ಕರ್ನಾಟಕ

karnataka

ಪ್ರತ್ಯೇಕ ಘಟನೆ: ಜೈಲಿನಲ್ಲಿದ್ದ ಗಂಡನಿಗೆ ಗಾಂಜಾ ಕೊಡಲು ಹೋಗಿ ಸಿಕ್ಕಿ ಬಿದ್ದ ಹೆಂಡತಿ - ಪುಟ್ಟ ಮಗುವಿನೊಂದಿಗೆ ಬಾವಿಗೆ ಹಾರಿದ ಮಹಿಳೆ

By

Published : Aug 2, 2023, 6:43 AM IST

Kalburgi News: ಜೀನ್ಸ್ ಪ್ಯಾಂಟಿನಲ್ಲಿ ಗಾಂಜಾ ತುಂಬಿ ಹೊಲಿಗೆ ಹಾಕುವ ಮೂಲಕ ಎಲ್ಲರ ಕಣ್ಣು ತಪ್ಪಿಸಿ ಗಂಡನಿಗೆ ಮಾದಕವಸ್ತು ತಲುಪಿಸಲು ಯತ್ನಿಸಿದ ಮಹಿಳೆಯ ಕೈಚಳಕವನ್ನು ಕಲಬುರಗಿ ಕೇಂದ್ರ ಕಾರಾಗೃಹದ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.

Kalaburagi
ಕಲಬುರಗಿ ಕೇಂದ್ರ ಕಾರಾಗೃಹ

ಕಲಬುರಗಿ: ಗಂಡ - ಹೆಂಡತಿ ಮಧ್ಯೆ ಸಾಮರಸ್ಯವಿದ್ದಷ್ಟು ಜೀವನ‌ ಸುಖಕರವಾಗಿರುತ್ತದೆ. ಆದರೆ, ಈ ದಂಪತಿ ನಡುವೆ ಕೊಂಚ ಸಾಮರಸ್ಯ ಹೆಚ್ಚಾಗಿಯೇ ಇದ್ದಂತಿದೆ. ಏಕೆಂದರೆ, ಜೈಲಿನಲ್ಲಿ ಖೈದಿಯಾಗಿರುವ ಗಂಡನಿಗೆ ಗಾಂಜಾ ಕೊಡಲು ಹೋಗಿ ಮಹಿಳೆಯೊಬ್ಬರು ಸಿಕ್ಕಿಬಿದ್ದಿದ್ದಾರೆ. ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಖೈದಿಯಾಗಿರುವ ಗಂಡನನ್ನು ಭೇಟಿಯಾಗುವ ಸೋಗಿನಲ್ಲಿ ಬಂದು ಗಾಂಜಾ ಕೊಡಲು ಯತ್ನಿಸಿದ್ದಾರೆ. ಬಳಿಕ ಸಿಬ್ಬಂದಿಗೆ ತನ್ನ ಕೈಚಳಕ ಗೊತ್ತಾಗುತ್ತಿದ್ದಂತೆ ಪರಾರಿಯಾಗಿದ್ದಾಳೆ.

ಪ್ರಕರಣವೊಂದರಲ್ಲಿ ಜೈಲುವಾಸ ಅನುಭವಿಸುತ್ತಿರುವ ಜಾಲೇಂದ್ರನಾಥ ಕಾವಳೆ ಎಂಬಾತನಿಗೆ ಗಾಂಜಾ ಪೂರೈಕೆ ಮಾಡಲು ಪ್ರಯತ್ನಿಸಿದ ಆತನ ಪತ್ನಿ ಸುನೀತಾ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದಿದ್ದಾಳೆ.‌ ಸೋಮವಾರ ಸಾಯಂಕಾಲ 5-15 ಕ್ಕೆ ಗಂಡನನ್ನು ಭೇಟಿ ಮಾಡಲು ಜೈಲಿಗೆ ಆಗಮಿಸಿದ ಸುನೀತಾ ಸಂದರ್ಶನದ ಚೀಟಿ ಪಡೆದಿದ್ದಳು. ಬರುವಾಗ ಗಂಡನಿಗಾಗಿ ಎರಡು ಜೀನ್ಸ್ ಪ್ಯಾಂಟ್ ಕೂಡ ತಂದಿದ್ದಾಳೆ. 'ಜೀನ್ಸ್ ಪ್ಯಾಂಟ್‌ನ ಬೆಲ್ಟ್ ಪಟ್ಟಿಯಲ್ಲಿ' ಗಾಂಜಾ ಇಟ್ಟು ಅನುಮಾನ ಬರದಂತೆ ಕೈ ಹೊಲಿಗೆ ಹಾಕಿದ್ದಾಳೆ.

