ಕರ್ನಾಟಕ

karnataka

By

Published : Jul 28, 2023, 8:36 AM IST

ETV Bharat / state

Kalaburagi Rain: ಕಲಬುರಗಿಯಲ್ಲಿ ಮುಂದುವರೆದ ವರುಣಾರ್ಭಟ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಿಂದ ಸಭೆ

Kalaburagi Rain: ನೆರೆ ಹಾವಳಿ ಬಗ್ಗೆ ಕಲಬುರಗಿ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ ಕುಮಾರ ಪಾಂಡೆ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.

meeting by kalaburagi district in charge secretary
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಿಂದ ಸಭೆ

ಕಲಬುರಗಿ : ಮುಂಗಾರು ವಿಳಂಬವಾಗಿ ಪ್ರಾರಂಭಗೊಂಡರೂ ನಿರೀಕ್ಷಿತ ಮಟ್ಟ ಮೀರಿ ಸುರಿಯುತ್ತಿದೆ. ಜುಲೈ 19ರಿಂದ ಪ್ರಾರಂಭಗೊಂಡ ವರುಣನ ಆರ್ಭಟ ಒಂದೆರಡು ದಿನಗಳನ್ನು ಹೊರತುಪಡಿಸಿದ್ರೆ ಉಳಿದ ದಿನಗಳಲ್ಲಿ ಎಡೆಬಿಡದೆ ಸುರಿದಿದೆ. ಒಂದೆಡೆ ಸತತವಾಗಿ ಸುರಿಯುತ್ತಿರುವ ಮಳೆ, ಇನ್ನೊಂದೆಡೆ ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿ ಅಧಿಕ ಮಳೆಯಾಗುತ್ತಿರುವ ಕಾರಣ‌ ಜಿಲ್ಲೆಯಲ್ಲಿ‌ ಪ್ರವಾಹ ಸ್ಥಿತಿ ಉಂಟಾಗಬಹುದೆಂದು ಜಿಲ್ಲಾಡಳಿತ ತಯಾರಿ ಮಾಡಿಕೊಳ್ಳುತ್ತಿದೆ. ‌

ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೆರೆ ಹಾವಳಿ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ ಕುಮಾರ ಪಾಂಡೆ, ಜಿಲ್ಲಾ‌‌ ಮಟ್ಟದ ಅಧಿಕಾರಿಗಳು ಮತ್ತು ತಹಶೀಲ್ದಾರ್​ಗಳೊಂದಿಗೆ ಸಭೆ ನಡೆಸಿ, ಸಿದ್ಧತಾ ಕಾರ್ಯದ ಮಾಹಿತಿ ಪಡೆದು ಅಗತ್ಯ ಸಲಹೆ‌ ಸೂಚನೆಗಳನ್ನು ನೀಡಿದರು.

ಬುಧವಾರ ಮುಖ್ಯಮಂತ್ರಿಗಳು ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ನೆರೆ ಹಾವಳಿ ನಿಯಂತ್ರಣ ಕ್ರಮ ಕೈಗೊಳ್ಳಲು ಅಗತ್ಯ ಸೂಚನೆಗಳನ್ನು ಕೊಟ್ಟಿದ್ದಾರೆ. ಅದನ್ನು ತಪ್ಪದೆ ಎಲ್ಲರೂ ಪಾಲಿಸಬೇಕು. ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕಂದಾಯ, ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ಶಿಕ್ಷಣ, ಜೆಸ್ಕಾಂ, ಪೌರ ಸಂಸ್ಥೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹೀಗೆ ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ತಂಡದ ರೂಪದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಪಂಕಜ ಕುಮಾರ ಪಾಂಡೆ ಸೂಚಿಸಿದರು.

