ಕರ್ನಾಟಕ

karnataka

By

Published : Jul 16, 2022, 8:27 PM IST

ETV Bharat / state

ಎರಡೇ ವರ್ಷದಲ್ಲಿ ಅಣ್ಣ-ತಮ್ಮನ ಕೊಂದ ಪಾತಕಿಯ ಹೆಡೆಮುರಿ ಕಟ್ಟಿದ ಪೊಲೀಸರು: ಪಿಎಸ್​ಐ ಮೇಲೆ ದಾಳಿ ಮಾಡಿ ಗುಂಡೇಟು ತಿಂದ!

ಕಲಬುರಗಿ ಜಿಲ್ಲೆಯ ಕಾಂಗ್ರೆಸ್ ಮುಖಂಡ ಗಿರೀಶ ಕಂಬನೂರ್ ಕೊಲೆ ಪ್ರಕರಣದ ಸಂಬಂಧ ಸ್ಥಳ ಮಹಜರು ಮಾಡಲು ಹೋದಾಗ ಶಹಾಬಾದ್ ಪಿಎಸ್‌ಐ ಸುವರ್ಣಾ ಮೇಲೆ ಆರೋಪಿ ವಿಜಯ ಹಳ್ಳಿ ಮಚ್ಚಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದ. ಈ ವೇಳೆ ಚಿತ್ತಾಪುರ ಸಿಪಿಐ ಪ್ರಕಾಶ ಯಾತನೂರು ಅವರು ಹಂತಕನಿಗೆ ಗುಂಡೇಟು ನೀಡಿದ್ದಾರೆ.

kalaburagi-police-arrested-an-accused-who-killed-two-brothers-in-last-two-years
ಎರಡೇ ವರ್ಷದಲ್ಲಿ ಅಣ್ಣ-ತಮ್ಮನ ಕೊಂದ ಪಾತಕಿಯ ಹೆಡೆಮುರಿ ಕಟ್ಟಿದ ಪೊಲೀಸರು: ಪಿಎಸ್​ಐ ಮೇಲೆ ದಾಳಿ ಮಾಡಿ ಗುಂಡೇಟು ತಿಂದ!

ಕಲಬುರಗಿ: ಎರಡೇ ವರ್ಷದ ಅಂತರದಲ್ಲಿ ಅಣ್ಣ ಮತ್ತು ತಮ್ಮನನ್ನು ಕೊಲೆ ಮಾಡಿದ ಆರೋಪಿಯನ್ನು ಕಲಬುರಗಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆದರೆ, ಈ ಪಾತಕಿ ಪೊಲೀಸರು ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿ ಗುಂಡೇಟು ತಿಂದಿದ್ದಾನೆ. ಹೌದು, ಕಲಬುರಗಿ ಜಿಲ್ಲೆಯ ಶಹಾಬಾದ್ ಪಟ್ಟಣದಲ್ಲಿ ಕಳೆದ ವಾರ ನಡೆದ ಕಾಂಗ್ರೆಸ್ ಮುಖಂಡ ಗಿರೀಶ ಕಂಬನೂರ್ ಕೊಲೆಯ ಪ್ರಮುಖ ಆರೋಪಿ ವಿಜಯ ಹಳ್ಳಿ ಎಂಬಾತನ ಬಲಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಹಾಡಹಗಲೇ ಜನನಿಬಿಡ ಪ್ರದೇಶದ ನಡುರಸ್ತೆಯಲ್ಲಿ ತಲವಾರ್‌ ಜಳಪಿಸಿ ಭೀಕರವಾಗಿ ಹತ್ಯೆಗೈದು ಜನ ಬೆಚ್ಚಿ ಬೀಳುವಂತೆ‌ ಮಾಡಿದ್ದ ಬಂಧಿತ ಆರೋಪಿಯನ್ನು ಸ್ಥಳ ಮಹಜರು ಮಾಡಲು ಇಂದು ಪೊಲೀಸರು ಕರೆದುಕೊಂಡು ಹೋಗಿದ್ದರು‌. ಈ ವೇಳೆ ಕಿರಾತಕ ತಾನು ಬಿಸಾಡಿದ್ದ ಮಚ್ಚು ತೋರಿಸುವ ನೆಪದಲ್ಲಿ ಲೇಡಿ ಪಿಎಸ್‌ಐ ಮೇಲೆಯೇ ಹಲ್ಲೆ ಮಾಡಿ ಎಸ್ಕೇಪ್ ಆಗುವಾಗ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿದ್ದಾರೆ. ಗುಂಡೇಟು ತಿಂದು ಆರೋಪಿ ವಿಜಯಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆರೋಪಿಯಿಂದ ಹಲ್ಲೆಗೊಳಗಾದ ಪಿಎಸ್ಐ ಸುವರ್ಣಾ ಅವರನ್ನು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಏನಿದು ಪ್ರಕರಣ?:ಜುಲೈ 11ರಂದು ಶಹಾಬಾದ್ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಹಾಡಹಗಲೇ ಹಾಲಿ ಅಧ್ಯಕ್ಷೆಯ ಪತಿ ಹಾಗೂ ಮಾಜಿ ನಗರಸಭೆ ಅಧ್ಯಕ್ಷರಾದ ಕಾಂಗ್ರೆಸ್ ಮುಖಂಡ ಗಿರೀಶ್ ಕಂಬನೂರ ಅವರ ಬರ್ಬರ ಹತ್ಯೆ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾದ ವಿಜಯ ಹಳ್ಳಿಯನ್ನು ಪೊಲೀಸರು ಬಂಧಿಸಿದ್ದರು.

