ಕರ್ನಾಟಕ

karnataka

ಚಿಂಚೋಳಿ ಕ್ಷೇತ್ರದ ಇತಿಹಾಸ ಪುಡಿಗಟ್ಟಿದ ಸಿದ್ದರಾಮಯ್ಯ... ಇಲ್ಲಿ ಬಿಜೆಪಿ‌ ಶಾಸಕರಿದ್ರೂ ಕಾಂಗ್ರೆಸ್ ತೆಕ್ಕೆಗೆ ರಾಜ್ಯದ ಚುಕ್ಕಾಣಿ..

By

Published : May 20, 2023, 8:23 PM IST

ಚಿಂಚೋಳಿ‌ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ ಪಕ್ಷವೇ ಇಲ್ಲಿಯವರೆಗೆ ರಾಜ್ಯದಲ್ಲಿ ಅಧಿಕಾರ ಹಿಡಿದಿದೆ. ಈಗ ಬಿಜೆಪಿಯ ಅವಿನಾಶ ಜಾಧವ ಶಾಸಕರಾಗಿದ್ದರೆ, ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಸಿಎಂ ಆಗುವ ಮೂಲಕ ಇತಿಹಾಸಕ್ಕೆ ತೆರೆ ಎಳೆದಿದ್ದಾರೆ. ಚಿಂಚೋಳಿ ಕ್ಷೇತ್ರದ ಇತಿಹಾಸದ ವಾಡಿಕೆ ಈಗ ಬುಡಮೇಲು ಆಗಿದೆ.

CM siddaramaiah
ಸಿ ಎಂ ಸಿದ್ದರಾಮಯ್ಯ

ಕಲಬುರಗಿ:ಚಿಂಚೋಳಿ‌ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ ಪಕ್ಷವೇ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣೆ ಹಿಡಿಯುತ್ತದೆ ಅನ್ನೋ ನಂಬಿಕೆ ಈಗ ತೆಲೆಕೆಳಗಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಆಡಳಿತದ ಗದ್ದುಗೆ ಹಿಡಿಯುವ ಮೂಲಕ ಆರು ದಶಕದ ನಂಬಿಕೆ ಮುರಿದು ಬಿದ್ದಿದೆ. 65 ವರ್ಷಗಳ ಇತಿಹಾಸದ ಚಿಂಚೋಳಿ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿ ಪಕ್ಷವೇ ರಾಜ್ಯದಲ್ಲಿ‌ ಆಡಳಿತದ ಚುಕ್ಕಾಣೆ ಹಿಡಿಯುತ್ತಿತ್ತು. ಆದ್ರೀಗ 65 ವರ್ಷದ ಇತಿಹಾಸದಲ್ಲೇ ಎರಡನೇ ಬಾರಿಗೆ ಈ ವಾಡಿಕೆ ಸುಳ್ಳಾಗಿದೆ..

ಚಿಂಚೋಳಿ ವಿಧಾನಸಭೆ ಕ್ಷೇತ್ರ 1957ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, 1957ರಿಂದ ಇಲ್ಲಿಯವರೆಗೆ ಒಂದು ಉಪಚುನಾವಣೆ ಸೇರಿ 16 ಚುನಾವಣೆಗಳಾಗಿವೆ. 1985 ಮತ್ತು ಈಗ 2023 ಹೊರತು ಪಡಿಸಿದರೆ ಚಿಂಚೋಳಿ ಅಸೆಂಬ್ಲಿಯಿಂದ ಯಾರು ಶಾಸಕರಾಗಿ ಗೆದ್ದಿದ್ದಾರೋ, ಅವರ ಪಕ್ಷವೇ ರಾಜ್ಯ ರಾಜಕೀಯದಲ್ಲಿ ಅಧಿಕಾರ ಗದ್ದುಗೆ ಹಿಡಿದಿರುವ ವಾಡಿಕೆ ಇತ್ತು.

ಇದೀಗ ಎರಡನೇ ಬಾರಿಗೆ ಇಲ್ಲಿನ ಜನರ ನಂಬಿಕೆ ಸುಳ್ಳಾಗಿದೆ. 1985 ರ ನಂತರ ಇದೀಗ 2023 ರಲ್ಲಿ ಎರಡನೇ ಬಾರಿಗೆ ನಂಬಿಕೆ ಸುಳ್ಳಾಗಿದೆ. 1985 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಸಕರಾದರೆ ರಾಜ್ಯದಲ್ಲಿ ಜನತಾ ಪಕ್ಷ ಆಡಳಿತಕ್ಕೆ ಬಂದಿತ್ತು. ಈಗ ಬಿಜೆಪಿ‌ ಅಭ್ಯರ್ಥಿ ಶಾಸಕರಾದ್ರೆ ರಾಜ್ಯದಲ್ಲಿ‌ ಕಾಂಗ್ರೆಸ್ ಆಡಳಿತ ಚುಕ್ಕಾಣೆ ಹಿಡಿಯುವ ಮೂಲಕ ಇತಿಹಾಸ ಬುಡಮೇಲಾಗಿದೆ...

