ಕರ್ನಾಟಕ

karnataka

ಜೋಳಿಗೆಯಿಂದ ನಾಪತ್ತೆಯಾದ ಮಗು ಶವವಾಗಿ ಪತ್ತೆ.. ಶೋಕ ಸಾಗರದಲ್ಲಿ ಮುಳುಗಿದ ಗ್ರಾಮ

ಕೆಲಸಕ್ಕೆ ಹೋಗಿದ್ದ ವೇಳೆ ಮರಕ್ಕೆ ಸೀರೆಯಿಂದ ಜೋಳಿಗೆ ಮಾಡಿ ಮಲಗಿಸಿದ್ದ ಮಗು ನಾಪತ್ತೆಯಾಗಿತ್ತು.

By

Published : Aug 27, 2022, 10:06 AM IST

Published : Aug 27, 2022, 10:06 AM IST

missing-baby-found-dead-in-kalaburagi
ಜೋಳಿಗೆಯಿಂದ ನಾಪತ್ತೆಯಾದ ಮಗು ಶವವಾಗಿ ಪತ್ತೆ

ಕಲಬುರಗಿ: ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ಜೋಳಿಗೆಯಲ್ಲಿ ಮಲಗಿಸಿದಾಗ ನಾಪತ್ತೆಯಾದ 9 ತಿಂಗಳ ಮಗು ಶವವಾಗಿ ಪತ್ತೆಯಾಗಿದೆ. ಪ್ರಾಣಿಗಳು ದಾಳಿ ನಡೆಸಿ ಮಗುವನ್ನು ಕೊಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಮಗು ಶವ ನೋಡಿದ ಹೆತ್ತವರ ಅಕ್ರಂದನ ಮುಗಿಲು ಮುಟ್ಟಿದೆ.

ಇದೇ ಆಗಸ್ಟ್​ 23 ರಂದು ಮಳ್ಳಿ ಗ್ರಾಮದಲ್ಲಿ 9 ತಿಂಗಳ ಮಗು ಬೀರಪ್ಪ ನಾಪತ್ತೆಯಾಗಿತ್ತು. ಕೂಲಿ ಕೆಲಸಕ್ಕೆ ತೆರಳಿದ ಶಾಂತಮ್ಮ, ಮರಕ್ಕೆ ಸೀರೆಯಿಂದ ಜೋಳಿಗೆ ಕಟ್ಟಿ ಮಗುವನ್ನು ಮಲಗಿಸಿ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಬಂದು ನೋಡಿದಾಗ ಮಗು ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದರೂ ಮಗು ಪತ್ತೆಯಾಗಿರಲಿಲ್ಲ, ಈ ಕುರಿತು ಪ್ರಕರಣ ದಾಖಲಿಸಿಕೊಂಡ ಯಡ್ರಾಮಿ ಪೊಲೀಸರು ಶೋಧ ಕಾರ್ಯ‌ ನಡೆಸಿದ್ದರು. ಎರಡು ದಿನಗಳ ನಂತರ ಪಕ್ಕದ ನಿರ್ಜನ ಪ್ರದೇಶದಲ್ಲಿ ಕಂದಮ್ಮನ ಶವ ಪತ್ತೆಯಾಗಿದೆ.

ಮಗುವಿನ‌ ದೇಹದ ಮೇಲೆ ಪ್ರಾಣಿಗಳು ಕಚ್ಚಿದ ಗುರುತುಗಳಿವೆ. ಹೀಗಾಗಿ ಪ್ರಾಣಿಗಳ ದಾಳಿಯಿಂದಲೇ ಮಗು ಮೃತಪಟ್ಟಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮಗು ನಾಪತ್ತೆಯಾದ ದಿನದಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು.‌ ಮಕ್ಕಳ ಕಳ್ಳರು ಬಂದಿರುವ ಶಂಕೆ ಕೂಡಾ ವ್ಯಕ್ತವಾಗಿತ್ತು. ಇದೀಗ ಶವ ದೊರೆತ ಹಿನ್ನಲೆ ಎಲ್ಲ ಉಹಾಪೋಹಗಳಿಗೆ ತೆರೆ ಬಿದ್ದಿದೆ.

ಮಗುವಿನ ಶವ ಸಿಕ್ಕ ನಂತರ ಹೆತ್ತರವ ಆಕ್ರಂದನ ಮುಗಿಲು ಮುಟ್ಟಿದ್ದು, ಇಡಿ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ. ಯಡ್ರಾಮಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ :ಜೋಳಿಗೆಯಲ್ಲಿದ್ದ ಮಗು ನಾಪತ್ತೆ.. ಹೆತ್ತ ಕರುಳು ಬಳ್ಳಿ ಕಳೆದುಕೊಂಡು ತಾಯಿ ಕಣ್ಣೀರು

ABOUT THE AUTHOR

...view details