ಕಲಬುರಗಿ: ಮಳೆ ಕಡಿಮೆಯಾಗಿ ಪ್ರವಾಹದ ನೀರು ಇಳಿಮುಖವಾದ ನಂತರ ಪರಿಹಾರ ಕೇಂದ್ರಗಳಿಂದ ಮನೆಗಳತ್ತ ತೆರಳಿದ ಸಂತ್ರಸ್ತರಿಗೆ ಈಗ ವಿಷ ಜಂತುಗಳ ಕಾಟ ಶುರುವಾಗಿದೆ.
ಪ್ರವಾಹದಿಂದ ತತ್ತರಿಸಿರುವ ಕಲಬುರಗಿ ಜನರಿಗೆ ವಿಷ ಜಂತುಗಳ ಕಾಟ - Flooding in the River Bhima
ಪ್ರವಾಹದಿಂದ ಕಂಗೆಟ್ಟು ಹೋಗಿರುವ ಕಲಬುರಗಿ ಜಿಲ್ಲೆಯ ಜನರ ಸಂಕಷ್ಟ ಮಳೆ ಕಡಿಮೆಯಾದರೂ ಬಗೆಹರಿಯುವಂತೆ ಕಾಣುತ್ತಿಲ್ಲ. ಭಾರೀ ಪ್ರವಾಹದಿಂದ ಮನೆಗಳಲ್ಲಿ ಅವಿತುಕೊಂಡಿದ್ದ ವಿಷ ಜಂತುಗಳು ಹೊರ ಬಂದು ಸ್ಥಳೀಯರಿಗೆ ಭಯ ಹುಟ್ಟಿಸಿವೆ.

ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ
ಭೀಮಾ ನದಿ ಉಕ್ಕಿ ಹರಿದು ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಿ ಕೆಲ ಮನೆಗಳು ಸಂಪೂರ್ಣ ಮುಳುಗಡೆಯಾಗಿದ್ದವು. ಈಗ ನೀರು ಕಡಿಮೆಯಾಗಿರುವುದರಿಂದ ಮನೆಯ ಚಪ್ಪರ, ಸಂದಿಗಳಲ್ಲಿ ಅಡಗಿದ್ದ ಹಾವು, ಚೇಳು, ಕ್ರಿಮಿಕೀಟಗಳು ಹೊರ ಬರಲಾರಂಭಿಸಿದ್ದು, ಜನರಲ್ಲಿ ಆತಂಕ ಹುಟ್ಟಿಸಿವೆ. ಜಿಲ್ಲೆಯ ಅಫಜಲಪುರ ತಾಲೂಕಿನ ಹೊಳಿ ಭೋಸಗಾ ಗ್ರಾಮದಲ್ಲಿ ಹೊನಪ್ಪ ಶಿವಣಗಿ ಎಂಬುವವರ ಮನೆಯಲ್ಲಿ ಮೂರು ಹಾವುಗಳು ಏಕಕಾಲಕ್ಕೆ ಪ್ರತ್ಯಕ್ಷವಾಗಿವೆ.
ವಿಷ ಜಂತುಗಳ ಕಾಟ
ಹಾವುಗಳನ್ನು ಕಂಡು ಮನೆಯವರು ಹೌಹಾರಿದ್ದು, ಭಯದಲ್ಲೇ ಒಂದು ಹಾವನ್ನು ಹೊಡೆದು ಕೊಂದಿದ್ದಾರೆ. ಹಾವುಗಳು ಮನೆಯಲ್ಲೇ ಇರುವುದರಿಂದ ಕುಟುಂಬಸ್ಥರ ಆತಂಕ ಇಮ್ಮಡಿಯಾಗಿದೆ.