ಚಿಂಚೋಳಿ ಕ್ಷೇತ್ರದ ಇತಿಹಾಸ ಹೀಗಿದೆ

* 1957ರಲ್ಲಿ ಕಾಂಗ್ರೆಸ್‌ನ ವೀರೇಂದ್ರ ಪಾಟೀಲ ಶಾಸಕರಾದಾಗ ಕಾಂಗ್ರೆಸ್‌ನ ಬಿ.ಡಿ. ಜತ್ತಿ ಸರ್ಕಾರದ ಆಡಳಿತಕ್ಕೆ ಬಂದಿತ್ತು.

* 1962 ಹಾಗೂ 1967ರ ವಿಧಾನಸಭೆ ಚುನಾವಣೆಯಲ್ಲಿ ವೀರೇಂದ್ರ ಪಾಟೀಲ ಸತತವಾಗಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದಾಗಲೂ ಕಾಂಗ್ರೆಸ್‌ ಸರ್ಕಾರದ ಆಡಳಿತ ನಡೆಸಿತು.

* 1972 ಹಾಗೂ 1977ರಲ್ಲಿ ಕಾಂಗ್ರೆಸ್‌ನಿಂದ ದೇವೇಂದ್ರಪ್ಪ ಘಾಳೆಪ್ಪ ಶಾಸಕರಾದಾಗ ದೇವರಾಜು ಅರಸು ಸರ್ಕಾರವಿತ್ತು.

* 1983ರ ಚುನಾವಣೆಯಲ್ಲಿ ದೇವೇಂದ್ರಪ್ಪ ಘಾಳೆಪ್ಪ ಪುನರಾಯ್ಕೆಯಾಗಿದ್ದರು. ಆ ಸಮಯದಲ್ಲಿ ಆರ್‌.ಗುಂಡೂರಾವ್‌ ಸರ್ಕಾರವಿತ್ತು.

* 1985 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಯ್ಯ ಸ್ವಾಮಿ ಆಯ್ಕೆ‌ ಆಗಿದ್ದರು. ಆಗ‌ ಮಾತ್ರ ಜನತಾ ಪಕ್ಷದ ರಾಮಕೃಷ್ಣ ಹೆಗಡೆ ನೇತೃತ್ವದ ಆಡಳಿತ ಇತ್ತು. ಈ‌ ಮೂಲಕ ಮೊದಲನೇ ಬಾರಿಗೆ ಚಿಂಚೋಳಿ ಕ್ಷೇತ್ರದ ಇತಿಹಾಸ ತೆಲೆಗಳಗಾಗಿತ್ತು.

* 1989ರಲ್ಲಿ ಕಾಂಗ್ರೆಸ್ ಪಕ್ಷದಿಂದ ವಿರೇಂದ್ರ ಪಾಟೀಲ ಮತ್ತೆ ಆಯ್ಕೆಯಾಗಿ ಅವರೇ ಒಂದು ವರ್ಷ ಸಿಎಂ ಆದರು. ನಂತರ ಕಾಂಗ್ರೆಸ್ ಪಕ್ಷದ ಎಸ್. ಬಂಗಾರಪ್ಪ, ವಿರಪ್ಪ ಮೊಯ್ಲಿ ಕ್ರಮೇಣವಾಗಿ ತಲಾ ಎರಡು ವರ್ಷ ಆಡಳಿತ ನಡೆಸಿದರು.

* 1994 ರಲ್ಲಿ ವೈಜನಾಥ ಪಾಟೀಲ ಜನತಾ ದಳದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆಗ ಜನತಾದಳದ ಸರ್ಕಾರ ರಚನೆಯಾಗಿ ದೇವೇಗೌಡ ಸಿಎಂ ಆದರು. ಬಳಿಕ ಇದೆ ಪಕ್ಷದ ಜೆಎಚ್ ಪಟೇಲ್ ಸಿಎಂ ಆದರು.

* 1999ರಲ್ಲಿ ಕಾಂಗ್ರೆಸ್‌ನ ಕೈಲಾಸನಾಥ ಪಾಟೀಲ ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಎಸ್‌.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಚನೆಯಾಗಿತು.

* 2004ರಲ್ಲಿ ವೈಜನಾಥ ಪಾಟೀಲ ಜೆಡಿಎಸ್‌ ಶಾಸಕರಾಗಿ ಮರು ಆಯ್ಕೆ ಆದಾಗ, ಧರ್ಮಸಿಂಗ್‌ ನೇತೃತ್ವದಲ್ಲಿ ಜೆಡಿಎಸ್‌ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ, ತದನಂತರ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು.

