ಕರ್ನಾಟಕ

karnataka

By

Published : Jan 5, 2023, 10:56 PM IST

ETV Bharat / state

ಜನಸಾಹಿತ್ಯ ಸಮ್ಮೇಳನ ಮಾಡುತ್ತಿರುವ ಸಹೋದರರು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ: ದೊಡ್ಡರಂಗೇಗೌಡ

ಹಾವೇರಿಯು ಪುಣ್ಯ ಭೂಮಿ. ಶಿಶುನಾಳ ಶರೀಫರಂತಹ ಸಂತರು ಓಡಾಡಿದ ನೆಲವಾಗಿದೆ. ಕನಕದಾಸರ ನಡೆದಾಡಿದ ಭೂಮಿ ಇದಾಗಿದೆ. ಇಲ್ಲಿಯ ಮಣ್ಣು, ಜನರ ನಡವಳಿಕೆಗಳು ನನ್ನ ಮೇಲೆ ಪ್ರಭಾವ ಬೀರಿವೆ ಎಂದು 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ ಹೇಳಿದರು.

writer-dodda-rangegowda-talks-in-haveri
ಜನಸಾಹಿತ್ಯ ಸಮ್ಮೇಳನ ಮಾಡುತ್ತಿರುವ ಸಹೋದರರು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ: ದೊಡ್ಡರಂಗೇಗೌಡ

ಹಾವೇರಿ:ಜಿ.ಎಸ್. ಶಿವರುದ್ರಪ್ಪ ಅವರ ನಿಧನದ ಬಳಿಕ ರಾಷ್ಟ್ರಕವಿ ಹುದ್ದೆ ಖಾಲಿ ಇದೆ. ಅದು ಸರ್ಕಾರಕ್ಕೆ ಬಿಟ್ಟ ವಿಚಾರ ನಾನು ಸಿಎಂ ಬಳಿ ಹೋಗಿ ರಾಷ್ಟ್ರಕವಿಯ ನೇಮಕ ಮಾಡಿ ಒತ್ತಾಯ ಮಾಡಲು ಆಗುತ್ತದೆಯೇ? ಎಂದು 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ದೊಡ್ಡರಂಗೇಗೌಡ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಸಮ್ಮೇಳನದ ಮುನ್ನಾದಿನ ಜಿಲ್ಲಾಧಿಕಾರಿ ಮನೆಗೆ ಭೇಟಿ ನೀಡಿ ಅವರು ಮಾತನಾಡುತ್ತಿದ್ದರು.

ಸರ್ಕಾರಕ್ಕೆ ಯಾವಾಗ ನೇಮಿಸಬೇಕು ಅಂತಾ ಅನಿಸುತ್ತೆದೆಯೋ ಅವಾಗ ಆ ಬಗ್ಗೆ ಗಮನ ಹರಿಸಬಹುದು. ಕೆಲವೊಂದು ರಾಜಕೀಯ ವಿಚಾರಗಳನ್ನ ಸಮ್ಮೇಳನದಲ್ಲಿ ಎಳೆದು ತರುವುದು ಬೇಡ. ಇದೊಂದು ಸಾಂಸ್ಕೃತಿಕ ಸಾಹಿತ್ಯಕ ವಿಷಯಗಳಿಗೆ ಸಂಬಂಧಪಟ್ಟ ಸಮ್ಮೇಳನ. ತಿಳಿಯಾದ ನೀರನ್ನು ರಾಡಿ ಎಬ್ಬಿಸುವುದು ಸುಲಭ, ಆದರೆ ರಾಡಿಯಾದ ನೀರನ್ನು ತಿಳಿಗೊಳಿಸಲು ಬಹಳ ಸಮಯ ಬೇಕು. ಹೀಗಾಗಿ ಇಲ್ಲಿಯ ತಿಳಿಯನ್ನ ಕಾಪಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದು ದೊಡ್ಡರಂಗೇಗೌಡ ತಿಳಿಸಿದರು.

