ಕರ್ನಾಟಕ

karnataka

By

Published : Jun 12, 2022, 1:50 PM IST

ETV Bharat / state

ಕಲಬುರಗಿಯಲ್ಲಿ 'ಲೋಬಂಡಿ' ಜಾತ್ರೆ: ದರ್ಗಾದಿಂದ ಜಮೀನಿನಲ್ಲಿ 14 ಕಿ.ಮೀ ದೂರಕ್ಕೆ ಸಾಗುತ್ತೆ ಚಕ್ಕಡಿ

ಕಲಬುರಗಿಯಲ್ಲಿ ಲೋಬಂಡಿ ಜಾತ್ರೆ ನಡೆಯುತ್ತಿದ್ದು, ಹಿಂದೂ ಮುಸ್ಲಿಂ ಸಮುದಾಯದವರು ಒಟ್ಟಾಗಿ ಸೇರಿ ಜಾತ್ರೆ ಆಚರಿಸುತ್ತಾರೆ.

lobandi fair at kalaburagi
ಕಲಬುರಗಿಯಲ್ಲಿ 'ಲೋಬಂಡಿ' ಜಾತ್ರೆ

ಕಲಬುರಗಿ: ಕಲಬುರಗಿಯ ಮಣ್ಣೂರು ಗ್ರಾಮದಲ್ಲಿ ಹಿಂದೂ-ಮುಸ್ಲಿಮರು ಭಾವೈಕ್ಯತೆಯ 'ಲೋಬಂಡಿ ಜಾತ್ರೆ'ಯನ್ನು ನೂರಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಕರಾವಳಿಯಲ್ಲಿ ಕಂಬಳ ಕೆಸರುಗದ್ದೆಯಲ್ಲಿ ನಡೆದರೆ, ಕಲಬುರಗಿಯ ಲೋಬಂಡಿ ಜಾತ್ರೆ ಉಳುಮೆ ಮಾಡುವ ಜಮೀನಲ್ಲಿ ನಡೆಯುತ್ತದೆ.

ಕಾರ ಹುಣ್ಣಿಮೆಗೂ ಎರಡು ದಿನ ಮುಂಚಿತವಾಗಿ ಈ ಲೋಬಂಡಿ ಜಾತ್ರೆಯನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಮಣ್ಣೂರು, ರಾಮನಗರ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಗರು ಪಕ್ಕದ ಮಹಾರಾಷ್ಟ್ರದ ಹೈದ್ರಾ ಗ್ರಾಮದಲ್ಲಿರುವ ಐತಿಹಾಸಿಕ ಹಾಜಿ ಖ್ವಾಜಾ ಸೈಫಲ್ ಮುಲೂಕ್ ಚಿಸ್ತಿ ದರ್ಗಾಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಲೋಬಂಡಿಯಲ್ಲಿ ಆಹಾರ ಪದಾರ್ಥಗಳನ್ನು ಒಯ್ದು ದರ್ಗಾಗೆ ತೆರಳುವ ಜನರು ಅಲ್ಲಿ ಪೂಜೆ ಸಲ್ಲಿಸುತ್ತಾರೆ. ಪೂಜೆ ಬಳಿಕ ದರ್ಗಾದ ಮೌಲ್ವಿಗಳಿಗೆ ಮೊದಲು ಪ್ರಸಾದ ವಿತರಿಸಿ ಬಳಿಕ ಜನರಿಗೆ ಪ್ರಸಾದ ವಿತರಿಸಲಾಗುತ್ತದೆ. ರಾತ್ರಿ ಇಡೀ ದರ್ಗಾದಲ್ಲಿಯೇ ಕಾಲ ಕಳೆದು ಮಾರನೇ ದಿನ ಮತ್ತೆ ಬೆಳಿಗ್ಗೆ ಪೂಜೆ ಸಲ್ಲಿಸಿ ಹಿಂದೂ-ಮುಸ್ಲಿಮರು ಸೇರಿ ಜಾತ್ರೆ ಆಚರಿಸುತ್ತಾರೆ.


