ಕರ್ನಾಟಕ

karnataka

ETV Bharat / state

ಕೆಇಎ ಪರೀಕ್ಷೆ ಅಕ್ರಮದ ಆರೋಪಿ ಆರ್ ಡಿ ಪಾಟೀಲ್ ಬಂಧನಕ್ಕೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

ಬ್ಲೂಟೂತ್ ಬಳಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಯತ್ನಿಸಿದ ಪ್ರಕರಣದಲ್ಲಿ ಕಿಂಗ್‌ಪಿನ್ ಆರ್.ಡಿ ಪಾಟೀಲ್ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ - ಸಚಿವ ಪ್ರಿಯಾಂಕ್ ಖರ್ಗೆ

By ETV Bharat Karnataka Team

Published : Nov 8, 2023, 12:30 PM IST

Updated : Nov 8, 2023, 2:22 PM IST

ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ

ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

ಕಲಬುರಗಿ :ಕೆಇಎ ಪರೀಕ್ಷೆಯ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ ಪಾಟೀಲ್ ಬಂಧನಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಒಂದು ಮೊಬೈಲ್ ಸಿಕ್ಕಿದ್ದು, ಅದನ್ನು ವಿಧಿವಿಜ್ಞಾನ‌ ಸಂಸ್ಥೆಗೆ ಕಳಿಸಲಾಗಿದೆ. ತನಿಖೆ ನಡೆಯುತ್ತಿದ್ದು, ವರದಿ ಬರಲಿ. ಈ ಹಂತದಲ್ಲಿ ಎಲ್ಲ ಮಾಹಿತಿಯನ್ನು ಬಹಿರಂಗಗೊಳಿಸಲಾಗದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿದ್ದಾರೆ.

ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಇಂದು ಮಾಧ್ಯಮದವದೊಂದಿಗೆ ಮಾತನಾಡಿದ ಅವರು, ಕೆಲವೊಮ್ಮೆ ನಮ್ಮವರೇ ಶಾಮೀಲಾಗಿರುತ್ತಾರೆ. ಈ ಪ್ರಕರಣದಲ್ಲಿ ನಮ್ಮವರು ಶಾಮೀಲಾಗಿರುವುದು ಕಂಡುಬಂದರೇ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈಗ ತನಿಖೆ ಪ್ರಾಮಾಣಿಕವಾಗಿ ನಡೆಯುತ್ತಿದೆ. ಸರ್ಕಾರ ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳುವುದಿಲ್ಲ ಎಂದು ಸಚಿವರು ಪುನರುಚ್ಚರಿಸಿದರು.

ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಒಂದಿಬ್ಬರು ಕಾಪಿ ಮಾಡಿರಬಹುದು. ಕೆಲವು ಕಡೆ ಬ್ಲೂಟೂತ್​ ಬಳಕೆಯಾಗಿದೆ. ಕಲಬುರಗಿ ಮಾತ್ರ ಅಲ್ಲದೇ ಯಾದಗಿರಿ, ವಿಜಯಪುರ, ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿಯೂ ಕೂಡಾ ಇಂತಹ ಘಟನೆ ನಡೆದಿವೆ. ಇದರ ಲೋಪಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಯಾವುದೇ ಪ್ರಕರಣ ಆದರೂ ಅದರ ಗಾಂಭೀರ್ಯತೆ ತಿಳಿದುಕೊಂಡು ಸರ್ಕಾರ ಮುಂದಿನ‌ ಕ್ರಮ ಕೈಗೊಳ್ಳಲಿದೆ. ಒಎಂಆರ್ ಘಟನೆ ನಮ್ಮ ಜಿಲ್ಲೆಯಲ್ಲಿ ನಡೆದಿಲ್ಲ, ಬೇರೆ ಕಡೆ ನಡೆದಿದೆ. ಒಎಂಆರ್ ಹೊರಗಡೆ ಬಂದಿದೆ ಎಂದರೆ ಯಾರಾದರೂ ಮೊಬೈಲ್ ಬಳಸಿರಬಹುದು. ಇದು ರಾಜ್ಯದ ಬೇರೆ ಬೇರೆ ಕಡೆ ನಡೆದಿದೆ. ಹಾಗಾಗಿ ಈ ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಯುತ್ತಿದೆ. ಅದರ ವರದಿ ಆಧರಿಸಿ ಪ್ರಕರಣವನ್ನು ಸಿಒಡಿಗೆ ಅಥವಾ ಸಿಬಿಐಗೆ ಕೊಡುವ ಕುರಿತು ಗೃಹ ಸಚಿವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಆ ಬಗ್ಗೆ ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಆರೋಪ : ಆರ್.ಡಿ ಪಾಟೀಲ್ ಗೆ ಪ್ರಿಯಾಂಕ್ ಖರ್ಗೆ ಅವರ ಶ್ರೀರಕ್ಷೆ ಇದೆ ಎಂದು ಬಿಜೆಪಿ ಆರೋಪಿಸಿರುವುದಕ್ಕೆ ಟಾಂಗ್ ನೀಡಿದ ಸಚಿವರು, ಈ ಹಿಂದೆ ಪಿಎಸ್​ಐ ಪರೀಕ್ಷೆ ನಡೆದಾಗ ಯಾವ ಸಂಸದರು ಶಾಲೆಯೊಂದರಲ್ಲೇ ಪರೀಕ್ಷೆ ನಡೆಯಬೇಕು ಪತ್ರ ಬರೆದಿದ್ದರು. ಶಾಸಕರ ಭವನದಲ್ಲೇ ಡೀಲ್ ಮಾಡಿದ್ದರು. ಅಂದಿನ ಗೃಹ ಸಚಿವರು ಆರೋಪಿತರ ಮನೆಗೆ ಹೋಗಿ ಗೋಡಂಬಿ, ಚಹಾ ಸೇವನೆ ಮಾಡಿದ್ದರು. ಮಾಜಿ ಸಚಿವರೊಬ್ಬರು ಆರೋಪಿಗಳ ಬಂಧನವಾದಾಗ ಬಿಡುಗಡೆ ಮಾಡಲು ಕೋರಿದ್ದರು. ಈಗ ನನ್ನ ಹಾಗು ನಮ್ಮ ಶಾಸಕರ ಬಗ್ಗೆ ಅನುಮಾನಗಳಿದ್ದರೆ ಬಿಜೆಪಿ ದಾಖಲೆ ನೀಡಲಿ. ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ, ಜೊತೆಗೆ ಆಳವಾಗಿ ಅಧ್ಯಯನ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.

ಯುವಕರ ಭವಿಷ್ಯದ ಕುರಿತು ಸರ್ಕಾರಕ್ಕೆ ಬದ್ಧತೆ ಇದೆ. ಈ ಹಿಂದೆ ಅಂತಿಮ ಪಟ್ಟಿ ಪ್ರಕಟಣೆ ಆದ 7 ತಿಂಗಳ ಮೇಲೆ ಸರ್ಕಾರ ಎಚ್ಚೆತ್ತುಕೊಂಡಿತ್ತು. ಆದರೆ ಈಗ ಇಲ್ಲಿ ಹಾಗಾಗಿಲ್ಲ‌. ಯುವಕರ ಭವಿಷ್ಯಕ್ಕಾಗಿ Prevention of Corruption in Government Recruitment (ಸರ್ಕಾರಿ ನೇಮಕಾತಿಯಲ್ಲಿ ಭ್ರಷ್ಟಾಚಾರ ತಡೆ) ಬಿಲ್ ತಯಾರಿಸುತ್ತಿದ್ದೇವೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ಖಾಸಗಿ ಬಿಲ್ ಮೂವ್ ಮಾಡಿದ್ದೆ‌. ಈ ಬಗ್ಗೆ ಸಿಎಂ ಅವರೊಂದಿಗೆ ಚರ್ಚಿಸಲಾಗಿದೆ. ಅದನ್ನು ಈಗಾಗಲೇ ಕಾನೂನು ಸಚಿವರ ಒಪ್ಪಿಗೆ ನಂತರ ಡಿಪಿಆರ್ ಗೆ ಕಳಿಸಿದ್ದಾರೆ. ಸಿಎಂ ಅವರು ಡಿಪಿಆರ್ ತರಿಸಿಕೊಂಡು ಮಂಜೂರು ಮಾಡಿದರೆ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದರು.