ಎರಡೇ ವರ್ಷದಲ್ಲಿ ಅಣ್ಣ-ತಮ್ಮನ ಕೊಂದ ಪಾತಕಿಯ ಹೆಡೆಮುರಿ ಕಟ್ಟಿದ ಪೊಲೀಸರು: ಪಿಎಸ್​ಐ ಮೇಲೆ ದಾಳಿ ಮಾಡಿ ಗುಂಡೇಟು ತಿಂದ!

ಇಂದು ಘಟನಾ ಸ್ಥಳ ಮಹಜರು ಮಾಡಲು ಶಹಾಬಾದ್ ಪಿಎಸ್‌ಐ ಸುವರ್ಣಾ ಮತ್ತು ಚಿತ್ತಾಪುರ ಸಿಪಿಐ ಪ್ರಕಾಶ ಯಾತನೂರು ಕಲಬುರಗಿ ಹೊರವಲಯದ ತೊನಸನಹಳ್ಳಿ ಗ್ರಾಮದ ಬಳಿ ಕರೆದುಕೊಂಡು ಹೋಗಿದ್ದರು. ಈ ವೇಳೆ ಆರೋಪಿ ವಿಜಯ, ತಾನು ಬಿಸಾಕಿದ್ದ ಮಚ್ಚನ್ನು ತೋರಿಸುವ ವೇಳೆ ಪಿಎಸ್‌ಐ ಸುವರ್ಣಾ ಮೇಲೆ ಅದೇ ಮಚ್ಚಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ.

ಇದನ್ನೂ ಓದಿ:ಹಾಡಹಗಲೇ ನಗರಸಭೆ ಅಧ್ಯಕ್ಷೆಯ ಪತಿ ಹತ್ಯೆ: ಕೈ ಮುಖಂಡನ ಭೀಕರ ಕೊಲೆಗೆ ಬೆಚ್ಚಿದ ಕಲಬುರಗಿ

ಆಗ ತಕ್ಷಣವೇ ಅಲರ್ಟ್ ಆದ ಚಿತ್ತಾಪುರ ಸಿಪಿಐ ಪ್ರಕಾಶ್ ಯಾತನೂರ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಆರೋಪಿಗೆ ಶರಣಾಗುವಂತೆ ವಾರ್ನ್​ ಮಾಡಿದ್ದಾರೆ. ಆದರೂ, ಆರೋಪಿ ವಿಜಯ ಪಿಎಸ್ಐ ಮೇಲೆ ಪುನಃ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಸಿಪಿಐ ಯಾತನೂರ ಅವರು ಆರೋಪಿ ಬಲಗಾಲಿಗೆ ಫೈರಿಂಗ್ ಮಾಡಿದ್ದಾರೆ‌. ಇದರಿಂದ ಸ್ಥಳದಲ್ಲೇ ವಿಜಯ ಕುಸಿದು ಬಿದ್ದಿದ್ದಾನೆ.

ಅಣ್ಣ-ತಮ್ಮನ ಕೊಲೆ:ಕೊಲೆಯಾದ ಗಿರೀಶ್ ಕಂಬನೂರ ಮತ್ತು ಆರೋಪಿ ವಿಜಯ ಹಳ್ಳಿ ಮಧ್ಯೆ ಕಳೆದ ಹಲವು ವರ್ಷಗಳಿಂದ ಯುವತಿ ವಿಚಾರಕ್ಕೆ ಸಂಬಂಧಿಸಿದಂತೆ ವೈಷಮ್ಯ ಬೆಳೆದಿತ್ತು. ಅಲ್ಲದೇ, 2020ರಲ್ಲಿ ಗಿರೀಶ್ ಕಂಬನೂರ ಸಹೋದರ ಸತೀಶ್ ಕಂಬನೂರನನ್ನ ಇದೇ ವಿಜಯ ಹಳ್ಳಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದ.