ಹಾವೇರಿಯಲ್ಲಿ ಸಾಹಿತಿ ದೊಡ್ಡರಂಗೇಗೌಡ

ಹಾವೇರಿ ಪುಣ್ಯ ಭೂಮಿ, ತಪೋ ಭೂಮಿ. ಶಿಶುನಾಳ ಶರೀಫರಂತಹ ಸಂತ ಓಡಾಡಿದ ನೆಲವಾಗಿದೆ. ಕನಕದಾಸರ ನಡೆದಾಡಿದ ಭೂಮಿ ಇದು. ಇಲ್ಲಿಯ ಮಣ್ಣು, ಜನ, ಅವರ ನಡವಳಿಕೆಗಳು ನನ್ನ ಮೇಲೆ ಪ್ರಭಾವ ಬೀರಿವೆ. ಈ ಹಿಂದೆ ಶಿಶುನಾಳ ಶರೀಫರ ಗದ್ದುಗಿಗೆ ಭೇಟಿ ನೀಡಿದಾಗ ನಿಮ್ಮ ಕವಿತ್ವದ ಸ್ವಲ್ಪ ಅಂಶವಾದರೂ ನನ್ನಲ್ಲಿ ಬರವಂತೆ ಪ್ರಾರ್ಥಿಸಿದ್ದೆ ಎಂದರು.

ಸಮ್ಮೇಳನ ಎನ್ನುತ್ತಿದ್ದಂತೆ ಜಾತ್ರೆಗಳು ಎಂಬ ಮಾತುಗಳು ಕೇಳಿಬರುತ್ತಿವೆ. ನಾನು ಜಾತ್ರೆ, ಸಂತೆ ಪರವಾಗಿದ್ದೇನೆ. ಮನುಷ್ಯ ಸಂಪರ್ಕ ಬರುವುದೇ ಇಲ್ಲಿ. ಸಮ್ಮೇಳನಗಳು ಸಾಹಿತಿಗಳ ಸಮ್ಮೀಲನಗಳಾಗಿವೆ. ಓದುಗನ ತಲುಪಲು. ಅವರನ್ನು ಕಾಣಲು ಮತ್ತು ಅವರ ಹಸ್ತಾಕ್ಷರ ಪಡೆಯಲು, ಸೆಲ್ಫಿ ಪಡೆಯುವ ವೇದಿಕೆಗಳಾಗಿವೆ. ಕನ್ನಡಿಗರ ಪ್ರೀತಿ ಕಾವೇರಿ, ಕೃಷ್ಣೆಯ ಹಾಗೆಯೇ ತುಂಬಿ ಹರಿಯುವಂತದ್ದು. ಆ ಚೈತನ್ಯ ಕಂಡಾಗ ಇನ್ನಷ್ಟು ಕನ್ನಡದ ಕೆಲಸ ಮಾಡುವಂತೆ ಅನಿಸುತ್ತದೆ. ಆರು ದಶಕಗಳಿಂದ ನಾನು ಬರೆಯುತ್ತಿದ್ದು, ದೊಡ್ಡರಂಗೇಗೌಡ ಯಾವಾಗಲೂ ಒಳ್ಳೆಯದನ್ನು ಬರೆಯುತ್ತಾನೆ, ಒಳ್ಳೆಯದನ್ನು ಮಾತನಾಡುತ್ತಾನೆ ಒಳ್ಳೆಯದನ್ನು ಮಾಡುತ್ತಾನೆ ಒಳ್ಳೆಯದಕ್ಕಾಗಿ ಹೋರಾಡುತ್ತಾನೆ ಎಂದು ತಿಳಿಸಿದರು.

