ಕಲಬುರಗಿ:ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಡಿ. ಪಾಟೀಲ್ ಅಳಿಯ ಸೇರಿ ಮತ್ತೆ ಮೂವರು ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಬ್ಬರು ಆರ್.ಡಿ. ಪಾಟೀಲ್ ಆಪ್ತರಾಗಿದ್ದಾರೆ. ಅಫಜಲಪುರ ತಾಲೂಕಿನ ಮನೂರ್ ಗ್ರಾಮದ ನಿವಾಸಿ ಅಸ್ಲಂ ಹಾಗೂ ಕರಜಗಿ ಗ್ರಾಮದ ನಿವಾಸಿ ಮುನಾಫ್ ಜಮಾದಾರ ಬಂಧಿತ ಆರೋಪಿಗಳು.
ಈ ಇಬ್ಬರು ಆರೋಪಿಗಳು ಆರ್.ಡಿ. ಪಾಟೀಲ್ಗೆ ಅಭ್ಯರ್ಥಿಗಳನ್ನು ಪೂರೈಸುವುದಲ್ಲದೆ, ಬ್ಲೂಟೂತ್ ಸರಬರಾಜು ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಬಂಧಿತ ಆರೋಪಿ ಅಸ್ಲಂ ಪಿಎಸ್ಐ ಅಕ್ರಮದ ವಿರುದ್ಧದ ಹೋರಾಟಗಾರ ಧಾರವಾಡದ ಆರ್.ಎಸ್. ಪಾಟೀಲ್ಗೆ ಜೀವ ಬೆದರಿಕೆ ಹಾಕಿದ್ದ ಎನ್ನಲಾಗ್ತಿದೆ. ಸದ್ಯ ಇಬ್ಬರನ್ನು ಬಂಧಿಸಿದ ಅಧಿಕಾರಿಗಳು ಆರೋಪಿಗಳನ್ನು ಸಿಐಡಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಆರ್ಡಿಪಿ ಅಳಿಯ ಸಿಐಡಿ ಬಲೆಗೆ: ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂದಿಸಿದಂತೆ ಕಿಂಗ್ ಪಿನ್ ಆರ್.ಡಿ. ಪಾಟೀಲ್ ಅಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್ ಬಂಧಿತ ಆರೋಪಿಯಾಗಿದ್ದಾನೆ. ಪ್ರಕಾಶ್ ಅಭ್ಯರ್ಥಿಗೆ ಬ್ಲೂಟೂತ್ ಸರಬರಾಜು ಮಾಡುತ್ತಿದ್ದ ಎನ್ನಲಾಗ್ತಿದೆ. ಸದ್ಯ ಎಮ್ ಎಸ್ ಇರಾಣಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಎಕ್ಸಾಂ ನಲ್ಲಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ, ಬಂಧಿತ ಅಭ್ಯರ್ಥಿ ಪ್ರಭುಗೆ ಬ್ಲೂಟೂತ್ ನೀಡಿದ್ದ. ಅಲ್ಲದೆ ಆರ್.ಡಿ. ಪಾಟೀಲ್ ಹೇಳಿದ ಅಭ್ಯರ್ಥಿಗಳಿಗೆ ಪ್ರಕಾಶ್ ಬ್ಲೂ ಟೂತ್ಗಳನ್ನು ಸರಬರಾಜು ಮಾಡುತ್ತಿದ್ದ ಎಂದು ತಿಳಿದುಬಂದಿದೆ.