ಮುಂದಿನ ದಿನದಲ್ಲಿ ಮಳೆ ಹೆಚ್ಚಾದಲ್ಲಿ ಸಹಜವಾಗಿ ಮಹಾರಾಷ್ಟ್ರದ ಜಲಾಶಯದಿಂದ ಜಿಲ್ಲೆಯ ಪ್ರಮುಖ ಜೀವನಾಡಿ ಭೀಮಾ ನದಿಗೆ ನೀರು ಹರಿಬಿಡಲಾಗುತ್ತದೆ. ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಅಲ್ಲಿನ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿರಬೇಕು. ಸೇತುವೆ ಮುಳಗಡೆ ಭೀತಿಯಿದ್ದಲ್ಲಿ ರಸ್ತೆ ಸಂಪರ್ಕ ಸ್ಥಗಿತಗೊಳಿಸಿ, ಜನರು ಸಂಚಾರ ಮಾಡದಂತೆ ತಡೆಗಟ್ಟಬೇಕು. ಪೊಲೀಸರು, ಗೃಹ ರಕ್ಷಕ ಸಿಬ್ಬಂದಿಯನ್ನು ಸೇತುವೆಗಳಿಗೆ ಮುನ್ನೆಚ್ಚರಿಕೆಯಾಗಿ ನಿಯೋಜಿಸಬೇಕು ಎಂದರು.

ನದಿ ದಂಡೆಯಲ್ಲಿ ವಾಸಿಸುವ ಜನರ ಸ್ಥಳಾಂತರಕ್ಕೂ ನೀಲನಕ್ಷೆ ಸಿದ್ಧಪಡಿಸಿ. ಕಲಬುರಗಿ ನಗರದಲ್ಲಿ ಮಳೆಯಿಂದ ಮನೆಗೆ ನೀರು ನುಗ್ಗುವುದು, ರಸ್ತೆ ಸಂಚಾರ ಬಂದ್​, ಗಿಡ ಮರಗಳು ಉರುಳುವುದು ಸಾಮಾನ್ಯ. ಇಂತಹ ಸಮಸ್ಯೆಗಳ ಪರಿಹಾರಕ್ಕೆ ಪ್ರತ್ಯೇಕ ತಂಡ ರೂಪಿಸಬೇಕು. ಸಹಾಯವಾಣಿ ಸ್ಥಾಪಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ತಿಳಿಸಿದರು.

ಪಾಲಿಕೆ ಆಯುಕ್ತ ಭುವನೇಶ ಕುಮಾರ ಪಾಟೀಲ ಮಾತನಾಡಿ, ಈಗಾಗಲೇ ನಗರದ 3 ವಲಯಗಳಿಗೆ ವಲಯ ಆಯುಕ್ತರ ನೇತೃತ್ವದಲ್ಲಿ ವಾರ್ಡ್‍ವಾರು ಅಧಿಕಾರಿಗಳ ತಂಡ ರಚಿಸಿದೆ. ಸಹಾಯವಾಣಿ ಸೆಂಟರ್ ಸ್ಥಾಪಿಸಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ 24 ಗಂಟೆಯಲ್ಲಿಯೇ ಪರಿಹಾರ ನೀಡುವಂತಹ ಕೆಲಸ ಪಾಲಿಕೆ ಮಾಡುತ್ತಿದೆ ಎಂದು ವಿವರ ನೀಡಿದರು.

ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ವಾಡಿಕೆಯಂತೆ 225 ಮಿ.ಮೀ ಮಳೆಯಾಗಬೇಕಿತ್ತು. 303 ಮಿ.ಮೀ. ಮಳೆಯಾಗಿದ್ದು, ಇದು ಶೇ.35 ರಷ್ಟು ಹೆಚ್ಚಳವಾಗಿದೆ. ವಾಡಿಕೆಗಿಂತ ಹೆಚ್ಚಿಗೆ ಮಳೆಯಾಗಿದ್ದರೂ ಯಾವುದೇ ಜಲಾಶಯಗಳು ಸಂಪೂರ್ಣವಾಗಿ ಭರ್ತಿಯಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಹ ಭೀತಿ ಇಲ್ಲ ಎಂದು ಜಿಲ್ಲಾಧಿಕಾರಿ ಬಿ. ಪೌಜಿಯಾ ತರನ್ನುಮ್ ತಿಳಿಸಿದರು.

