ಕರ್ನಾಟಕ

karnataka

ನಿವೃತ್ತ ಸಿಬ್ಬಂದಿಯನ್ನು ನೇಮಿಸಲು ನಿರ್ಧಾರ; ಕೆಲಸ ಬಹಿಷ್ಕರಿಸಿದ ನೌಕರರಿಗೆ ಶಾಕ್

By

Published : Apr 9, 2021, 6:47 AM IST

ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಕಳೆದ ಎರಡು ವರ್ಷಗಳಲ್ಲಿ ನಿವೃತ್ತಿ ಹೊಂದಿದ ಚಾಲಕ ಹಾಗೂ ನಿರ್ವಾಹಕರನ್ನು ತಾತ್ಕಾಲಿಕವಾಗಿ ಸೇವೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಕಲಬುರಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

Kalburgi
ಕಲಬುರಗಿ ಸಾರಿಗೆ

ಕಲಬುರಗಿ: ಕೆಲಸ ಬಹಿಷ್ಕರಿಸಿ ಮುಷ್ಕರಕ್ಕಿಳಿದಿರುವ ಸಾರಿಗೆ ನೌಕರರಿಗೆ ಆಘಾತ ನೀಡಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮುಂದಾಗಿದೆ.

ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಕಳೆದ ಎರಡು ವರ್ಷಗಳಲ್ಲಿ ನಿವೃತ್ತಿ ಹೊಂದಿದ ಮತ್ತು ವಯೋಮಿತಿ 62 ವರ್ಷದೊಳಗಿನ ಚಾಲಕ ಹಾಗೂ ನಿರ್ವಾಹಕರನ್ನು ತಾತ್ಕಾಲಿಕವಾಗಿ ಸೇವೆಗೆ ತೆಗೆದುಕೊಳ್ಳಲಾಗುತ್ತಿದೆ. ಒಪ್ಪಂದದ ಆಧಾರದ ಮೇಲೆ ಕೆಲ ಷರತ್ತು ಹಾಗೂ ನಿಬಂಧನೆಗೊಳಪಟ್ಟು ನಿಯೋಜಿಸಲಾಗುತ್ತಿದೆ ಎಂದು ಕಲಬುರಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

ನಿವೃತ್ತ ನೌಕರರನ್ನು ಅವರು ನಿವೃತ್ತಿ ಹೊಂದಿದ ವಿಭಾಗ ಅಥವಾ ವಾಸಸ್ಥಳಕ್ಕೆ ಹತ್ತಿರದ ವಿಭಾಗಗಳಲ್ಲಿ ನಿಯೋಜಿಸಲಾಗುತ್ತದೆ. ಷರತ್ತುಗಳನ್ನು ಒಪ್ಪಿ ಕರ್ತವ್ಯ ನಿರ್ವಹಿಸಲು ಆಸಕ್ತಿಯಿರುವ ನಿವೃತ್ತ ಚಾಲನಾ ಸಿಬ್ಬಂದಿ ತಾವು ನಿವೃತ್ತಿ ಹೊಂದಿದ ವಿಭಾಗದಲ್ಲಿ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಕೂರ್ಮಾರಾವ್ ತಿಳಿಸಿದ್ದಾರೆ.

ಷರತ್ತು ಮತ್ತು ನಿಬಂಧನೆಗಳು ಹೀಗಿವೆ..

  • ದೈಹಿಕವಾಗಿ ಚಾಲನಾ/ನಿರ್ವಾಹಕ ವೃತ್ತಿ ಮಾಡಲು ಸಮರ್ಥರಿರುವ ಬಗ್ಗೆ ಸಂಸ್ಥೆಯಲ್ಲಿ ನಿಗದಿಪಡಿಸಿರುವ ದೈಹಿಕ, ದೃಷ್ಟಿ ಸಾಮರ್ಥ್ಯ ಪ್ರಮಾಣಪತ್ರ ಹಾಗೂ ಕೋವಿಡ್-19 ನೆಗೆಟಿವ್ ವರದಿ ಕುರಿತು ಜಿಲ್ಲಾ ವೈದ್ಯಾಧಿಕಾರಿಗಳಿಂದ ಪ್ರಮಾಣಪತ್ರ ಪಡೆಯಬೇಕು.
  • ಪ್ರಸ್ತುತ ಚಾಲ್ತಿಯಲ್ಲಿರುವ ಭಾರಿ ವಾಹನ / ನಿರ್ವಾಹಕ ಪರವಾನಗಿ ಹೊಂದಿರುವುದು ಕಡ್ಡಾಯ. ಪ್ರತಿದಿನದ ಕರ್ತವ್ಯಕ್ಕೆ ಚಾಲಕರಿಗೆ 800 ರೂ. ಹಾಗೂ ನಿರ್ವಾಹಕರಿಗೆ 700 ರೂ.ಗಳಂತೆ ಗೌರವ ಧನ ನೀಡಲಾಗುವುದು.
  • ಈ ಸಿಬ್ಬಂದಿಗೆ ವಾರದ ರಜೆ ಹೊರತುಪಡಿಸಿ ಬೇರೆ ಯಾವುದೇ ರಜೆ ಸೌಲಭ್ಯಗಳಿಗೆ ಅರ್ಹರಿರುವುದಿಲ್ಲ.
  • ಒಪ್ಪಂದದ ಅವಧಿಯನ್ನು ಯಾವುದೇ ಹೆಚ್ಚುವರಿ ಆರ್ಥಿಕ/ಸೇವಾ ಸೌಲಭ್ಯಗಳಿಗೆ ಪರಿಗಣಿಸುವುದಿಲ್ಲ.

ಈಗಾಗಲೇ ಮುಷ್ಕರದಲ್ಲಿ ಪಾಲ್ಗೊಂಡಿರುವ ಸಾರಿಗೆ ಸಂಸ್ಥೆಯ ಸಿಬ್ಬಂದಿ ಈ ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮನವಿ ಮಾಡಿದ್ದಾರೆ.

ABOUT THE AUTHOR

...view details