ಕಲಬುರಗಿ:ದೇಶಕ್ಕೆ ಆಗಸ್ಟ್ 15 ರಂದು ಸ್ವಾತಂತ್ರ್ಯ ಸಿಕ್ಕಿದ್ರೆ, ನಿಜಾಮನ ಕಪಿಮುಷ್ಟಿಯಲ್ಲಿದ್ದ ಕಲ್ಯಾಣ ಕರ್ನಾಟಕಕ್ಕೆ ಸೆಪ್ಟೆಂಬರ್ 17 ರಂದು ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತಿದ್ದು, ಕಲ್ಯಾಣ ಕರ್ನಾಟಕದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ ಕಳೆಗಟ್ಟಿದೆ. ಮೂರು ದಿನಗಳ ಕಾಲ ಭರದಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ.
ಬ್ರಿಟಿಷರಿಂದ ಭಾರತಕ್ಕೆ ಆಗಸ್ಟ್ 15 ರಂದು ಸ್ವಾತಂತ್ರ್ಯ ದೊರೆತಿದ್ದರೆ, ಹೈದರಾಬಾದ್ ನಿಜಾಮನ ಕಪಿಮುಷ್ಟಿಯಿಂದ ಅಂದಿನ ಹೈದರಾಬಾದ್ ಕರ್ನಾಟಕ ಇಂದಿನ ಕಲ್ಯಾಣ ಕರ್ನಾಟಕಕ್ಕೆ 17 ಸೆಪ್ಟೆಂಬರ್ 1948 ರಲ್ಲಿ ಸ್ವಾತಂತ್ರ್ಯವಾಗಿದೆ. ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯವಾಗಿ 75 ವರ್ಷವಾಗುತ್ತಿದ್ದು, ಸರ್ಕಾರದಿಂದ ಅಮೃತ ಮಹೋತ್ಸವ ಆಚರಿಸಲಾಗ್ತಿದೆ. ಅಮೃತ ಮಹೋತ್ಸವದ ಹಿನ್ನೆಲೆ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ಭರದ ಸಿದ್ದತೆ ಮಾಡಿಕೊಳ್ಳಲಾಗಿದೆ.
ಕಣ್ಮನ ಸೆಳೆದ ಕಲಾ ತಂಡಗಳ ಕಲವರ:ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಹಿನ್ನೆಲೆ ಇಂದು ನಗರದಲ್ಲಿ ಕಲಾ ತಂಡಗಳ ಕಲರವ ಕಣ್ಮನ ಸೆಳೆಯಿತು. ನಗರದ ನಗರೇಶ್ವರ ಶಾಲೆಯಿಂದ ನಗರದ ಪ್ರಮುಖ ರಸ್ತೆ ಮೂಲಕ ಕೇಂದ್ರ ಬಸ್ ನಿಲ್ದಾಣದ ವರೆಗೆ ಕಲಾತಂಡದ ಮೆರವಣಿಗೆ ಜರುಗಿತು.
ಸ್ಥಬ್ದ ಚಿತ್ರಗಳ ಪ್ರದರ್ಶನ, ವೀರಗಾಸೆ ಕುಣಿತ, ಡೊಳ್ಳು ಕುಣಿತ ಸೇರಿದಂತೆ 24 ವಿವಿಧ ಸಾಂಸ್ಕೃತಿಕ ಕಲಾತಂಡಗಳ 200 ಕಲಾವಿದರು ಭಾಗಿಯಾಗಿದ್ದರು. ನಗರದ ಎಸ್ವಿಪಿ ವೃತ್ತದ ಪ್ರಮುಖ ರಸ್ತೆಯಲ್ಲಿ ಸಾಗಿದ ಸಾಂಸ್ಕೃತಿಕ ಕಲಾ ತಂಡಗಳ ಭವ್ಯ ಮೆರವಣಿಗೆ ಎಲ್ಲರನ್ನೂ ಆಕರ್ಷಿಸಿ ಅಮೃತ ಮಹೋತ್ಸವದ ಕಳೆ ತಂದು ಕೊಟ್ಟಿತ್ತು. ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆಯಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಸಂಸದ ಉಮೇಶ್ ಜಾಧವ್ ಸೇರಿದಂತೆ, ಅಧಿಕಾರಿಗಳು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಲ್ಯಾಣ ಕರ್ನಾಟಕ ವ್ಯಾಪಾರಸ್ಥರಿಂದ ಮಳಿಗೆ:ಇಂದಿನಿಂದ ಸೆಪ್ಟೆಂಬರ್ 17 ರ ವರೆಗೆ ಮೂರು ದಿನಗಳ ಕಾಲ ಅಮೃತ ಮಹೋತ್ಸವ ಜರುಗುತ್ತಿದ್ದು, ಬೃಹತ್ ವೇದಿಕೆ ಕಾರ್ಯಕ್ರಮಕ್ಕೆ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಭರದ ಸಿದ್ದತೆ ನಡೆಯುತ್ತಿದೆ. ಮೂರು ದಿನಗಳ ಕಾಲ ಕಲ್ಯಾಣ ಕರ್ನಾಟಕದ ಅತಿದೊಡ್ಡ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ.