ಕರ್ನಾಟಕ

karnataka

By

Published : Sep 22, 2020, 8:38 AM IST

ETV Bharat / state

ಸ್ವಾಮಿತ್ವ ಸರ್ವೇ ಯೋಜನೆಯಡಿ ಕಲಬುರಗಿಯಲ್ಲಿ ಸರ್ವೇ ಕಾರ್ಯ ಆರಂಭ

ಕೇಂದ್ರ ಸರ್ಕಾರದ ಸ್ವಾಮಿತ್ವ ಸರ್ವೇ ಯೋಜನೆಯ ಸರ್ವೇ ಕಾರ್ಯ ಜಿಲ್ಲೆಯಲ್ಲಿ ಭರದಿಂದ ಸಾಗಿದೆ. ಕೇಂದ್ರ ಸರ್ಕಾರ ಕಳೆದ ಏಪ್ರಿಲ್ 24ರಂದು ಈ ಯೋಜನೆಗೆ ಚಾಲನೆ ನೀಡಿದ್ದು, ಕಲಬುರಗಿಯಲ್ಲಿ ಸರ್ವೇ ಕಾರ್ಯ ಕಳೆದ ಸೆ. 14ರಿಂದಲೇ ಆರಂಭಗೊಂಡಿದೆ.

ಕಲಬುರಗಿಯಲ್ಲಿ ಸರ್ವೇ ಕಾರ್ಯ ಆರಂಭ
ಕಲಬುರಗಿಯಲ್ಲಿ ಸರ್ವೇ ಕಾರ್ಯ ಆರಂಭ

ಕಲಬುರಗಿ: ಕೇಂದ್ರ ಸರ್ಕಾರದ ಸ್ವಾಮಿತ್ವ ಸರ್ವೇ ಯೋಜನೆಯ ಸರ್ವೇ ಕಾರ್ಯ ಜಿಲ್ಲೆಯಲ್ಲಿ ಭರದಿಂದ ಸಾಗಿದೆ. ಗ್ರಾಮೀಣ ಭಾಗದಲ್ಲಿ ಡ್ರೋನ್ ಕ್ಯಾಮರಾ ಮೂಲಕ ಆಸ್ತಿ ಸರ್ವೇ ಮಾಡಿ ನಿವೇಶನ-ಕಟ್ಟಡಗಳನ್ನು ಗುರುತಿಸಿ ಸಂಬಂಧಿಸಿದವರಿಗೆ ಹಕ್ಕುಪತ್ರ ನೀಡುವ ಹಾಗೂ ಆಸ್ತಿ ಮಾಲೀಕತ್ವದ ದಾಖಲೆಗಳ ಲೋಪದೋಷ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರ ಕಳೆದ ಏಪ್ರಿಲ್ 24ರಂದು ಈ ಯೋಜನೆಗೆ ಚಾಲನೆ ನೀಡಿದೆ. ರಾಜ್ಯದ 16 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು 16,600 ಗ್ರಾಮಗಳಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ. ಇದರಲ್ಲಿ ಕಲಬುರಗಿ ಜಿಲ್ಲೆಯೂ ಒಂದಾಗಿದೆ. ಕಲಬುರಗಿಯಲ್ಲಿ ಸರ್ವೇ ಕಾರ್ಯ ಕಳೆದ ಸೆ. 14ರಿಂದಲೇ ಆರಂಭಗೊಂಡಿದೆ. ಜಿಲ್ಲೆಯ 263 ಗ್ರಾಮ ಪಂಚಾಯತಿಗಳ 922 ಕಂದಾಯ ಗ್ರಾಮಗಳಲ್ಲಿ, 481 ತಾಂಡಾಗಳು ಮತ್ತು 10ಕ್ಕಿಂತ ಹೆಚ್ಚಿನ ಮನೆ, ವಸತಿ ಹೊಂದಿರುವ ಪ್ರದೇಶಗಳಲ್ಲಿಯೂ ಸಹ ಸರ್ವೇ ಕಾರ್ಯ ನಡೆಸಲಾಗುತ್ತಿದೆ ಎಂದು ಭೂಮಾಪನ ಇಲಾಖೆಯ ಉಪ ನಿರ್ದೇಶಕ ಶಂಕರ್ ತಿಳಿಸಿದ್ದಾರೆ.