283 ಮನೆಗಳಿಗೆ ಭಾಗಶಃ ಹಾನಿ: ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಕಲಬುರಗಿ, ಅಫಜಲಪೂರ, ಚಿತ್ತಾಪೂರ, ಶಹಾಬಾದ್​, ಕಾಳಗಿ ತಾಲೂಕಿನ ಭೀಮಾ, ಕಾಗಿಣಾ ನದಿ ದಡದಲ್ಲಿ ಪ್ರವಾಹಕ್ಕೆ ತುತ್ತಾಗುವ 159 ಗ್ರಾಮಗಳನ್ನು ಗುರುತಿಸಲಾಗಿದೆ. ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಜನ ಮತ್ತು ಜಾನುವಾರುಗಳ ಸ್ಥಳಾಂತರ ಸೇರಿದಂತೆ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲು 27 ಜನ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಜವಾಬ್ದಾರಿ ನೀಡಲಾಗಿದೆ. ಮಳೆಯಿಂದ ಜಿಲ್ಲೆಯಲ್ಲಿ 283 ಮನೆಗಳು ಭಾಗಶಃ ಹಾನಿಯಾಗಿವೆ. ಒಂದು ಮಾನವ ಹಾನಿಯಾಗಿದ್ದು, ಪ್ರಾಣಿ ಹಾನಿ ಕುರಿತು ಯಾವುದೇ ವರದಿಯಾಗಿಲ್ಲ. ಮಳೆಯಿಂದ ಉರುಳಿದ 281 ವಿದ್ಯುತ್ ಕಂಬ, 35 ಟ್ರಾನ್ಸ್​ಫಾರ್ಮರ್​ಗಳನ್ನು ಬದಲಾಯಿಸಲಾಗಿದೆ. ವಿಪತ್ತು ನಿರ್ವಹಣೆ ಕಾರ್ಯಕ್ಕೆ ಯಾವುದೇ ಅನುದಾನ ಕೊರತೆಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಡಿಸಿ ಮಾಹಿತಿ ನೀಡಿದರು.

ಇದನ್ನೂ ಓದಿ :Uttara Kannada Rain: ಜೋಯಿಡಾದಲ್ಲಿ ವ್ಯಕ್ತಿಯ ಶವ ಸಾಗಾಟಕ್ಕೆ ಪರದಾಟ; ಕಂಬಳಿ ಜೋಲಿಯಲ್ಲಿ ರೋಗಿಯ ಸಂಕಟ

5.10 ಲಕ್ಷ ಹೆಕ್ಟೇರ್ ಬಿತ್ತನೆ: ಜಂಟಿ ನಿರ್ದೇಶಕ ಸಮದ್ ಪಟೇಲ್ ಕೃಷಿ ಕುರಿತಾಗಿ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 8.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಇದುವರೆಗೆ 5.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಉಳಿದಂತೆ ಬೀಜ, ರಸಗೊಬ್ಬರ ಕೊರತೆ ಇಲ್ಲ ಎಂದು ಸಭೆಗೆ ಮಾಹಿತಿ ನೀಡಿದರು. ಸೊನ್ನ ಬ್ಯಾರೇಜ್ ಶೇ.33ರಷ್ಟು ಮಾತ್ರ ಭರ್ತಿಯಾಗಿದೆ ಎಂದು ಎಇಇ ಸಂತೋಷ್​ ಕುಮಾರ್​ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಭಂವಾರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಮಮತಾ ಕುಮಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕಿನ ತಹಶೀಲ್ದಾರರು ಉಪಸ್ಥಿತರಿದ್ದರು.

ABOUT THE AUTHOR

...view details