ಕರ್ನಾಟಕ

karnataka

ETV Bharat / state

ಟಿಪ್ಪರ್‌ ಹರಿದು ದಂಪತಿ‌ ಸಾವು, ಮೂರು ವರ್ಷದ ಕಂದ ಅನಾಥ

ಟಿಪ್ಪರ್ ಹರಿದ ಪರಿಣಾಮ ದಂಪತಿ ಮೃತಪಟ್ಟಿದ್ದು, ಮಗು ಪ್ರಾಣಾಪಾಯದಿಂದ ಪಾರಾಗಿದೆ. ಇನ್ನು ಅಪ್ಪ ಅಮ್ಮನನ್ನು ಕಳೆದುಕೊಂಡು ಮೂರು ವರ್ಷದ ಕಂದ ಅನಾಥವಾಗಿದೆ.

By

Published : Apr 22, 2023, 7:40 AM IST

ರಸ್ತೆ ಅಪಘಾತ
ರಸ್ತೆ ಅಪಘಾತ

ಕಲಬುರಗಿ:ದ್ವಿಚಕ್ರ ವಾಹನದ ಮೇಲೆ ಟಿಪ್ಪರ್‌ ಹರಿದ ಪರಿಣಾಮ ಸ್ಥಳದಲ್ಲಿಯೇ ದಂಪತಿ ಮೃತಪಟ್ಟು, ಮೂರು ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿ ಅನಾಥವಾಗಿರುವ ಹೃದಯವಿದ್ರಾವಕ ಘಟನೆ ಶುಕ್ರವಾರ ರಾತ್ರಿ ರಾಮಮಂದಿರ ಬಳಿ ನಡೆದಿದೆ. ರಾಣೋಜಿ ವಾಡೇಕರ್ (42) ಹಾಗೂ ಪತ್ನಿ ಸುಜಾತಾ ಅಲಿಯಾಸ್ ರೇಣುಕಾ ವಾಡೇಕರ್( 35) ಮೃತ ದಂಪತಿ. ಇವರ ಮೂರು ವರ್ಷದ ಗಂಡು ಮಗು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ.

ಮೃತ ದಂಪತಿ ತಮ್ಮ ಮಗು ಸಮೇತ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಟಿಪ್ಪರ್ ಹರಿದಿದೆ. ವಾಹನದ ಚಕ್ರದಡಿ ಸಿಲುಕಿದ ಪತಿ ಪತ್ನಿಯ ದೇಹ ಛಿದ್ರವಾಗಿದ್ದು, ಸ್ಥಳದಲ್ಲಿಯೇ ಇಬ್ಬರ‌ ಪ್ರಾಣ ಪಕ್ಷಿ ಹಾರಿ ಹೋಗಿದೆ. ಅದೃಷ್ಟವಶಾತ್, ಮಗು ವಾಹನದ ಕೆಳೆಗೆ ಸಿಕ್ಕಿಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದೆ. ಘಟನೆ ನಂತರ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಅಲ್ಲೇ ಇದ್ದಂತಹ ಜನ ಆಕ್ರೋಶಗೊಂಡ ಟಿಪ್ಪರ್ ಗ್ಲಾಸ್​ಒಡೆದು ಹಾಕಿದ್ದಾರೆ. ದಂಪತಿ ಕಲಬುರಗಿ ಹೊರವಲಯದ ಶರಣಸಿರಸಗಿ ಮಡ್ಡಿ ನಿವಾಸಿಗಳಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ದಂಪತಿ‌ ಸಾವನ್ನಪ್ಪಿ ಮಗು ಅನಾಥವಾದ ವಿಷಯ ಅರಿತು ಜನರು ಕಣ್ಣೀರು ಹಾಕಿದರು.‌ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.‌

ಬಿಜೆಪಿ‌ ಕಾರ್ಯಕರ್ತನ ಮೇಲೆ ಹಲ್ಲೆ:ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ‌ ಮತ್ತಿಮಡು ಅವರ ಪ್ರಚಾರದಲ್ಲಿ ಪಾಲ್ಗೊಂಡ ಯುವಕನ ಮೇಲೆ ಹಲ್ಲೆ‌ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಲಬುರಗಿ ಗ್ರಾಮೀಣ ಕ್ಷೇತ್ರದ ಮರತೂರ ಗ್ರಾಮಕ್ಕೆ ಶಾಸಕ, ಬಿಜೆಪಿ ಅಭ್ಯರ್ಥಿ ಬಸವರಾಜ‌ ಮತ್ತಿಮಡು ಪ್ರಚಾರಕ್ಕೆ ಹೋದಾಗ, ಗ್ರಾಮದ ಯಲ್ಲಾಲಿಂಗ ಪೂಜಾರಿ‌ ಎಂಬ ಬಿಜೆಪಿ ಕಾರ್ಯಕರ್ತ ಮತ್ತಿಮಡು ಪರವಾಗಿ ಜೈಕಾರ ಹಾಕಿ ಹೂಮಳೆಗೈದಿದ್ದ. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಮತ್ತಿಮಡು ಪ್ರಚಾರ ಮುಗಿಸಿ ಮರಳುತಿದ್ದಂತೆ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ

ಹಲ್ಲೆಯಿಂದ ಗಾಯಗೊಂಡ ಯಲ್ಲಾಲಿಂಗ ಕಲಬುರಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಬಸವರಾಜ‌ ಮತ್ತಿಮಡು ಗಾಯಾಳು ಯಲ್ಲಾಲಿಂಗ ಪೂಜಾರಿ ಆರೋಗ್ಯ ವಿಚಾರಿಸಿ ನಂತರ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹತಾಶೆಯಿಂದ ಕಾಂಗ್ರೆಸ್‌ನವರು ಈ ರೀತಿ ಮಾಡ್ತಿದ್ದಾರೆ. ನಾನು ಪ್ರಚಾರ ಮುಗಿಸಿ ತೆರಳಿದ ಮೇಲೆ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. MLC ಚುನಾವಣೆ ಸಂದರ್ಭದಲ್ಲೂ ಮರತೂರ್​ನಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ರು. ಇದೀಗ ಗ್ರಾಮೀಣ ಕ್ಷೇತ್ರದಲ್ಲಿ ಜನ ಬಿಜೆಪಿ ಪರವಾಗಿದ್ದಾರೆ. ಹೀಗಾಗಿ ಕಾಂಗ್ರೆಸ್​​ನವರು ಹತಾಶರಾಗಿ ಈ ರೀತಿ ಮಾಡ್ತಿದ್ದಾರೆ ಎಂದು‌ ದೂರಿದರು.

ಇದನ್ನೂ ಓದಿ:ಅಜ್ಜ, ತಂದೆಯ ಗೆಲುವಿಗೆ ಬರಿಗಾಲಲ್ಲಿ ಮತಬೇಟೆ, ಕೆಂಡ ಹಾಯ್ದ ಸಮರ್ಥ್‌ ಶಾಮನೂರು

ABOUT THE AUTHOR

...view details