ಸೇಡಂ: ಊಹೆಗೂ ಮೀರಿ ಕಾಗೀಣಾ ನದಿ ಹರಿಯುತ್ತಿದ್ದು ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ. ಬೆಳಗ್ಗೆ ತಾಲೂಕಿನ ಮಳಖೇಡ ಬ್ರಿಡ್ಜ್ ಮೇಲೆ 3 ಅಡಿ ಹರಿಯುತ್ತಿದ್ದ ನದಿ ಸಂಜೆ ವೇಳೆ 6 ಅಡಿಗೂ ಹೆಚ್ಚು ಪ್ರಮಾಣದಲ್ಲಿ ಭೋರ್ಗರೆಯುತ್ತಿದೆ.
ಮಿತಿ ಮೀರಿ ಹರಿಯುತ್ತಿರುವ ಕಾಗೀಣಾ ನದಿ: ಸಂಪರ್ಕ ಕಳೆದುಕೊಳ್ಳುತ್ತಿರುವ ಗ್ರಾಮಗಳು
ಸೇಡಂ ತಾಲೂಕಿನ ಕಾಗೀಣಾ ನದಿ ರಭಸವಾಗಿ ಹರಿಯುತ್ತಿದ್ದು, ಮಳಖೇಡ ಬ್ರಿಡ್ಜ್ ಮೇಲೆ 3 ಅಡಿ ಹರಿಯುತ್ತಿದ್ದ ನದಿ ಸಂಜೆ ವೇಳೆ 6 ಅಡಿಗೂ ಹೆಚ್ಚು ಪ್ರಮಾಣದಲ್ಲಿ ಭೋರ್ಗರೆಯುತ್ತಿದ್ದು, ನದಿ ಪಾತ್ರದ ಬಹುತೇಕ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ನದಿ ಪಾತ್ರದ ಬಹುತೇಕ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದೆ. ನೀರಿನ ರಭಸ ಹೆಚ್ಚಾಗತೊಡಗಿದ್ದು, ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಾಗೀಣಾ ಮತ್ತು ಕಮಲಾವತಿ ನದಿಗಳು ಹರಿಯುವ ಬಹುತೇಕ ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತಿದೆ. ತಾಲೂಕಿನ ಬಿಬ್ಬಳ್ಳಿ, ಬೀರನಹಳ್ಳಿ, ಸಂಗಾವಿ, ಬೆನಕನಹಳ್ಳಿ, ಹಾಬಾಳ, ಕುರಕುಂಟಾ, ಹಂಗನಹಳ್ಳಿ ಗ್ರಾಮಗಳ ಮನೆಗಳಲ್ಲಿ ನೀರು ನುಗ್ಗಿದೆ. ಅನೇಕ ರಸ್ತೆಗಳು ಜಲಾವೃತವಾಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ.
ಇನ್ನು ನದಿ ಪಾತ್ರದ ಬಹುತೇಕ ಜಮೀನುಗಳು ನೀರಿನಿಂದ ಜಲಾವೃತವಾಗಿದ್ದು, ಲಕ್ಷಾಂತರ ರೂಪಾಯಿ ಬೆಲೆಯ ಬೆಳೆ ನೀರು ಪಾಲಾಗಿದೆ. ಇದರಿಂದ ರೈತ ಕಂಗಾಲಾಗಿದ್ದಾನೆ.