ಕರ್ನಾಟಕ

karnataka

ETV Bharat / state

ಕಲಬುರಗಿ : ಕುಡಿಯುವ ನೀರಿನೊಂದಿಗೆ ಕಸಕಡ್ಡಿ, ಹುಳು ಫ್ರೀ : ಜನ ರೋಗಗ್ರಸ್ತರಾದ್ರೂ ಅಧಿಕಾರಿಗಳು ಡೋಂಟ್ ಕೇರ್!

ನಮಗೆ ಕಲುಷಿತ ನೀರು ಬೇಡ, ಶುದ್ದ ನೀರು ಕೊಡುವಂತೆ ಪಾಲಿಕೆ ಅಧಿಕಾರಿಗಳಿಗೆ ಆಗ್ರಹಿಸಿದ್ರು. ಕಾಂಗ್ರೆಸ್ ಕಾರ್ಯಕರ್ತರು ಪಾಲಿಕೆಗೆ ಮುತ್ತಿಗೆ ಹಾಕಿ ಒಳಪ್ರವೇಶಿಸಲು ಯತ್ನಿಸಿದ್ದು, ಈ ವೇಳೆ ಕೈ ಕಾರ್ಯಕರ್ತರು- ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಶುದ್ದ ನೀರು ಪೂರೈಸದೆ ಹೋದರೆ ರಸ್ತೆಗಿಳಿದು ಹೋರಾಟ ಮಾಡೋದಾಗಿ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು..

By

Published : Jun 17, 2022, 9:06 PM IST

ಕಸಕಡ್ಡಿ ಹುಳು
ಕಸಕಡ್ಡಿ ಹುಳು

ಕಲಬುರಗಿ :ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಜನರು ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ನಡುವೆ ಕಲಬುರಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ನಗರ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಎಚ್ಚೆತ್ತು ಕಸ-ಹುಳು ತುಂಬಿದ, ಪಾಚಿಗಟ್ಟಿದ ಕಲುಷಿತ ನೀರನ್ನು ನಗರಕ್ಕೆ ಪೂರೈಸುತ್ತ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಆಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನಲ್ಲಿಯಲ್ಲಿ ಪೂರೈಕೆ ಆಗುತ್ತಿರುವ ನೀರು ನೋಡಿದ್ರೆ, ಕಲಬುರಗಿ ಮಹಾನಗರ ಜನತೆ ಒಂದು ಕ್ಷಣ ಬೆಚ್ಚಿಬೀಳ್ತಿದ್ದಾರೆ‌. ರಾಘವೇಂದ್ರ ಕಾಲೋನಿ, ಕನಕ ನಗರ, ವಿದ್ಯಾನಗರ, ತಾರಫೈಲ್ ಬಡಾವಣೆ ಸೇರಿದಂತೆ ನಗರದ ಹಲವು ಕಾಲೋನಿಗಳ ಜನತೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ನಲ್ಲಿಯಲ್ಲಿ ಬರುವ ನೀರು ಕುಡಿಯೋದಿರಲಿ, ಮುಟ್ಟೋದಕ್ಕೂ ಹೇಸಿಗೆ ಬರುತ್ತಿದೆ. ಅನಿವಾರ್ಯವಾಗಿ ಬಡಬಗ್ಗರು ಕಲುಷಿತ ನೀರು ಕುಡಿದು ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಕುಡಿಯುವ ನೀರಿನೊಂದಿಗೆ ಕಸಕಡ್ಡಿ ಪತ್ತೆ..

ಎಲ್‌ ಅಂಡ್ ಟಿ ಕಂಪನಿಯವರು ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಹೊಣೆ ಹೊತ್ತಿದ್ದಾರೆ. ಆದ್ರೆ, ಇವರಿಗೆ ಟೆಂಡರ್ ಆದಾಗಿನಿಂದ ನಗರದ ಜನರಿಗೆ ಕಲುಷಿತ ನೀರೇ ಗತಿಯಾಗಿದೆ. ಸುಮಾರು ದಿನಗಳಿಂದ ಇದೇ ಪರಿಸ್ಥಿತಿ ಇದ್ದರೂ ಗಮನಿಸಿ ಕ್ರಮಕ್ಕೆ ಮುಂದಾಗಬೇಕಿದ್ದ ಮಹಾನಗರ ಪಾಲಿಕೆ, ಜಲ ಮಂಡಳಿ ಇಲಾಖೆ ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತನೆ ಮಾಡುತ್ತಿದ್ದಾರೆ.

