ಕರ್ನಾಟಕ

karnataka

By

Published : Mar 12, 2020, 11:47 PM IST

ETV Bharat / state

ಕೊರೊನಾಗೆ ಕಲಬುರಗಿ ವೃದ್ಧ ಬಲಿ: ಕುಟುಂಬಸ್ಥರು ಮತ್ತು ವ್ಯಕ್ತಿ ಭೇಟಿಯಾದ 30 ಜನರ ಆರೋಗ್ಯ ತಪಾಸಣೆ

ಕೊರೊನಾ ಸೋಂಕಿನಿಂದ ಕಲಬುರಗಿಯ ವ್ಯಕ್ತಿ ಮೃತಪಟ್ಟ ಹಿನ್ನೆಲೆ ಆತನ ಕುಟುಂಬಸ್ಥರು ಮತ್ತು ಆತನನ್ನು ಭೇಟಿಯಾದ ವ್ಯಕ್ತಿಗಳ ಆರೋಗ್ಯ ತಪಾಸಣೆ ನಡೆಸಿ, ನಿಗಾ ವಹಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

Kalaburagi man died by corona
ಜಿಲ್ಲಾಧಿಕಾರಿ ಬಿ. ಶರತ್

ಕಲಬುರಗಿ: ಎರಡು ದಿನದ ಹಿಂದೆ ನಗರದಲ್ಲಿ ಸಾವನ್ನಪ್ಪಿದ್ದ ವೃದ್ಧನಿಗೆ ಕೊರೊನಾ ವೈರಸ್ ಸೋಂಕು ಇತ್ತು ಎಂದು ಜಿಲ್ಲಾಧಿಕಾರಿ ಬಿ. ಶರತ್ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆ ಆ ವ್ಯಕ್ತಿಯ 8 ಜನ ಕುಟುಂಬಸ್ಥರು ಮತ್ತು ಆ ವ್ಯಕ್ತಿಯನ್ನು ಭೇಟಿ ಮಾಡಿದ್ದ ಸುಮಾರು 30 ಜನರ ಆರೋಗ್ಯ ತಪಾಸಣೆ ನಡೆಸಿ, ನಿಗಾ ವಹಿಸಲಾಗಿದೆ.

ಕಲಬುರಗಿ ಮೊಮಿನಪೂರ ಬಡಾವಣೆಯ ನಿವಾಸಿ ಮಹಮ್ಮದ್ ಹುಸ್ಸೇನ್ ಸಿದ್ದಿಕಿ (76) ಕೊರೊನಾ ವೈರಸ್​​ನಿಂದಲೇ ಮೃತಪಟ್ಟಿದ್ದಾರೆ. ಎರಡು ದಿನದ ಹಿಂದೆ ಮೃತಪಟ್ಟ ಸಿದ್ದಕಿ ಕೊರೊನಾ ರೋಗದಿಂದಲೇ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿತ್ತು. ಆದ್ರೆ ಇದೀಗ ಲ್ಯಾಬ್​​ ವರದಿ ಬಂದಿದ್ದು, ವೃದ್ಧ ಕೊರೊನಾಗೆ ಬಲಿಯಾಗಿರುವುದು ದೃಢಪಟ್ಟಿದೆ.

ಜನವರಿ 29 ರಂದು ಸೌದಿ ಅರೇಬಿಯಾಕ್ಕೆ ಯಾತ್ರೆಗೆ ತೆರಳಿದ್ದ ಮಹಮ್ಮದ್ ಹುಸೇನ್ ಸಿದ್ದಿಕಿ ಒಂದು ತಿಂಗಳ ನಂತರ ಫೆ. 29 ರಂದು ಹೈದ್ರಾಬಾದ ಮೂಲಕ ಕಲಬುರಗಿಗೆ ಆಗಮಿಸಿದ್ದರು. ಬಳಿಕ ಮಾರ್ಚ್ 5 ರಂದು ಜ್ವರ, ಕೆಮ್ಮು, ಧಮ್ಮಿನಿಂದ ಬಳಲಿದ ಕಾರಣ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಾರ್ಚ್ 8 ರಂದು ಸಿದ್ದಿಕಿ ಅವರ ಗಂಟಲು ದ್ರವ ಸಂಗ್ರಹಿಸಿ ತಪಾಸಣೆಗಾಗಿ ಬೆಂಗಳೂರು ಲ್ಯಾಬ್​​ಗೆ ಕಳಿಸಿದ್ದರು.

ಆದ್ರೆ ಮಾರ್ಚ್ 9 ಸಿದ್ದಿಕಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಕಲಬುರಗಿಯಿಂದ ಹೈದ್ರಾಬಾದ್​ನ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ದಾಖಲಿಸಿಕೊಳ್ಳಲಿಲ್ಲ ಎನ್ನಲಾಗ್ತಿದೆ. ಈ ಹಿನ್ನೆಲೆ ಮರಳಿ ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ತರುವಷ್ಟರಲ್ಲಿ ರಾತ್ರಿ 11 ಗಂಟೆಗೆ ಪ್ರಾಣಪಕ್ಷಿ ಹಾರಿಹೋಗಿತ್ತು. ಬಳಿಕ ಜಿಲ್ಲಾ ಆರೋಗ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ವೃದ್ಧನ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.

ABOUT THE AUTHOR

...view details