ಹಿನ್ನೆಲೆ: ಮಣ್ಣೂರ ಗ್ರಾಮದ ಕರೂಟಿ ಅನ್ನೋ ಕುಟುಂಬಸ್ಥರ ಮೂಲಕ ಈ ಲೋಬಂಡಿ ಜಾತ್ರೆ ಆಚರಣೆ ಚಾಲ್ತಿಗೆ ಬಂದಿದೆ‌. ಕರೂಟಿ ಕುಟುಂಬಸ್ಥರು ಸುಮಾರು 600 ವರ್ಷಗಳಿಂದ ದರ್ಗಾದಲ್ಲಿ ಪೂಜೆ ಸಲ್ಲಿಸಿ ಲೋಬಂಡಿ ಜಾತ್ರೆ ಆಚರಿಸುತ್ತಾ ಬರುತ್ತಿದ್ದಾರೆ. ಲೋಬಂಡಿ ಅಂದ್ರೆ ಎತ್ತಿನ ಬಂಡಿ. ಲೋಬಂಡಿ ಜಾತ್ರೆಗಾಗಿಯೇ ಪ್ರತಿವರ್ಷ ಒಂದೇ ದಿನದಲ್ಲಿ ಎತ್ತಿನ ಬಂಡಿಗಳನ್ನು ಸಿದ್ಧಪಡಿಸುತ್ತಾರೆ.

ಸಿದ್ದಪಡಿಸಿದ ಬಂಡಿಯಲ್ಲಿ ಮಣ್ಣೂರು ಗ್ರಾಮಸ್ಥರು ತಮ್ಮ ತಮ್ಮ ಮನೆಗಳಲ್ಲಿ ಮಾಡುವ ರೊಟ್ಟಿ, ಸಿಹಿ ತಿನಿಸು, ಅನ್ನ, ಸಾಂಬಾರ್.. ಹೀಗೆ ಬಗೆ ಬಗೆಯ ಆಹಾರ ಪದಾರ್ಥಗಳನ್ನು ಎತ್ತಿನ ಬಂಡಿಯಲ್ಲಿ ಇಟ್ಟುಕೊಂಡು ಹೈದ್ರಾ ಗ್ರಾಮದ ಖ್ವಾಜಾ ದರ್ಗಾಗೆ ಆಗಮಿಸಿ ಜಾತ್ರೆ ಆಚರಿಸುತ್ತಾರೆ. ದರ್ಗಾದಿಂದ ಸುಮಾರು 12-14 ಕಿ.ಮೀ ದೂರದ ಮಣ್ಣೂರ ಗ್ರಾಮದವರೆಗೂ ಜಮೀನಿನಲ್ಲಿಯೇ 10 ಎತ್ತುಗಳ ಮೂಲಕ ಬಂಡಿಯನ್ನು ಎಳೆದುಕೊಂಡು ಸಾಗುತ್ತಾರೆ. ಅರ್ಧ ಚಕ್ಕಡಿ ಮಣ್ಣಿನಲ್ಲಿ ಮುಚ್ಚಿದ್ರೂ ಸಹ ಬೇರೆ ಬೇರೆ ರೈತರ ಎತ್ತುಗಳನ್ನು ಬಳಸಿ ಲೋಬಂಡಿಯನ್ನು ಎಳೆಯಲಾಗುತ್ತದೆ.

ಇದನ್ನೂ ಓದಿ:9 ತಿಂಗಳ ಬಳಿಕ ನಾಪತ್ತೆಯಾಗಿದ್ದ ಪತ್ನಿ, ಮಕ್ಕಳು ಪತ್ತೆ: ಪೊಲೀಸರಿಗೆ ಧನ್ಯವಾದ ಹೇಳಿದ ಪತಿ

ಜಾತ್ರೆ ಹಿನ್ನೆಲೆಯಲ್ಲಿ ಬಂಡಿ ಎಳೆಯುವ ಸ್ಪರ್ಧೆ ಏರ್ಪಡಿಸಲಾಗುತ್ತಿದ್ದು, ಹತ್ತಾರು ಹಳ್ಳಿಯ ರೈತರು ತಮ್ಮ ಎತ್ತುಗಳನ್ನು ತಂದು ಲೋಬಂಡಿಯನ್ನು ಎಳೆಯುತ್ತಾರೆ. ಸ್ಪರ್ಧೆಯಲ್ಲಿ ವಿಜೇತವಾದ ಎತ್ತಿನ ಮಾಲೀಕರಿಗೆ ವಿಶೇಷ ಬಹುಮಾನವನ್ನು ನೀಡಲಾಗುತ್ತದೆ. ವಿಶೇಷ ಅಂದ್ರೆ ಈ ಹೈದ್ರಾ ಗ್ರಾಮದಲ್ಲಿರುವ ಖ್ವಾಜಾ ಸೈಫಲ್ ಮುಲೂಕ್ ಚಿಸ್ತಿ ದರ್ಗಾಗೆ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಾರೆ.

ABOUT THE AUTHOR

...view details