಬ ಸಂಬಂಧಿಕರ ನೆರವಿನಿಂದ, ಸಾಲ ಮಾಡಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಇದೇ ವೇಳೆ ಈ ಘಟನೆ ನಡೆದಿದ್ದು, ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ಈ ಸಂಬಂಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಲು ಜಾಲ ಬೀಸಿದ್ದಾರೆ.

Last Updated : Dec 24, 2020, 9:38 AM IST

ABOUT THE AUTHOR

...view details