ಕಲಬುರಗಿ: ನಾನು ಕುಮಾರಸ್ವಾಮಿ ಅವರ ಜೊತೆಗೆ ಕೆಲಸ ಮಾಡಿದ್ದೇನೆ. ಅಣ್ಣನ ವಿಚಾರ ತಮ್ಮನಿಗೆ ಗೊತ್ತು. ಇವರು ಬಾಲ್ ಇಲ್ಲದೇ ಬ್ಯಾಟಿಂಗ್ ಆಡ್ತಾರೆ. ಹೀಗಾಗಿಯೇ ನಾನು ಸುಮ್ಮನೆ ಇದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಕಲಬುರಗಿ ಏರ್ಪೋರ್ಟ್ನಲ್ಲಿ ಪೆನ್ಡ್ರೈವ್ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು 'ವರ್ಗಾವಣೆ ದಂಧೆಗೆ ಸಂಬಂಧಿಸಿದಿರಲಿ ಅಥವಾ ಇನ್ಯಾವುದಕ್ಕೋ ಸಂಬಂಧಪಟ್ಟಿರಲಿ ಅವರ ಬಳಿ ಏನು ದಾಖಲೆ ಇದೆ ಅದನ್ನ ಲೋಕಾಯುಕ್ತರಿಗೆ ಸಲ್ಲಿಸಿದರೆ ತನಿಖೆಯಾಗುತ್ತದೆ. ಯಾರಿಗೋ ಹೇಳಿದ ಹಾಗೆ, ಹೆದರಿಸಿದ ಹಾಗೆ ನನ್ನ ಬಳಿ ಹೇಳಿದರೆ, ಹೆದರಿಸಿದರೆ ಪ್ರಯೋಜವಿಲ್ಲ' ಎಂದು ತಿರುಗೇಟು ನೀಡಿದರು.
ದಾಖಲೆ ಇದ್ದರೆ ಬಹಿರಂಗ ಪಡಿಸಲಿ:ಯಾವ ಬಾಂಬ್ ಹಾಕಿದರೂ ನಾನು ಜಗ್ಗಲ್ಲ, ಬಗ್ಗಲ್ಲ. 1975 ರಿಂದ ಇಂತಹ ಬಾಂಬ್ಗಳನ್ನ ಸಾಕಷ್ಟು ನೋಡಿದ್ದೇನೆ. ಕಾಂಗ್ರೆಸ್ ಲೂಟಿ ಮಾಡುತ್ತಿದೆ ಎಂಬ ಆರೋಪ ಮಾಡಿರುವ ಹೆಚ್ಡಿಕೆ ತಮ್ಮ ಬಳಿ ದಾಖಲೆ ಇದ್ದರೆ ಬಹಿರಂಗ ಪಡಿಸಲಿ, ಸುಮ್ಮನೇ ಫಸ್ಟ್ರೇಷನ್ ದಿಂದ ಇಲ್ಲದನ್ನು ಮಾತನಾಡುತ್ತಾರೆ ಎಂದು ಕುಟುಕಿದರು.
ಅಣ್ಣ ಮಾತನಾಡುವುದನ್ನು ತಮ್ಮ ಕೇಳ್ತಾ ಇರ್ತಾರೆ:ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಮಾತನಾಡಲಿ, ಅವರದೇ ಆದ ಅನುಭವ ಅವರಿಗೆ ಇದೆ. ಅಣ್ಣ ಮಾತನಾಡುವುದನ್ನು ತಮ್ಮ ಕೇಳ್ತಾ ಇರುತ್ತಾನೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಟಾಂಗ್ ನೀಡಿದ್ದರು. ನಿನ್ನೆ(ಶುಕ್ರವಾರ) ಸದಾಶಿವನಗರ ತಮ್ಮ ನಿವಾಸದ ಬಳಿ ಹೆಚ್. ಡಿ. ಕುಮಾರಸ್ವಾಮಿ ಮಾಡಿರುವ ವರ್ಗಾವಣೆ ಆರೋಪ ಸಂಬಂಧ ಪ್ರತಿಕ್ರಿಯಿಸಿ, ತಿರುಗೇಟು ನೀಡಿದ್ದರು.