ಕರ್ನಾಟಕ

karnataka

ETV Bharat / state

ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್​ಗೆ ಡಿಜಿಸಿಎ ಅನುಮತಿ - ಸಂಸದ ಉಮೇಶ್ ಜಾಧವ್​

ಬೆಳಗ್ಗೆಯಿಂದ ಸಂಜೆಯವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಇನ್ನು ಮುಂದೆ ವಿಮಾನಗಳು ರಾತ್ರಿ ಸಮಯದಲ್ಲಿಯೂ ಲ್ಯಾಂಡ್ ಆಗಲಿವೆ.

Kalaburagi Airport
ಕಲಬುರಗಿ ವಿಮಾನ ನಿಲ್ದಾಣ

By

Published : May 19, 2023, 7:01 AM IST

Updated : May 19, 2023, 8:10 AM IST

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ಸಮಯ ವಿಮಾನಗಳ ಲ್ಯಾಂಡಿಂಗ್‌ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅನುಮತಿ ನೀಡಿದೆ. ಈವರೆಗೆ ನಿಲ್ದಾಣ ಮುಂಜಾನೆಯಿಂದ ಸಂಜೆಯವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು.

ವಿಮಾನ ನಿಲ್ದಾಣ ನಿರ್ದೇಶಕರ ಪ್ರತಿಕ್ರಿಯೆ: "ರನ್‍ ವೇ 27 ರ ಸಮೀಪದಲ್ಲಿ ಯಾವುದೇ ಸಂಭಾವ್ಯ ಎತ್ತರದ ನಿರ್ಬಂಧಗಳಿಲ್ಲದ ಕಾರಣ ಡಿಜಿಸಿಎ ರಾತ್ರಿ ಲ್ಯಾಂಡಿಂಗ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ರನ್‍ವೇ ಥ್ರೆಶೋಲ್ಡ್ ಶಿಫ್ಟ್ ಕೈಗೊಳ್ಳಲು ಸೂಚಿಸಿದೆ. ರಾತ್ರಿ ಲ್ಯಾಂಡಿಂಗ್‍ಗೆ ಅನುಮತಿ ಪಡೆಯಲು ಶ್ರಮಿಸಿದ ಎಲ್ಲ ಇಲಾಖೆಗಳ ಅವಿರತ ಪ್ರಯತ್ನಗಳಿಗೆ ಧನ್ಯವಾದಗಳು" ಎಂದು ಕಲಬುರಗಿ ವಿಮಾನ ನಿಲ್ದಾಣ ನಿರ್ದೇಶಕ ಡಾ.ಚಿಲಕ ಮಹೇಶ್ ಗುರುವಾರ ತಿಳಿಸಿದ್ದಾರೆ.

ನೈಟ್ ಲ್ಯಾಂಡಿಂಗ್ ಸೌಲಭ್ಯಕ್ಕೆ ಸಂಸದ ಉಮೇಶ್ ಜಾಧವ್​ ಸಂತಸ: "ನಾಗರಿಕ ವಿಮಾನಯಾನ ಸಚಿವಾಲಯದಡಿಯಲ್ಲಿ ಬರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಅಧಿಕೃತವಾಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಪೂರ್ಣಗೊಂಡಿದೆ ಎಂದು ಪ್ರಮಾಣೀಕರಿಸಿದೆ. ಈ ಸೌಲಭ್ಯದಿಂದ ಮುಂಬರುವ ದಿನಗಳಲ್ಲಿ ಹಲವಾರು ವಿಮಾನಯಾನ ಸಂಸ್ಥೆಗಳು ಕಲಬುರಗಿಯಿಂದ ದೇಶದ ವಿವಿಧ ಕಡೆಗಳಿಗೆ ವಿಮಾನ ಸೇವೆ ಆರಂಭಿಸಲಿವೆ. ಈ ನಿಟ್ಟಿನಲ್ಲಿ ಇದು ಮಹತ್ವಪೂರ್ಣ ಹೆಜ್ಜೆಯಾಗಿದೆ".