ಸತೀಶ್ ಹತ್ಯೆ ನಂತರ ಜೈಲು ಪಾಲಾಗಿ ನಂತರ ಬೇಲ್ ಮೇಲೆ ಹೊರಬಂದಿದ್ದ ವಿಜಯ, ಗಿರೀಶ್‌ನನ್ನ ಸಹ ಮುಗಿಸಲು ಮುಹೂರ್ತ ಫಿಕ್ಸ್ ಮಾಡಿದ್ದ. ಅಂತೆಯೇ ಜುಲೈ 11ರಂದು ಬೆಂಗಳೂರಿಗೆ ತೆರಳಲು ಅಂತಾ ಶಹಬಾದ್ ರೈಲ್ವೆ ನಿಲ್ದಾಣಕ್ಕೆ ಟಿಕೆಟ್ ತರಲು ಹೋಗಿದ್ದ ಗಿರೀಶ್ ಕಂಬನೂರ ಮೇಲೆ ವಿಜಯ ಸೇರಿದಂತೆ ನಾಲ್ಕೈದು ಜನರ ತಂಡ ಹಾಡಹಗಲೇ ತಲವಾರ್‌ ಮತ್ತು ಮಚ್ಚಿನಿಂದ ಮನಬಂದಂತೆ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದರು. ಕೂಡಲೇ ಕಾರ್ಯಪ್ರವೃತರಾಗಿದ್ದ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು.

ಹಂತಕನ ವಿರುದ್ಧ ಆರು ಕೇಸ್​ಗಳು​:ಗಿರೀಶ ಕಂಬನೂರ್ ಹತ್ಯೆ ಸಂಬಂಧ ಸ್ಥಳ ಮಹಜರು ಮಾಡಲು ಹೋದಾಗ ಹಂತಕ ವಿಜಯ ಹಳ್ಳಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾನೆ. ಈಗ ನಮ್ಮ ಸಿಬ್ಬಂದಿ ತಮ್ಮ ಆತ್ಮರಕ್ಷಣೆಗಾಗಿ ಎರಡು ಬಾರಿ ಗುಂಡಿನ ದಾಳಿ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಇಶಾ ಪಂತ್​ ತಿಳಿಸಿದ್ದಾರೆ.

ಅಲ್ಲದೇ, ಆರೋಪಿ ಮೇಲೆ ಇದುವರೆಗೆ ಒಟ್ಟಾರೆ ಆರು ಪ್ರಕರಣಗಳು ದಾಖಲಾಗಿವೆ. ಈಗ ಗಿರೀಶ್ ಕಂಬನೂರ ಹತ್ಯೆಯಂತೆ 2020ರಲ್ಲಿ ಅಣ್ಣ ಸತೀಶ್ ಕಂಬನೂರನನ್ನೂ ಕೊಲೆ ಮಾಡಿದ್ದ. ಜೊತೆಗೆ ಈ ಹಿಂದೆ ಜೈಲಿನಲ್ಲಿದ್ದುಕೊಂಡೇ ಕಂಬನೂರು ಕುಟುಂಬದವರೆಗೆ ಬೆದರಿಕೆ ಹಾಕಿದ್ದ. ಗಿರೀಶ್ ಹಾಗೂ ಅಣ್ಣ ಸತೀಶ್ ಎರಡೂ ಹತ್ಯೆಗಳನ್ನು ಒಂದೇ ರೀತಿಯಾಗಿ ಮಾಡಿದ್ದು, ಜನರಿಗೆ ಭಯ ಬರಬೇಕೆಂಬ ಉದ್ದೇಶದಿಂದ ಕೊಲೆಯ ನಂತರ ಸ್ಥಳದಲ್ಲೇ ಮಾರಕಾಸ್ತ್ರಗಳನ್ನು ಬಿಟ್ಟು ಹೋಗುತ್ತಿದ್ದ ಎಂದು ಎಸ್​ಪಿ ವಿವರಿಸಿದ್ದಾರೆ.

ಇದನ್ನೂ ಓದಿ:ಎರಡು ಬೈಕ್‌ಗಳ ನಡುವೆ ಭೀಕರ ರಸ್ತೆ ಅಪಘಾತ: ರಸ್ತೆಯಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದ ಮೂರು ದೇಹಗಳು!

ABOUT THE AUTHOR

...view details