ಪರೀಕ್ಷೆಗಳಲ್ಲಿ ನಡೆದ ಅಕ್ರಮ ಸರ್ಕಾರಕ್ಕೆ ಮುಜುಗರ ಎದುರಾದರೂ ಕೂಡಾ ಪರೀಕ್ಷೆಗೆ ಮುನ್ನ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಪರೀಕ್ಷಾ ಕೇಂದ್ರದ ಬಳಿಯ ಲಾಡ್ಜ್ ಗಳ ತಪಾಸಣೆ ನಡೆಸಲಾಗಿದೆ. 200 ಅಡಿ ಒಳಗೆ ಯಾವುದೇ ವಾಹನಗಳ ನಿಲುಗಡೆಗೆ ಅವಕಾಶ ನೀಡಿಲ್ಲ. ಡಿಟೆಕ್ಟರ್ ಕೂಡಾ ಅಳವಡಿಸಲಾಗಿತ್ತು. ಹಿಂದೆ ಈ ರೀತಿ ಕ್ರಮ ಕೈಗೊಳ್ಳಲಾಗಿತ್ತಾ? ಎಂದು ಪ್ರಶ್ನಿಸಿದ ಖರ್ಗೆ, ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ 50% ಅಭ್ಯರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು ಎಂದು ತಿಳಿಸಿದರು.

ಕಾಪಿ ಹೊಡೆಯುವ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಮಫ್ತಿಯಲ್ಲಿ ಪರಿಶೀಲನೆಗೆ ಹೋಗಿದ್ದರು. ಆಗ ಆರ್.ಡಿ ಪಾಟೀಲ್ ಹಿಂದಿನಿಂದ ಹೋಗಿದ್ದಾನೆ ಎಂದರು. ಪೊಲೀಸರ ಮಧ್ಯೆ ಕ್ರೆಡಿಟ್ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದೆ ಎನ್ನುವುದನ್ನು ತಳ್ಳಿಹಾಕಿದ ಸಚಿವರು ಅಧಿಕಾರಿಗಳು ಇನ್ನೂ ಬಿಜೆಪಿಯ ಅಮಲಿನಲ್ಲಿ ಇದ್ದಾರೆ. ನಾವು ಗ್ಯಾರಂಟಿ‌ ಯೋಜನೆ ಜಾರಿಗೆ ತರುವುದರಲ್ಲಿ ಸ್ವಲ್ಪ ಆ ಕಡೆ ಬ್ಯುಸಿ ಆಗಿದ್ದೆವು. ಅವರಿಗೆ ಟೈಟ್ ಮಾಡಲು ಕಾಲಾವಕಾಶ ಬೇಕು. ನಾವು ಅಧಿಕಾರಕ್ಕೆ ಬಂದ ಮೇಲೆ ಸುಧಾರಣೆ ಕಂಡಿದೆ ಎಂದು ಪ್ರಿಯಾಂಕ್​ ಖರ್ಗೆ ಹೇಳಿದರು.

ಕಿಯೋನಿಕ್ಸ್ ನಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಜೆಪಿಯವರಿಗೆ ಮಾಡಲು‌ ಕೆಲಸ ಇಲ್ಲ. ಅವರು ಯಾರೋ ಹೇಳಿದ್ದನ್ನು ಕೇಳುತ್ತಾರೆ. ಸುಳ್ಳಿನ‌ ಕಾರ್ಖಾನೆ ತೆಗೆದಿದ್ದಾರೆ. ಐಟಿ ಸೆಲ್ ನವರಹ ವಾಟ್ಸಪ್ ನಲ್ಲಿ ಏನು ಹಾಕುತ್ತಾರೋ ಅದನ್ನೇ ನಂಬುತ್ತಾರೆ. ಯಾವುದೇ ಪ್ರಕರಣದ ಕುರಿತಂತೆ ಆಳವಾದ ಅಧ್ಯಯನ ಮಾಡುವುದನ್ನು ಬಿಜೆಪಿ ಕಲಿಯಲಿ. ನಾಳೆ ಬೆಂಗಳೂರಿನಲ್ಲಿ ಈ ಬಗ್ಗೆ ಪ್ರೆಸ್ ಮೀಟ್ ಮಾಡಲಿದ್ದೇನೆ. ಆಗ ಯಾರು ರಾಜೀನಾಮೆ ನೀಡಬೇಕಾಗಬಹುದು ಎನ್ನುವ ಸಂಗತಿ‌ ಹೊರಬರಲಿದೆ ಎಂದು ಕಿಡಿಕಾರಿದರು.

