ಕರ್ನಾಟಕ

karnataka

ETV Bharat / state

ಸ್ನೇಹಿತರೊಂದಿಗೆ ಸೇರಿ ಮನೆಗೆ ಕನ್ನ ಹಾಕಿದ ಚಾಲಕ: ಸಾರ್ವಜನಿಕರಿಂದ ಬರ್ಬರ ಹತ್ಯೆ

ಸ್ನೇಹಿತರೊಂದಿಗೆ ಸೇರಿ ಮನೆಗೆ ಕನ್ನ ಹಾಕಿ ದಾರಿಯಲ್ಲಿ ಮಹಿಳೆಯೋರ್ವರ ಚಿನ್ನದ ಸರ ಕಳವು ಮಾಡಿ ಎಸ್ಕೇಪ್ ಆಗುತ್ತಿದ್ದ ಚಾಲಕನನ್ನು ಸ್ಥಳೀಯರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

By

Published : Aug 19, 2022, 7:07 PM IST

Updated : Aug 19, 2022, 10:37 PM IST

ಸಚಿನ್
ಸಚಿನ್

ಕಲಬುರಗಿ:ಆತ ಟ್ರಾನ್ಸ್‌ಪೋರ್ಟ್‌ ಕಂಪನಿಯೊಂದರಲ್ಲಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ದೇಶದ ವಿವಿಧೆಡೆ ಗೂಡ್ಸ್‌ ಲೋಡ್, ಅನ್‌ಲೋಡ್ ಮಾಡಿ ಜೀವನ ಸಾಗಿಸುತ್ತಿದ್ದ. ಅದರಂತೆ ಅದೊಂದು ದಿನ ನೆರೆಯ ಆಂಧ್ರಕ್ಕೆ ತೆರಳಿ ವಾಪಸ್ ಬರುವಾಗ ಕಲಬುರಗಿ ನಗರದಲ್ಲಿ ತಂಗಿದ್ದಾನೆ. ದುರಾದೃಷ್ಟವಶಾತ್​ ಇದೇ ವ್ಯಕ್ತಿ ಬೆಳಗಾಗುವುದರೊಳಗೆ ಸ್ಥಳೀಯರಿಂದ ಹಲ್ಲೆಗೊಳಗಾಗಿ ಬರ್ಬರವಾಗಿ ಹತ್ಯೆಯಾಗಿದ್ದಾನೆ.

ಡ್ರೈವರ್ ಸಚಿನ್​ನನ್ನು ಹತ್ಯೆ ಮಾಡಿರುವ ಆರೋಪಿಗಳು

ಹತ್ಯೆಯಾಗಿರುವ ವ್ಯಕ್ತಿಯ ಹೆಸರು ಸಚಿನ್​. ಮೂಲತಃ ಮಹಾರಾಷ್ಟ್ರದ ಹಿಂಗೋಲಿ ಮೂಲದವನಾದ ಈತ ಟ್ರಾನ್ಸ್‌ಪೋರ್ಟ್‌ ಕಂಪನಿಯೊಂದರಲ್ಲಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಅದಕ್ಕಾಗಿ ಆಗಸ್ಟ್​ 12 ರಂದು ಮಹಾರಾಷ್ಟ್ರದಿಂದ ನೆರೆಯ ಆಂಧ್ರದ ಕಡಪ ನಗರಕ್ಕೆ ಹೋಗಿ ಗೂಡ್ಸ್ ಅನ್‌ಲೋಡ್ ಮಾಡಿ ಸ್ನೇಹಿತರಾದ ರವಿ ಮತ್ತು ನಾಗೇಶ್ ಜೊತೆ ಮರಳಿ ಹಿಂತಿರುಗುವಾಗ ರಾತ್ರಿಯಾಗಿದ್ದರಿಂದ ಕಲಬುರಗಿ ನಗರದಲ್ಲಿ ಲಾರಿ ಪಾರ್ಕ್ ಮಾಡಿದ್ದಾರೆ. ನಂತರ ಬಿದ್ದಾಪುರ ಕಾಲೋನಿಯಲ್ಲಿ ರಾತ್ರಿ ಹೊತ್ತಲ್ಲಿ ಸಚಿನ್​, ರವಿ ಮತ್ತು ನಾಗೇಶ್ ತಿರುಗಾಡಲು ಹೋಗಿದ್ದಾರೆ.

ಸಾರ್ವಜನಿಕರಿಂದ ಮನಬಂದಂತೆ ಥಳಿತ: ಈ ವೇಳೆ ಎರಡು ಮನೆಗೆ ಮೂರು ಜನ ಸೇರಿಕೊಂಡು ಕನ್ನ ಹಾಕಿದ್ದಾರೆ. ನಂತರ ದಾರಿಯಲ್ಲಿ ಹೋಗ್ತಿದ್ದ ಮಹಿಳೆಯೋರ್ವಳ ಚಿನ್ನದ ಸರ ಕಸಿದುಕೊಂಡು ಮೂರು ಜನ ಎಸ್ಕೇಪ್ ಆಗುವಾಗ ಸಾರ್ವಜನಿಕರು ಬೆನ್ನಟ್ಟಿದ್ದಾರೆ. ಈ ವೇಳೆ ಮೂವರ ಪೈಕಿ ಸಚಿನ್​ ಜನರ ಕೈಗೆ ಸಿಕ್ಕರೆ ಉಳಿದ ರವಿ ಮತ್ತು ನಾಗೇಶ್ ಪರಾರಿಯಾಗಿದ್ದಾರೆ. ಆಗ ಸಚಿನ್​ ಎಂಬಾತನನ್ನು ಸ್ಥಳೀಯರಾದ ವೀರಭದ್ರ ಹಣಗೋಜಿ, ಚಂದ್ರಕಾಂತ್ ರೆಡ್ಡಿ, ದೇವಾನಂದ್ ಹಣಗೋಜಿ, ಶರಣಬಸಪ್ಪ ಚೀಣಮಗೇರಿ ಮತ್ತು ಕೃಷ್ಣಾಜಿ ಸೇರಿಕೊಂಡು ಮನಬಂದಂತೆ ಥಳಿಸಿದ್ದಾರೆ. ಪರಿಣಾಮ ಸಚಿನ್​ ಮೃತಪಟ್ಟಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಡಾ ವೈ ಎಸ್ ರವಿಕುಮಾರ್ ತಿಳಿಸಿದ್ದಾರೆ.

ಸ್ಥಳೀಯರ ಕೈಯಿಂದ ಎಸ್ಕೇಪ್ ಆದ ಸ್ನೇಹಿತರು: ಸಾಮಾನ್ಯವಾಗಿ ಸಾರ್ವಜನಿಕರೇ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ. ಆದರೆ, ಕಲಬುರಗಿಯ ಜನ ಮಾತ್ರ ಕಾನೂನು ಕೈಗೆತ್ತಿಕೊಂಡು ಕಳ್ಳತನ ಮಾಡಿದ್ದ ಸಚಿನ್​ನನ್ನು ಪೊಲೀಸರಿಗೆ ಒಪ್ಪಿಸುವುದನ್ನು ಬಿಟ್ಟು ತಾವೇ ಶಿಕ್ಷೆ ನೀಡಿ ಕಂಬಿ ಹಿಂದೆ ಹೋಗಿದ್ದಾರೆ. ಇನ್ನು ಕೊಲೆಯಾದ ಸಚಿನ್​ ಹಿನ್ನೆಲೆಯ ಬಗ್ಗೆ ಕೂಡ ಸಬ್ ಅರ್ಬನ್ ಠಾಣೆ ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಘಟನೆಯಲ್ಲಿ ಸಚಿನ್​ ಸ್ನೇಹಿತರಿಬ್ಬರು ಸ್ಥಳೀಯರ ಕೈಯಿಂದ ಬಚಾವ್ ಆಗಿ ಮಹಾರಾಷ್ಟ್ರಕ್ಕೆ ಎಸ್ಕೇಪ್​ ಆಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಆರೋಪಿಗಳ ಬಂಧನ:ಇತ್ತ ಸಬ್ ಅರ್ಬನ್ ಠಾಣೆ ಪೊಲೀಸರು ಸಚಿನ್​ನ ಸ್ನೇಹಿತರಾದ ರವಿ ಮತ್ತು ನಾಗೇಶ್‌ನನ್ನು ಬಂಧಿಸಲು ಮಹಾರಾಷ್ಟ್ರಕ್ಕೆ ತೆರಳಿದ್ದಾರೆ. ಇತ್ತ ಕಳ್ಳತನ ಮಾಡಲು ಬಂದಿದ್ದ ಸಚಿನ್​​ನನ್ನು ಐವರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

Last Updated : Aug 19, 2022, 10:37 PM IST

ABOUT THE AUTHOR

...view details