ಸೇಡಂ:ತಾಲೂಕು ಆಡಳಿತದ ವೈಫಲ್ಯದಿಂದಾಗಿ ರೆಹಮತನಗರ ಬಡಾವಣೆಯ ಬಾಲಕನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ ತಹಶೀಲ್ದಾರ್ ಮತ್ತು ಪುರಸಭೆ ಮುಖ್ಯಾಧಿಕಾರಿಯನ್ನು ಅಮಾನತು ಮಾಡಬೇಕೆಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಒತ್ತಾಯಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೇಡಂಗೆ ಕೊರೊನಾ ಬಂದಿದೆ: ಶರಣಪ್ರಕಾಶ ಪಾಟೀಲ ಆರೋಪ - kalburgi news
ಬಿಜೆಪಿ ಮುಖಂಡನ ರಾಜಕೀಯ ಒತ್ತಡಕ್ಕೆ ಮಣಿದು ಕೊರೊನಾ ಸೋಂಕಿತ ಕುಟುಂಬಸ್ಥರನ್ನು ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡದೆ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ದೂರಿದರು.
![ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೇಡಂಗೆ ಕೊರೊನಾ ಬಂದಿದೆ: ಶರಣಪ್ರಕಾಶ ಪಾಟೀಲ ಆರೋಪ Ex minister dr. sharanabasappa patil](https://etvbharatimages.akamaized.net/etvbharat/prod-images/768-512-7366141-731-7366141-1590569485276.jpg)
ಕಾಂಗ್ರೇಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸೋಂಕು ದೃಢಪಟ್ಟ ಬಾಲಕನ ಕುಟುಂಬಸ್ಥರು ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಿಂದ ಬಂದು ಮನೆಯಲ್ಲಿ ತಂಗಿರುವ ಬಗ್ಗೆ ಹಲವಾರು ಬಾರಿ ಬಡಾವಣೆಯ ಜನ ತಹಶೀಲ್ದಾರ ಮತ್ತ ಪುರಸಭೆ ಮುಖ್ಯಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಆದರೆ ಬಿಜೆಪಿ ಮುಖಂಡನ ರಾಜಕೀಯ ಒತ್ತಡಕ್ಕೆ ಮಣಿದು ಸೋಂಕಿತ ಕುಟುಂಬಸ್ಥರನ್ನು ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡದೆ ಕರ್ತವ್ಯಲೋಪ ಎಸಗಿದ್ದಾರೆ ಎಂದು ದೂರಿದರು.
ಕೊರೊನಾ ಮಹಾಮಾರಿಯ ವಿಷಯದಲ್ಲೂ ರಾಜಕೀಯ ನಡೆಸಿರುವುದು ದುರ್ದೈವದ ಸಂಗತಿಯಾಗಿದೆ. ಇದರಲ್ಲಿ ಅಧಿಕಾರಿಗಳು ತಮ್ಮ ಕರ್ತವ್ಯ ಮರೆತಿರುವುದು ಖಂಡನೀಯ. ಕೂಡಲೇ ಉನ್ನತ ಮಟ್ಟದ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಬೇಕು. ತಹಶೀಲ್ದಾರ್ ಮತ್ತು ಪುರಸಭೆ ಮುಖ್ಯಾಧಿಕಾರಿಯನ್ನು ಅಮಾನತುಗೊಳಿಸಬೇಕು. ಜೊತೆಗೆ ಪ್ರಭಾವ ಬೀರಿದ ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.