ಬಿಜೆಪಿಯವರು ಮೂರನೆಯ ಪಾರ್ಟಿ‌ ಪರಿಶೀಲನೆ ಮಾಡದೆ ದುಡ್ಡು ಬಿಡುಗಡೆ ಮಾಡಿ ಎನ್ನುತ್ತಾರಲ್ಲ. ಇದೇನು 40% ಸರ್ಕಾರವಲ್ಲ. ಜನರ ತೆರಿಗೆಯ ದುಡ್ಡು ಯಾರು ಸರಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೋ ಅವರಿಗೆ ದುಡ್ಡು ಸಿಗಲಿದೆ.‌ ಯಾರು ಉಪ್ಪು ತಿಂದಿದ್ದಾರೋ ಅವರು ನೀರು ಕುಡಿಯಲೇಬೇಕು. ನಾನು ಯಾವ ಕಾಮಗಾರಿಯಲ್ಲಿ ದುಡ್ಡು ತೆಗೆದುಕೊಂಡಿದ್ದೀನಿ ಎಂದು ಹೇಳಲಿ ಎಂದು ಸಚಿವರು ಸವಾಲು ಹಾಕಿದರು.

ಕರ್ನಾಟಕ‌ ಸರ್ಕಾರದ ಕಾರ್ಯವೈಖರಿ‌ ಬಗ್ಗೆ ಪ್ರಧಾನಿ ನರೇಂದ್ರ ಮೋದಿ‌ ಮಧ್ಯಪ್ರದೇಶದಲ್ಲಿ ಟೀಕೆ‌ ಮಾಡಿರುವ ಕುರಿತು ಮಾಧ್ಯಮದವರು ಕೇಳಿದಾಗ ಪ್ರತಿಕ್ರಿಯಿಸಿ, ಮೋದಿ ಅವರಿಗೆ ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸ‌ ಗೊತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ‌ ಬಂದಾಗ ಐವರು ಸಿಎಂ ಅವರನ್ನು ಬದಲಿಸಿದ್ದಾರೆ. ಮಾಜಿ‌ ಸಿಎಂ ದಿಲ್ಲಿಯಲ್ಲಿ ಅವರ ಮನೆ ಕಾದರೂ ಕ್ಯಾರೇ ಅಂದಿರಲಿಲ್ಲ. ಕೆಳಮನೆ ಹಾಗೂ ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕರು ಯಾರು? ನಮ್ಮಲ್ಲಿ ಸಮರ್ಥ ಎಐಸಿಸಿ ಅಧ್ಯಕ್ಷರು, ಸಮರ್ಥ‌ ಸಿಎಂ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು‌ ಇದ್ದಾರೆ. ಅವರ ಬಳಿ ಯಾರಿದ್ದಾರೆ? ಮೋದಿ ಅವರು ಮೊದಲು ತಮ್ಮ ಮನೆಯನ್ನು ಸ್ವಚ್ಛಗೊಳಿಸಿಕೊಳ್ಳಲಿ. ಮೋದಿಯವರ ಕೃಪಾಕಟಾಕ್ಷದಿಂದ 40% ಸರ್ಕಾರ ಎಂದು ಹೆಸರು ಬಂದಿದೆ ಎಂದು ಟಾಂಗ್ ನೀಡಿದರು.

ಇದನ್ನೂ ಓದಿ :ಪಿಎಸ್ಐ ಹಗರಣ: ಆರೋಪ ಮಾಡುವ ಮುನ್ನ ಬಿಜೆಪಿ ನಾಯಕರು ಹೋಂವರ್ಕ್ ಮಾಡಿಕೊಂಡು ಬರಲಿ - ಸಚಿವ ಪ್ರಿಯಾಂಕ್​ ಖರ್ಗೆ

Last Updated : Nov 8, 2023, 2:22 PM IST

ABOUT THE AUTHOR

...view details