"ಸುಮಾರು ಎರಡು ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಾಗಿದ್ದ ಈ ಸೌಲಭ್ಯವು ಕೋವಿಡ್ 19 ಹಾಗೂ ಇತರೆ ಕಾರಣಗಳಿಂದ ವಿಳಂಬವಾಗಿತ್ತು. ಇದರ ಬಗ್ಗೆ ನಾನು ಹಲವಾರು ಬಾರಿ ಲೋಕಸಭೆಯಲ್ಲಿ ಪ್ರಶ್ನೆ ಕೇಳುವ ಮೂಲಕ ಹಾಗೂ ಲಿಖಿತವಾಗಿ ಪತ್ರ ಬರೆಯುವ ಮೂಲಕ ಕೇಂದ್ರದ ಸಚಿವರ ಗಮನಕ್ಕೆ ತಂದಿದ್ದೇನೆ. ಅದರ ಪ್ರತಿಫಲವಾಗಿ ಇದೀಗ ನೈಟ್ ಲ್ಯಾಂಡಿಂಗ್ ಸೌಲಭ್ಯ ಪೂರ್ಣಗೊಂಡಿದೆ. ಇದು ಸಂತಸ ತಂದಿದೆ. ಶೀಘ್ರದಲ್ಲಿಯೇ ಕೇಂದ್ರ ಸಚಿವರು ಭೇಟಿ ನೀಡಿ ವಿಮಾನಯಾನ ಸಂಸ್ಥೆಗಳಿಗೆ ಕಲಬುರಗಿಯಿಂದ ಸೇವೆ ಪ್ರಾರಂಭಿಸಲು ಕೋರುತ್ತೇನೆ" ಎಂದು ತಿಳಿಸಿದ್ದಾರೆ.

2019 ರಲ್ಲಿ ಉದ್ಘಾಟನೆಯಾಗಿದ್ದ ವಿಮಾನ ನಿಲ್ದಾಣ: ಕಲಬುರಗಿ ವಿಮಾನ ನಿಲ್ದಾಣಕ್ಕೆ 2019ರ ನವೆಂಬರ್​ 22 ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಚಾಲನೆ ನೀಡಿದ್ದರು. ಈ ವಿಮಾನ ನಿಲ್ದಾಣವು ಕಲಬುರಗಿಯವರು ಮಾತ್ರವಲ್ಲದೇ, ಕಲ್ಯಾಣ ಕರ್ನಾಟಕದ ಯಾದಗಿರಿ, ಬೀದರ್, ರಾಯಚೂರು ಹಾಗೂ ವಿಜಯಪುರ ಮಹಾರಾಷ್ಟ್ರದ ಸೊಲ್ಲಾಪುರ, ಲಾತೂರ್ ಭಾಗದ ಜನರಿಗೂ ಅನುಕೂಲವಾಗಿದೆ.

ಕಲಬುರಗಿ ವಿಮಾನ ನಿಲ್ದಾಣ ಮಾದರಿ ಚಿತ್ರ

ಅನುಕೂಲಗಳೇನು?: ಬೆಂಗಳೂರು ಮತ್ತು ದೆಹಲಿಗೆ ಪ್ರಯಾಣಿಸುವ ಉದ್ದಿಮೆದಾರರು, ವ್ಯಾಪಾರಸ್ಥರು ಹಾಗೂ ವಿದ್ಯಾರ್ಥಿಗಳು ಸಾಮಾನ್ಯ ನಾಗರಿಕರು ಸಹ ವಿಮಾನಯಾನದ ಪ್ರಯೋಜನ ಪಡೆಯುತ್ತಿದ್ದಾರೆ. ಉಡಾನ್ ಯೋಜನೆಯು ಇದಕ್ಕೆ ವರದಾನ. ಉಡಾನ್​ ಯೋಜನೆಯಡಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಶೇ 50 ರಷ್ಟು ಸೀಟ್​ಗಳು ಸಾಮಾನ್ಯ ನಾಗರಿಕರಿಗೂ ಅನುಕೂಲವಾಗುವಂತೆ ಮೀಸಲಿದೆ.

ಕರ್ನಾಟಕದಲ್ಲಿರುವ ವಿಮಾನ ನಿಲ್ದಾಣಗಳು:ರಾಜ್ಯದಲ್ಲಿ ಒಟ್ಟು 9 ವಿಮಾನ ನಿಲ್ದಾಣಗಳಿವೆ. ಈ ಪೈಕಿ ಎರಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಬೆಂಗಳೂರು ಮತ್ತು ಮಂಗಳೂರು ಅಂತಾರಾಷ್ಟ್ರೀಯ ನಿಲ್ದಾಣಗಳ ಮೂಲಕ ವಿದೇಶಗಳಿಗೆ ಪ್ರಯಾಣ ಬೆಳೆಸಬಹುದು. ಇನ್ನುಳಿದಂತೆ ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಬೀದರ್‌, ಬಳ್ಳಾರಿ, ಮೈಸೂರು ಮತ್ತು ಶಿವಮೊಗ್ಗದಲ್ಲಿ ದೇಶೀಯ ವಿಮಾನ ನಿಲ್ದಾಣಗಳಿವೆ.

ಇದನ್ನೂ ಓದಿ:ಒಳ ಮೀಸಲಾತಿ ಶಿಫಾರಸು ಆದೇಶ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Last Updated : May 19, 2023, 8:10 AM IST

ABOUT THE AUTHOR

...view details