ಕಲಬುರಗಿ: ನಿವೃತ್ತ ಕಾರ್ಮಿಕನ ಬಾಕಿ ಇರುವ ವೇತನ ಕೊಡಿಸಿ ಎಂದು ಕಾರ್ಮಿಕ ಮುಖಂಡನೋರ್ವ ಜಿಲ್ಲಾಧಿಕಾರಿ ಮುಂದೆ ಹೂವು, ಹಣ್ಣು, ಹಣ ಹಾಗೂ ವಿಷದ ಬಾಟಲಿ ತಂದಿಟ್ಟು ಜಿಲ್ಲಾಧಿಕಾರಿಗಳಿಂದ ಛೀಮಾರಿ ಹಾಕಿಸಿಕೊಂಡ ಘಟನೆ ಅಫಜಲಪುರ ಪಟ್ಟಣದಲ್ಲಿ ನಡೆಯಿತು. ಅಫಜಲಪುರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಡಿಸಿ ಯಶವಂತ ಗುರುಕರ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದರು.
ಗೌರ (ಬಿ) ಗ್ರಾಮ ಪಂಚಾಯಿತಿಯಲ್ಲಿ ನೌಕರರಾಗಿ ದುಡಿದು ನಿವೃತ್ತಿಯಾದ ವ್ಯಕ್ತಿಗೆ ನಾಲ್ಕು ವರ್ಷದಿಂದ ಬಾಕಿ ಇರುವ ವೇತನ ನೀಡದೆ ಸತಾಯಿಸಲಾಗುತ್ತಿದೆ. ಕೇಳಲು ಹೋದರೆ ಪಿಡಿಒ ಲಂಚ ಕೇಳುತ್ತಿದ್ದಾರೆ ಎಂದು ಕಾರ್ಮಿಕ ಮುಖಂಡ ಜಿಲ್ಲಾಧಿಕಾರಿಗಳಿಗೆ ಹೇಳಿದ್ದಾನೆ. ಈ ಸಂದರ್ಭದಲ್ಲಿ ತಾನು ತಂದಿದ್ದ ಹೂವು, ಹಣ್ಣು ಹಾಗು 1,500 ರೂ ನಗದು, ವಿಷದ ಬಾಟಲಿ ಇರುವ ಬುಟ್ಟಿಯನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟಿದ್ದಾನೆ. ಇದಕ್ಕೆ ಕೋಪಗೊಂಡ ಜಿಲ್ಲಾಧಿಕಾರಿ ಮುಖಂಡನನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ರೀತಿ ಭಯ ಹುಟ್ಟಿಸುವ ಡ್ರಾಮಾ ಮಾಡಬೇಡಿ, ಗೆಟ್ ಔಟ್ ಎಂದರು.