ಕರ್ನಾಟಕ

karnataka

By ETV Bharat Karnataka Team

Published : Nov 14, 2023, 10:22 AM IST

Updated : Nov 14, 2023, 12:41 PM IST

ETV Bharat / state

ಅನಾಥ ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ಕಲಬುರಗಿ ಜಿಲ್ಲಾಧಿಕಾರಿ

DC Deepavali celebration with orphans: ಲಕ್ಷ್ಮೀ ಪೂಜೆಯಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಅವರು ಮಕ್ಕಳೊಂದಿಗೆ ಮಕ್ಕಳಾಗಿ ಸೆಲ್ಫಿಗೆ ಪೋಸ್​ ನೀಡಿದರು.

Kalaburagi DC celebrated Deepavali with orphans
ಅನಾಥ ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ಕಲಬುರಗಿ ಜಿಲ್ಲಾಧಿಕಾರಿ

ಅನಾಥ ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ಕಲಬುರಗಿ ಜಿಲ್ಲಾಧಿಕಾರಿ

ಕಲಬುರಗಿ:ದೀಪಾವಳಿ ಬಂತೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ, ಅಪ್ಪ, ಅಮ್ಮ, ಅಜ್ಜ, ಅಜ್ಜಿ ಹೀಗೆ ಕುಟುಂಬ ಸದಸ್ಯರೊಂದಿಗೆ ಖುಷಿ‌ಯಿಂದ ದೀಪ ಬೆಳಗಿಸಿ ಸಿಹಿ ತಿಂದು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಆದರೆ ಹೆತ್ತವರು ಯಾರು ಅನ್ನೋದೇ ಗೊತ್ತಿರದ ಅನಾಥ ಮಕ್ಕಳ ಪಾಲಿಗೆ ಜಿಲ್ಲಾಡಳಿತವೇ ತಾಯಿಯಾಗಿ ನಿಂತು ದೀಪಾವಳಿ ಹಬ್ಬದ ಸಂಭ್ರಮ ನೀಡಿದೆ. ಮಾತೃ ಹೃದಯಿ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಹಾಗೂ ಮಹಿಳಾ ಅಧಿಕಾರಿಗಳ ತಂಡದವರು ಮಕ್ಕಳೊಂದಿಗೆ ಹಬ್ಬದ ದಿನ ಅಮೂಲ್ಯವಾದ ಸಮಯ ಕಳೆದು ಅವರೊಟ್ಟಿಗೆ ದೀಪ ಬೆಳಗಿಸಿ, ಪಟಾಕಿ ಸಿಡಿಸಿ, ಸಿಹಿ ತಿಂದು ಕುಣಿದು ಕುಪ್ಪಳಿಸಿ ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸಿದ್ದಾರೆ.

ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರ ನೇತೃತ್ವದಲ್ಲಿ ಮಹಿಳಾ ಅಧಿಕಾರಿಗಳ ತಂಡ ಸೋಮವಾರ ನಗರದ ಸರ್ಕಾರಿ ಬಾಲಕಿಯರ ಬಾಲ‌ ಮಂದಿರದಲ್ಲಿ ಸಂಜೆ ಅನಾಥ ಮಕ್ಕಳೊಂದಿಗೆ ದೀಪಾವಳಿ ಹಬ್ಬ ಆಚರಿಸಿತು. ಮಹಿಳಾ ನಿಲಯದ‌ ನಿಲಯಾರ್ಥಿಗಳು, ಅಮೂಲ್ಯ ಶಿಶು ಗೃಹದ ಪುಟ್ಟ ಮಕ್ಕಳು, ಬಾಲಕಿಯರ ಬಾಲ ಮಂದಿರದ ಮಕ್ಕಳು ಹಾಗೂ ವಿಶೇಷ ಚೇತನ ಮಕ್ಕಳಿಗೆ ಡಿಸಿ ಬಿ. ಫೌಜಿಯಾ ತರನ್ನುಮ್ ಅವರು ಸಿಹಿ ವಿತರಿಸಿ ಹಬ್ಬದ ಶುಭಾಶಯ ಕೋರಿದರು. ಲಕ್ಷ್ಮೀ ಪೂಜೆಯಲ್ಲೂ ಡಿಸಿ ಭಾಗಿಯಾಗಿದ್ದರು. ನಂತರ ಮಕ್ಕಳೊಂದಿಗೆ ಕೆಲ ಹೊತ್ತು ಅವರಲ್ಲೊಬ್ಬರಾಗಿ ಬೆರೆತು ಸೆಲ್ಫಿಗೆ, ಗ್ರೂಪ್ ಫೋಟೋಗಳಿಗೆ ಪೋಸ್ ನೀಡಿದರು. ಮಕ್ಕಳೊಂದಿಗೆ ಸೇರಿ ಹಸಿರು ಪಟಾಕಿ ಹಚ್ಚಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.