ಸಾರ್ವಜನಿಕರು ಹತ್ತಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದ್ರು ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿತನಕ್ಕೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆರ್ಥಿಕವಾಗಿ ಸಬಲರಿರುವ ಜನರು ಕಲುಷಿತ ನೀರು ಉಪಯೋಗಿಸೋದನ್ನ ಬಿಟ್ಟು ದುಡ್ಡು ಕೊಟ್ಟು ನೀರು ಖರೀದಿಸುತ್ತಿದ್ದಾರೆ. ನೀರು ಖರೀದಿಸಲು ಸಾಧ್ಯವಾಗದ ಬಡವರು ಇದೇ ಕಲುಷಿತ ನೀರು ಬಳಸುತ್ತ ಆರೋಗ್ಯ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ರಾಯಚೂರಿನ ಘಟನೆಯ ನಂತರವೂ ಕಲಬುರ್ಗಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸ.

ಕಲುಷಿತ ನೀರು- ಕಾಂಗ್ರೆಸ್ ಪ್ರೊಟೆಸ್ಟ್​

ಕಲಬುರಗಿ ಮಹಾನಗರದಲ್ಲಿ ಕಲುಷಿತ ನೀರು ಪೂರೈಕೆ ಆಗುತ್ತಿರುವ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಶುದ್ದ ನೀರು ಪೂರೈಸುವಂತೆ ಆಗ್ರಹಿಸಿ ಕಲಬುರಗಿ ಉತ್ತರ ಶಾಸಕಿ ಖನೀಜ್ ಫಾತೀಮಾ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದಿಢೀರನೆ ಪ್ರತಿಭಟನೆ ನಡೆಸಿದ್ರು. ಬಾಟಲಿಯಲ್ಲಿ ಕಲುಷಿತ ನೀರು ತುಂಬಿಕೊಂಡು ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು, ಪಾಲಿಕೆ ಕಚೇರಿ ಎದುರು ಕುಳಿತು ಪಾಲಿಕೆ ಮತ್ತು ಎಲ್ ಅಂಡ್ ಟಿ ಕಂಪನಿ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಮಗೆ ಕಲುಷಿತ ನೀರು ಬೇಡ, ಶುದ್ದ ನೀರು ಕೊಡುವಂತೆ ಪಾಲಿಕೆ ಅಧಿಕಾರಿಗಳಿಗೆ ಆಗ್ರಹಿಸಿದ್ರು. ಕಾಂಗ್ರೆಸ್ ಕಾರ್ಯಕರ್ತರು ಪಾಲಿಕೆಗೆ ಮುತ್ತಿಗೆ ಹಾಕಿ ಒಳಪ್ರವೇಶಿಸಲು ಯತ್ನಿಸಿದ್ದು, ಈ ವೇಳೆ ಕೈ ಕಾರ್ಯಕರ್ತರು- ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಶುದ್ದ ನೀರು ಪೂರೈಸದೆ ಹೋದರೆ ರಸ್ತೆಗಿಳಿದು ಹೋರಾಟ ಮಾಡೋದಾಗಿ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಓದಿ:ರಾಷ್ಟ್ರಪತಿ ಹುದ್ದೆಗೆ ಹೆಚ್ ಡಿ ದೇವೇಗೌಡರು ಸ್ಪರ್ಧಿಸಲ್ಲ: ಮಾಜಿ ಸಿಎಂ ಹೆಚ್​ಡಿಕೆ ಸ್ಪಷ್ಟನೆ

ABOUT THE AUTHOR

...view details