* 2008ರಲ್ಲಿ ಬಿಜೆಪಿಯಿಂದ ಸುನೀಲ ವಲ್ಯಾಪುರೆ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟ ಚಿಂಚೋಳಿಯಿಂದ ಚುನಾಯಿತರಾದರು. ಆಗ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಇದೇ ಅವಧಿಯಲ್ಲಿ ಬಿಜೆಪಿಯಿಂದ ಡಿವಿ ಸದಾನಂದಗೌಡ, ಜಗದೀಶ ಶೆಟ್ಟರ ಸಿಎಂ ಆಗಿ ಆಡಳಿತ ನಡೆಸಿದರು.

* 2013 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಉಮೇಶ ಜಾಧವ ಶಾಸಕರಾದಾಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂತು.

* 2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಉಮೇಶ ಜಾಧವ ಪುನರಾಯ್ಕೆಯಾದರು. ಆಗ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ - ಜೆಡಿಎಸ್‌ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.

* 2019 ರ ಮೇ ನಲ್ಲಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ ಅವಿನಾಶ ಜಾಧವ್‌ ಗೆಲುವು ಸಾಧಿಸಿದ್ದರು. ಇದಾಗಿ ಎರಡೇ ತಿಂಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆ ಆಗಿತ್ತು.

*2023 ಮೇ 10 ರಂದು ನಡೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಅವಿನಾಶ ಜಾಧವ ಆಯ್ಕೆ ಆಗಿದ್ದಾರೆ. ಆದ್ರೀಗ ಇತಿಹಾಸ ಮೀರಿ ಕಾಂಗ್ರೆಸ್ ಸರ್ಕಾರ ರಚನೆ ಆಗಿದೆ...

ಉಪಸಮರ: 2018 ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರಾಗಿ ಆಯ್ಕೆಯಾದ ಉಮೇಶ ಜಾಧವ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಪಾಳೇಯ ಸೇರಿದ್ದರು. ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಗೆಲುವು ಸಾಧಿಸಿದ್ದರು. ಇತ್ತ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾಗಿದ್ದ ಚಿಂಚೋಳಿ ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ಅವಿನಾಶ್‌ ಜಾಧವ್‌ಗೆ ಬಿಜೆಪಿ ಟಿಕೆಟ್‌ ಕೊಡಿಸುವಲ್ಲಿ ಉಮೇಶ ಜಾಧವ್‌ ಯಶಸ್ವಿಯಾಗಿದ್ದರು.

ಆಗ ಇಲ್ಲಿಗೆ ಪ್ರಚಾರಕ್ಕೆ ಬಂದಿದ್ದ ಬಿಜೆಪಿ ನಾಯಕರೆಲ್ಲರೂ ಇಲ್ಲಿ ಗೆದ್ದು ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುತ್ತೇವೆ ಎಂದೇ ಮಾತನಾಡಿದ್ದರು. ಚಿಂಚೋಳಿಯಲ್ಲಿ ಬಿಜೆಪಿಯ ಅವಿನಾಶ್‌ ಜಾಧವ್‌ ಗೆದ್ದರು.ರಾಜ್ಯದಲ್ಲಿದ್ದ ಕಾಂಗ್ರೆಸ್ ಜೆಡಿಎಸ್ ದೋಸ್ತಿ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿತು. ಮೂಲಕ ಚಿಂಚೋಳಿ ಕ್ಷೇತ್ರದ ಇತಿಹಾಸವನ್ನು ಮತ್ತಷ್ಟು ಗಟ್ಟಿಗೊಳಿಸಿತು.

ಆದ್ರೆ ಇಷ್ಟೊಂದು ರೋಚಕವಾಗಿರುವ ಕ್ಷೇತ್ರದಲ್ಲಿ ಈಗ ಬಿಜೆಪಿಯ ಅವಿನಾಶ ಜಾಧವ ಶಾಸಕರಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಸಿಎಂ ಆಗುವ ಮೂಲಕ ಇತಿಹಾಸಕ್ಕೆ ತೆರೆ ಎಳೆದಿದ್ದಾರೆ. ಚಿಂಚೋಳಿ ವಿಧಾನಸಭಾ ಕ್ಷೇತ್ರದ ಅಪರೂಪದ ಇತಿಹಾಸ ಈಗ ಬುಡಮೇಲು ಮಾಡಿದ್ದಾರೆ.

ಇದನ್ನೂಓದಿ:ಸಿದ್ದರಾಮಯ್ಯ ಬಾಲ್ಯ ಜೀವನವೇ ಒಂದು ರೋಚಕ!: ನಾಟಿ ಕೋಳಿ ಸಾರಿನ ಪ್ರೀತಿ!

ABOUT THE AUTHOR

...view details