ಕಲಬುರಗಿ: ಇಷ್ಟು ದಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆ ಸಿಗುತ್ತಿತ್ತು. ಆದರೆ ಕಳೆದ ಎರಡು ತಿಂಗಳಿಂದ ಡಯಾಲಿಸಿಸ್ ಮಾಡಿಸಿಕೊಳ್ಳಲು ರೋಗಿಗಳು ಪರದಾಡುತ್ತಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳು ತಮ್ಮ ಜೀವಿತಾವಧಿವರೆಗೆ ಡಯಾಲಿಸಿಸ್ (ರಕ್ತ ಶುದ್ಧೀಕರಣ) ಮಾಡಿಸಿಕೊಳ್ಳಬೇಕು. ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ಈ ಚಿಕಿತ್ಸೆ ಪಡೆಯಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಬಾರಿ ರಕ್ತ ಶುದ್ಧೀಕರಣಕ್ಕೆ 5 ಸಾವಿರ ರೂಪಾಯಿ ತಗಲುತ್ತದೆ. ಅಂದ್ರೆ ತಿಂಗಳಿಗೆ 40 ಸಾವಿರ ರೂಪಾಯಿ ಖರ್ಚು ಮಾಡಬೇಕು. ಇಷ್ಟೊಂದು ಹಣ ಖರ್ಚು ಮಾಡಲು ಆಗದ ಬಡವರಿಗಾಗಿ ಸರ್ಕಾರ ಮತ್ತು ಬಿಆರ್ ಎಸ್ ಹೆಲ್ತ್ & ರಿಸರ್ಚ್ ಇನ್ಸ್ಟಿಟ್ಯೂಟ್ ಸಹಯೋಗದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಂಪೂರ್ಣವಾಗಿ ಉಚಿತವಾಗಿ ಡಯಾಲಿಸಸ್ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸರ್ಕಾರ ಬಿಆರ್ ಎಸ್ ಸಂಸ್ಥೆಗೆ ಹಣ ಸಂದಾಯ ಮಾಡಿಲ್ಲವಂತೆ. ಹೀಗಾಗಿ ಡಯಾಲಿಸಿಸ್ಗೆ ತಗಲುವ ಕಿಟ್ ಸರಬರಾಜು ಆಗುತ್ತಿಲ್ಲ. ಇದರಿಂದ ಡಯಾಲಿಸಿಸ್ ಮಾಡಲು ಬೇಕಾಗುವ ಡಯಾಲಸರ್, ಟ್ಯೂಬಿಂಗ್, ಎನ್ ಎಸ್, ಇಂಜೆಕ್ಷನ್ ಸೇರಿದಂತೆ ಹಲವು ಡಯಾಲಿಸಿಸ್ ಕಿಟ್ ಗಳನ್ನ ಹೊರಗಡೆಯಿಂದ ಖರೀದಿಸಿ ತರುವ ಸ್ಥಿತಿ ರೋಗಿಗಳಿಗೆ ಬಂದೊದಗಿದೆ.
ಒಂದು ಬಾರಿ ಡಯಾಲಿಸಿಸ್ ಮಾಡಿಸಲು ಕಿಟ್ ಗೆ 1500 ರಿಂದ 2000 ಸಾವಿರ ಹಣ ಖರ್ಚಾಗುತ್ತಿದೆ. ಅಲ್ಲದೆ ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಿಸಬೇಕು. ಹೀಗಾಗಿ ಸರ್ಕಾರಿ ಆಸ್ಪತ್ರೆಯಾದ್ರೂ ತಿಂಗಳಿಗೆ ಸುಮಾರು 15 ರಿಂದ 20 ಸಾವಿರ ಹಣ ಖರ್ಚು ಮಾಡಲೇಬೇಕು. ಜೀವ ಉಳಿಸಿಕೊಳ್ಳಲು ಸಾಲ ಮಾಡಿ ಚಿಕಿತ್ಸೆ ಪಡೆಯುತ್ತಿರುವ ಬಡ ರೋಗಿಗಳ ಗೋಳು ಹೇಳತೀರದ್ದಾಗಿದೆ.