ಸೇಡಂ:ಲಾರಿಯಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿರುವುದನ್ನು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ತಡೆದಿದ್ದಾರೆ. 47 ದನಗಳನ್ನು ರಕ್ಷಿಸಿ ಗೋಶಾಲೆಗೆ ಕಳುಹಿಸಲಾಗಿದೆ.
ಸೇಡಂ ಪಟ್ಟಣದ ಕಲಬುರಗಿ ಚಿಂಚೋಳಿ ಕ್ರಾಸ್ ಬಳಿ ಅಕ್ರಮವಾಗಿ ಆಂಧ್ರಪ್ರದೇಶಕ್ಕೆ ಸಾಗಿಸುತ್ತಿದ್ದ ದನಗಳನ್ನು ರಕ್ಷಣೆ ಮಾಡಲಾಗಿದೆ. ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ, ತಾಲೂಕು ಅಧ್ಯಕ್ಷ ರಾಘವೇಂದ್ರ ಮುಸ್ತಾಜರ್ ಇತರರು ವಾಹನಗಳನ್ನು ತಡೆದಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಪಿಎಸ್ಐ ನಾನಾಗೌಡ, ಎಸ್ಪಿಯವರ ಮಾರ್ಗದರ್ಶನದಂತೆ ಗೋವುಗಳನ್ನು ಗೋಶಾಲೆಗೆ ಕಳುಹಿಸಿಕೊಟ್ಟಿದ್ದು, ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.
ದನಗಳನ್ನು ಸೇಡಂ ತಾಲೂಕಿನ ಮಳಖೇಡದ ಕೃಷಿ ಉತ್ಪನ್ನ ಮಾರುಕಟ್ಟೆಯ ಜಾನುವಾರುಗಳ ಸಂತೆಯಲ್ಲಿ ಖರೀದಿಸಿರುವುದಾಗಿ ತಿಳಿದು ಬಂದಿದೆ. ಆದರೆ ಎಪಿಎಂಸಿ ಸಿಬ್ಬಂದಿಗೆ ಲಂಚ ಕೊಟ್ಟು ರಶೀದಿ ಪಡೆದು ದನಗಳನ್ನು ಆಂಧ್ರಪ್ರದೇಶದ ಗುತ್ತಿ ಜಿಲ್ಲೆಗೆ ಸಾಗಿಸಲಾಗುತ್ತಿದೆ. ಇದೊಂದು ದೊಡ್ಡ ಜಾಲವಿದ್ದು, ಈ ಬಗ್ಗೆ ತನಿಖೆ ನಡೆಯಬೇಕು ಮತ್ತು ಲೋಪವೆಸಗಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಶಿವಕುಮಾರ ಬೋಳಶೆಟ್ಟಿ ಅವರು ಆಗ್ರಹಿಸಿದ್ದಾರೆ.
ಅಕ್ರಮವಾಗಿ ಸಾಗಿಸುತ್ತಿದ್ದ ದನಗಳ ರಕ್ಷಣೆ ಮೂಕ ಪ್ರಾಣಿಗಳನ್ನು ತೀರಾ ಹಿಂಸಾತ್ಮಕ ರೂಪದಲ್ಲಿ ಕೊಂಡೊಯ್ಯಲಾಗುತ್ತಿದೆ. ಒಂದೇ ವಾಹನದಲ್ಲಿ 10ರಿಂದ 12 ದನಗಳನ್ನು ಒತ್ತಾಯಪೂರ್ವಕವಾಗಿ ಕೊಂಡೊಯ್ಯಲಾಗುತ್ತಿದೆ. ಪ್ರಾಣಿಗಳನ್ನು ಹಿಂಸಿಸುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಘವೇಂದ್ರ ಮುಸ್ತಾಜರ್ ಒತ್ತಾಯಿಸಿದ್ದಾರೆ.