ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ ಸಂಭ್ರಮದಿಂದ ನಡೆಯಿತು.
ಗುಲ್ಬರ್ಗಾ ವಿವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ ನಗರದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಹಿರಿಯ ಸಾಹಿತಿ ಪ್ರೊ.ಕೆ.ಆರ್.ದುರ್ಗಾದಾಸ್ ಉದ್ಘಾಟಿಸಿ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಅವರು, ಗುಲ್ಬರ್ಗಾ ವಿಶ್ವವಿದ್ಯಾಲಯ ಸ್ತುತ್ಯಾರ್ಹ ಕಾರ್ಯ ಮಾಡುತ್ತಿದೆ. ದೇಶದ ಯಾವುದೇ ವಿಶ್ವವಿದ್ಯಾಲಯಲದಲ್ಲಿ ಪ್ರಶಸ್ತಿ ನೀಡುವ ಪದ್ಧತಿಯಿಲ್ಲ. ಆದರೆ ಈ ವಿವಿ ಸಾಹಿತ್ಯ,ಕಲೆ,ಸಂಸ್ಕೃತಿಗೆ ಕೊಡುಗೆ ಕೊಟ್ಟವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅನುಕರಣೀಯ ಎಂದರು.
ಬಳಿಕ ಕುಲಪತಿ ಪ್ರೊ.ಪರಿಮಳಾ ಅಂಬೇಕರ್ ಮಾತನಾಡಿ, ರಾಜ್ಯಮಟ್ಟದ ಜಯತೀರ್ಥ ರಾಜಪುರೋಹಿತ ಕಥಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕಥೆಗಳನ್ನು ಹಿಂದಿ ಹಾಗೂ ಆಂಗ್ಲ ಭಾಷೆಗೆ ಭಾಷಾಂತರ ಮಾಡಬೇಕು. ಸಂಗೀತ, ನೃತ್ಯ ಕಲೆಯಲ್ಲಿ ಸಾಧನೆಗೈದವರಿಗೂ ಪ್ರಶಸ್ತಿ ನೀಡುವಂತೆ ಪ್ರಸಾರಾಂಗದ ನಿರ್ದೇಶಕರಿಗೆ ಸಲಹೆ ನೀಡಿದರು.
ಇದೇ ವೇಳೆ ದಿ.ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಪತ್ರಕರ್ತ ಶಿವರಾಮ ಅಸುಂಡಿ ಅವರ "ಹೆಣದ ಮೇವು" ಮತ್ತು ಪ್ರಭುಲಿಂಗ ನೀಲೂರೆ ಅವರ "ಒಳಿತು ಮಾಡು ಮನುಜ"ಕಥೆಗಳಿಗೆ ಚಿನ್ನದ ಪದಕ, ಮುದಿರಾಜ್ ಬಾಣದ್ ಅವರಿಗೆ ಕಂಚಿನ ಪದಕ ಪ್ರದಾನ ಮಾಡಲಾಯಿತು.
ಇದೇ ವೇಳೆ ಲೇಖಕ ಸೂರ್ಯಕಾಂತ ಸುಜ್ಯಾತ್, ಚಿದಾನಂದ ಸಾಲಿ, ಕೆ.ರವೀಂದ್ರನಾಥ್, ಬಸವರಾಜ ಡೋಣೂರು, ಜಯದೇವಿ ಗಾಯಕವಾಡ, ಶ್ರೀಶೈಲ ನಾಗರಾಳ, ನಾಗಪ್ಪ ಗೋಗಿ, ಅಮೃತಾ ಕಟಕೆ, ಶ್ರೀಶೈಲ ನಾಗರಾಳ ಮತ್ತಿತರರಿಗೆ ಪುಸ್ತಕ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ, ಪ್ರಸಾರಾಂಗದ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮತ್ತಿತರರು ಉಪಸ್ಥಿತರಿದ್ದರು.