ಗಂಡನಿಗೆ ಕೊಡುವ ಮುನ್ನ ಜೈಲು ಭದ್ರತಾ ಸಿಬ್ಬಂದಿ ಕೈಗೆ ಪರಿಶೀಲನೆಗಾಗಿ ಒಪ್ಪಿಸಿದ್ದಾಳೆ‌. ಬಳಿಕ ತಾನೂ ಹೆಣ್ಣು ಮಕ್ಕಳ ತಪಾಸಣಾ ಕೊಣೆಗೆ ಹೋಗಿ ತಪಾಸಣೆಗೆ ಒಳಗಾಗಿದ್ದಾಳೆ. ಇತ್ತ ಪ್ಯಾಂಟ್​ ಪರಿಶೀಲನೆ ಮಾಡಿದ ಜೈಲು ಭದ್ರತಾ ಸಿಬ್ಬಂದಿಗೆ ಪ್ಯಾಂಟಿನ್ ಬೆಲ್ಟ್ ಪಟ್ಟಿ ಉಬ್ಬಿಕೊಂಡಂತೆ ಕಂಡಿದೆ. ಅನುಮಾನಗೊಂಡು ಕಟ್ ಮಾಡಿ ನೋಡಿದಾಗ ಗಾಂಜಾ ಪತ್ತೆ ಆಗಿದೆ. ಭದ್ರತಾ ಸಿಬ್ಬಂದಿ ತನ್ನ ಗುಟ್ಟು ರಟ್ಟು ಮಾಡಿರುವ ವಿಷಯ ಅರಿತ ಸುನೀತಾ ನಿಧಾನವಾಗಿ ಅಲ್ಲಿಂದ ಯಾರಿಗೂ ಗೊತ್ತಾಗದಂತೆ ಪರಾರಿಯಾಗಿದ್ದಾಳೆ ಎಂದು ಜೈಲಾಧಿಕಾರಿಗಳು ದೂರಿನಲ್ಲಿ ವಿವರಿಸಿದ್ದಾರೆ.

ಸುನೀತಾ ಪಡೆದ ಸಂದರ್ಶನದ ಚೀಟಿ, ಆಕೆಯ ಆಧಾರ್​ ಕಾರ್ಡ್ ಝರಾಕ್ ಪ್ರತಿ, ಎರಡು ಜೀನ್ಸ್ ಪ್ಯಾಂಟ್, ಪ್ಯಾಂಟಿನಲ್ಲಿ ದೊರೆತ ಸುಮಾರು 15 ಗ್ರಾಂ ಗಾಂಜಾ ಆಧರಿಸಿ ಆಕೆಯ ವಿರುದ್ಧ ಕರ್ನಾಟಕ ಕಾರಾಗೃಹ (ತಿದ್ದುಪಡಿ) ಅಧಿನಿಯಮ 2022 ರ ಕಲಂ 42 ರಲ್ಲಿ ಹಾಗೂ ಎನ್‌ಡಿಪಿಎಸ್ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳುವಂತೆ ಜೈಲಾಧಿಕಾಗಳು ಫರತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಫರತಾಬಾದ್​ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ :ಗಾಂಜಾ ಅಮಲಿನಲ್ಲಿ ನಡುರಸ್ತೆಯಲ್ಲಿ ಪುಡಿರೌಡಿಗಳ ಅಟ್ಟಹಾಸ: ಸಿಸಿಟಿವಿ ದೃಶ್ಯ

ಪುಟ್ಟ ಮಗುವಿನೊಂದಿಗೆ ಬಾವಿಗೆ ಹಾರಿದ ಮಹಿಳೆ : ಕಲಬುರಗಿ ಹೊರವಲಯದ ತಾಜಸುಲ್ತಾನಪುರ ಗ್ರಾಮದ ಬಾವಿಯೊಂದಕ್ಕೆ‌ ಹಾರಿ ಹೀರಾಬಾಯಿ ದುಬಲಗುಂಡ್ಡಿ (38), ಇವರ ಪುತ್ರಿ ಸೌಜನ್ಯ (4) ಸಾವನ್ನಪ್ಪಿದ್ದಾರೆ.‌ ಗಂಡನ ನಿಧನದಿಂದ ಮಾನಸಿಕವಾಗಿ ನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ.

ಆಳಂದ ತಾಲೂಕಿನ ವಿಕೆ ಸಲಗರ ಗ್ರಾಮದ ಹೀರಾಬಾಯಿ ಅವರಿಗೆ ತಾಜಸುಲ್ತಾನಪುರ ಗ್ರಾಮದ ನಾಗಣ್ಣ ದುಬಲಗುಂಡಿ ಜೊತೆ 16 ವರ್ಷದ ಹಿಂದೆ ಮದುವೆ ಮಾಡಿ‌ ಕೊಡಲಾಗಿತ್ತು.‌ ಇವರಿಗೆ ಎರಡು ಹೆಣ್ಣು, ಎರಡು ಗಂಡು ಒಟ್ಟು ನಾಲ್ಕು ಮಕ್ಕಳಿದ್ದಾರೆ. ಕಳೆದ ಒಂದೂವರೆ ವರ್ಷದ ಹಿಂದೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ನಾಗಣ್ಣ ದುಬಲಗುಂಡಿ ನಿಧನರಾಗಿದ್ದಾರೆ. ಆಗಿನಿಂದ ಮಾನಸಿಕವಾಗಿ ಕುಗ್ಗಿದ್ದ ಹೀರಾಬಾಯಿ, ಸೋಮವಾರ ತಮ್ಮ ಕೊನೆಯ ನಾಲ್ಕು ವರ್ಷದ ಮಗು‌ ಸೌಜನ್ಯಾಳನ್ನು ಕರೆದುಕೊಂಡು ಬಾವಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ ಎಂದು ಸಬ್ ಅರ್ಬನ್ ಠಾಣೆಯಲ್ಲಿ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details