ಖಾಸಗಿ, ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಆಸ್ತಿಯಲ್ಲಿ ಗ್ರಾಮೀಣ ಭಾಗದ ಮನೆ, ನಿವೇಶನ, ಗಡಿ ಸೇರಿದಂತೆ ಗ್ರಾಮದ ಸಂಪೂರ್ಣ ಆಸ್ತಿಯನ್ನು ನಿಖರವಾಗಿ ದಾಖಲಿಸುವುದು, ಆಸ್ತಿಗಳ ದಾಖಲೆಯ ಲೋಪದೋಷಗಳಿದ್ದಲ್ಲಿ ಸರಿಪಡಿಸಿ ಮಾಲೀಕರಿಗೆ ಹಕ್ಕುಪತ್ರ ವಿತರಿಸಿ ಗ್ರಾಮೀಣ ಭಾಗದ ಜನರ ಸಂಕಟ ದೂರ ಮಾಡುವ ಉದ್ದೇಶ ಈ ಯೋಜನೆಯದ್ದಾಗಿದೆ.

ಸರ್ವೇ ಕಾರ್ಯ ಹೇಗೆ: ಆಸ್ತಿ ಸರ್ವೇ ಕಾರ್ಯವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಭೂಮಾಪನ ಇಲಾಖೆ ಹಾಗೂ ಭಾರತೀಯ ಸರ್ವೇಕ್ಷಣ ಸಂಸ್ಥೆ ಜಂಟಿಯಾಗಿ ನಡೆಸುತ್ತದೆ. ಆರಂಭಿಕವಾಗಿ ಭೂಮಾಪನ ಇಲಾಖೆಯ ಅಧಿಕಾರಿ-ಸಿಬ್ಬಂದಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ ವಸೂಲಿಗಾರರು, ವಾಟರ್​ಮೆನ್, ಗ್ರೂಪ್ ಡಿ ಸಿಬ್ಬಂದಿ ಗ್ರಾಮಗಳಲ್ಲಿ ಸಂಚರಿಸಿ ಗ್ರಾಮದ ಆಸ್ತಿಗಳನ್ನು ಮತ್ತು ಗ್ರಾಮ ಠಾಣಾ ಆಸ್ತಿಗಳನ್ನು ಬಿಳಿ ಬಣ್ಣದಿಂದ ಗುರುತು ಮಾಡಿ ಕೈ ನಕ್ಷೆ ರೂಪಿಸುತ್ತಾರೆ. ಮಾರ್ಕ್ ಮಾಡಲಾದ ಆಸ್ತಿಗಳನ್ನು ಭಾರತೀಯ ಸರ್ವೇಕ್ಷಣ ಸಂಸ್ಥೆಯು ಡ್ರೋನ್​ ಕ್ಯಾಮರಾ ಮೂಲಕ ಸೆರೆ ಹಿಡಿಯುವ ಮೂಲಕ ಸರ್ವೇ ಕಾರ್ಯ ಕೈಗೊಳ್ಳುತ್ತದೆ. ಡ್ರೋನ್​ ಸರ್ವೇ ನಂತರ ಆಸ್ತಿ ಮಾಲೀಕರಿಗೆ ಇಲಾಖೆಯಿಂದ ಸರಿಯಾದ ದಾಖಲೆ ಪತ್ರ ವಿತರಿಸಿ ಗ್ರಾಮ ಪಂಚಾಯತಿಗಳ ಆಸ್ತಿ ದಾಖಲೆಗಳ ನೋಂದಣಿಯಲ್ಲಿ ಸರಿಪಡಿಸಲಾಗುತ್ತದೆ.

ABOUT THE AUTHOR

...view details