ಜಿಲ್ಲಾಧಿಕಾರಿ‌‌ ಹಾಗೂ ತಂಡ ತಮ್ಮೊಂದಿಗೆ ದೀಪಾವಳಿ ಆಚರಿಸಲು‌ ಬಂದಿರುವ ವಿಷಯ ಗೊತ್ತಾಗುತ್ತಿದ್ದಂತೆ ಅನಾಥ ಮಕ್ಕಳಲ್ಲಿ ಎಲ್ಲಿಲ್ಲದ‌ ಸಂಭ್ರಮ ಮನೆ ಮಾಡಿತ್ತು. ಅಧಿಕಾರಿಗಳಿಗೆ ಅನಾಥ ಮಕ್ಕಳು ಡೊಳ್ಳು ಬಾರಿಸಿ, ಹಣತೆ ದೀಪ ನೀಡುವ ಮೂಲಕ ಭವ್ಯವಾದ ಸ್ವಾಗತ ಕೋರಿದರು. ಇದೇ ಸಂದರ್ಭದಲ್ಲಿ 100ಕ್ಕೂ ಹೆಚ್ಚು ದೀಪ ಹಚ್ಚುವ ಮೂಲಕ ಸರಳ ದೀಪಾವಳಿ ಜೊತೆಗೆ ಪರಿಸರ ಸಂರಕ್ಷಣೆ ಸಂದೇಶ ಸಾರಲಾಯಿತು. ಪಾಸಿಂಗ್ ಬಾಲ್ ಆಟ, ಹಾಡು, ಕುಣಿತದಲ್ಲಿ ಮಕ್ಕಳ ಸಂಭ್ರಮ ಕಳೆಗಟ್ಟಿತ್ತು.

ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಸಹಾಯಕ ಆಯುಕ್ತೆ ಮಮತಾ ಕುಮಾರಿ, ತಹಶೀಲ್ದಾರ ನಾಗಮ್ಮ ಕಟ್ಟಿಮನಿ ಅವರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಅನಾಥ ಮಕ್ಕಳ ಬಾಳಲ್ಲಿ‌ ಮಾತೃ ಹೃದಯಿ ಮಹಿಳಾ ಅಧಿಕಾರಿಗಳು ಬೆಳಕು ತುಂಬಿದ್ದು ಮಾತ್ರ ನಿಜಕ್ಕೂ ಅಸ್ಮರಣಿಯವಾಗಿದೆ. ಒಟ್ಟಿನಲ್ಲಿ ಖುದ್ದು ಪಾಲಕರು, ಕುಟುಂಬದೊಂದಿಗೆ ಹಬ್ಬ ಸಂಭ್ರಮಾಚರಣೆ ಮಾಡಿದ ಭಾವನೆ ಮಕ್ಕಳ ಮುಖದಲ್ಲಿ ಕಂಡುಬಂತು.

ಇದನ್ನೂ ಓದಿ:ಶಿವಮೊಗ್ಗ : ಮೊಬೈಲ್​ ಅಂಗಡಿಯಲ್ಲಿ ಲಕ್ಷ್ಮೀ ಪೂಜೆ ಮಾಡಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕ

Last Updated : Nov 14, 2023, 12:41 PM IST

ABOUT THE AUTHOR

...view details