ಕನ್ನಡ ಶಾಲೆಗಳಿಗೆ ಬೋಧಿಸಲು ಶಿಕ್ಷಕರಿಲ್ಲ: ಬೆಳಗಾವಿ ನಮ್ಮದು ಎನ್ನುವ ಮರಾಠಿಗರಿಗೆ ನಾನು ತಿಳಿಹೇಳಬೇಕು ಎನಿಸುತ್ತೆ. ಯಾವ ಕಾಲಕ್ಕೂ ನಾವು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡಬಾರದು. ಬೆಳಗಾವಿ ಬಿಟ್ಟುಕೊಟ್ಟರೆ ನಮ್ಮ ವ್ಯಕ್ತಿತ್ವವನ್ನೇ ಬಿಟ್ಟು ಕೊಟ್ಟಂತಾಗುತ್ತದೆ. ಕೇರಳದಲ್ಲಿರುವ ಕನ್ನಡ ಶಾಲೆಗಳಿಗೆ ಬೋಧಿಸಲು ಶಿಕ್ಷಕರಿಲ್ಲ. ಕೇರಳ ಸರ್ಕಾರ ಇಲ್ಲಿ ಶಿಕ್ಷಕರನ್ನು ನೇಮಿಸಬೇಕು. ಎದೆಗೆ ನಾಲ್ಕಕ್ಷರ ಬಿದ್ದಾಗ ಬದುಕು ಬಂಗಾರವಾಗುತ್ತದೆ. ತಮಿಳುನಾಡು ಸರ್ಕಾರ ತಮಿಳಿಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಹಾಗೂ ಕೇಂದ್ರದಿಂದ ಕೋಟ್ಯಾಂತರ ರೂಪಾಯಿ ಅನುದಾನ ತಂದಿದ್ದಾರೆ. ಆದರೆ ಕನ್ನಡಕ್ಕೆ ನಮ್ಮ ಸಂಸದರು ಆ ರೀತಿಯ ಹಣ ತರಲು ಆಗಿಲ್ಲವೆಂದು ದುಃಖವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡ ಶಾಸ್ತ್ರೀಯ ಭಾಷೆ ಎಂದು ಆಯ್ಕೆ ಮಾಡಿರುವುದು ಕೇವಲ ಅಲಂಕಾರಕ್ಕೆ ಎನ್ನುವಂತಾಗಿದೆ. ಕೆಲ ದಿನಗಳ ಹಿಂದಷ್ಟೇ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಕಚೇರಿಯ ನಿರ್ಮಿಸುವ ವಿಚಾರ ಬಂದಿದೆ. ಶಾಸ್ತ್ರೀಯ ಭಾಷೆ ಸ್ಥಾನ ಮಾನ ಎಂದರೆ ಅದು ನಮ್ಮೆಲ್ಲರ ಘನತೆ ಗೌರವ ತರುವಂತದ್ದು ಸಮಗ್ರ ಕನ್ನಡದ ಏಳಿಗೆಗಾಗಿ ನಾವೆಲ್ಲರೂ ದುಡಿಯಬೇಕಾಗಿದೆ. ಏಳನೇಯ ತರಗತಿಯವರೆಗೆ ಕನ್ನಡದಲ್ಲಿ ಮಾಧ್ಯಮದಲ್ಲಿ ಶಿಕ್ಷಣವಾಗಬೇಕು ಎನ್ನುವದು ನನ್ನ ಮಹತ್ವಾಕಾಂಕ್ಷೆ. ಮಾತೃಭಾಷೆಯ ಮೇಲಿರುವ ಅಭಿವ್ಯಕ್ತಿ ಸ್ವಾತಂತ್ರ ಯಾವ ಭಾಷೆಗಳಿಗೂ ಸಾಧ್ಯವಿಲ್ಲ. ಡಿಜಿಟಲ್‌ನ ಈ ದಿನಗಳಲ್ಲಿ ಸಹ ಕನ್ನಡದಿಂದ ಅನ್ನ ಕಾಣಬಹುದು ಇದಕ್ಕೆ ನನ್ನ ಕುಟುಂಬವೇ ಉದಾಹರಣೆ ಎಂದು ದೊಡ್ಡರಂಗೇಗೌಡ ತಿಳಿಸಿದರು.

ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ:ರೈಲು, ಅಂಚೆ ಕಚೇರಿಗಳಲ್ಲಿ ಕನ್ನಡ ಇಲ್ಲ. ನಾವು ಕನ್ನಡದಲ್ಲಿ ಆದೇಶ ಬರೆದರೆ ಅದು ಮರಳಿ ವಾಪಸ್ ಬರುತ್ತೆ. ಕನ್ನಡದಲ್ಲಿ ವ್ಯವಹಾರ ಮಾಡಿಕೊಳ್ಳುವ ಮೂಲಕ ಬದುಕು ಬಂಗಾರ ಮಾಡಿಕೊಳ್ಳಬೇಕು. ನಾನು ಕನ್ನಡ ಪಂತೀಯ,ನಾನು ವಿಶ್ವಮಾನವ ಪಂತೀಯ. ಜನಸಾಹಿತ್ಯ ಸಮ್ಮೇಳನ ಮಾಡುತ್ತಿರುವ ಸಹೋದರರೆ ದಯವಿಟ್ಟು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ ಎಂದು ದೊಡ್ಡರಂಗೇಗೌಡ ಅಹ್ವಾನಿಸಿದರು. ಭಿನ್ನಾಭಿಪ್ರಾಯಗಳನ್ನು ವೇದಿಕೆ ಮೇಲೆ ಬಗೆಹರಿಸಿಕೊಳ್ಳೋಣ ಬನ್ನಿ ಎಂದು ಅಹ್ವಾನ ನೀಡಿದರು.

86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ನಾಳೆಯಿಂದ ಮೂರು ದಿನ ಹಾವೇರಿಯಲ್ಲಿ ನಡೆಯಲಿದೆ.

ಇದನ್ನೂ ಓದಿ:ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರಥಮ ಬಾರಿಗೆ ವಿಶೇಷ ರಥದ ಸಿದ್ಧತೆ

ABOUT THE AUTHOR

...view details