ಹಾನಗಲ್:ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ವರ್ದಿ ಗ್ರಾಮದ ಜನತೆ ಕೆಮ್ಮು ಬಂದ್ರೆ ಕೆಮ್ಮವ್ವ ದೇವಿಗೆ ಪೂಜೆ ಸಲ್ಲಿಸಿ ಸಂಕಲ್ಪ ಮಾಡಿಕೊಂಡು ಕೆಮ್ಮು ವಾಸಿ ಮಾಡಿಕೊಳ್ತಾರಂತೆ.
ಕೆಮ್ಮಿದ್ರೆ ಕೆಮ್ಮವ್ವ ನೋಡ್ಕೊಳ್ತಾಳೆ... ಭಕ್ತಿಯಿಂದ ದೇವಿಗೆ ಪೂಜೆ ಸಲ್ಲಿಸ್ತಾರೆ ಈ ಜನ
ಸಾಮಾನ್ಯವಾಗಿ ಕೆಮ್ಮು ಬಂದ್ರೆ ಆಸ್ಪತ್ರೆಗೆ ಹೋಗುತ್ತೇವೆ. ಆದ್ರೇ, ಹಾನಗಲ್ ತಾಲೂಕಿನ ವರ್ದಿಗ್ರಾಮದ ಜನತೆ ಮಾತ್ರ ಕೆಮ್ಮವ್ವ ದೇವಿಗೆ ಪೂಜೆ ಸಲ್ಲಿಸಿ ಕೆಮ್ಮು ವಾಸಿ ಮಾಡಿಕೊಳ್ಳುತ್ತಾರೆ.
ಹೌದು, ವರ್ದಿ ಗ್ರಾಮದಲ್ಲಿ ಕೆಮ್ಮವ್ವ ದೇವಾಲಯವಿದೆ. ಈ ದೇವಾಲಯಕ್ಕೆ ಮತ್ತೊಂದು ಹೆಸರೇ ಉಡಚಮ್ಮ ದೇವಾಲಯ. ಸುಮಾರು ವರ್ಷಗಳಿಂದ ವರ್ದಿ ಗ್ರಾಮದಲ್ಲಿ ನೆಲೆಸಿರುವ ಶ್ರೀದೇವಿ ಕೆಮ್ಮವ್ವ, ಸತತ ಕೆಮ್ಮಿನಿಂದ ಬಳಲುತ್ತಿರುವ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರನ್ನು ಕೂಡಾ ಕೆಮ್ಮಿನಿಂದ ದೂರ ಮಾಡಿದ್ದಾಳೆ ಎನ್ನುವ ನಂಬಿಕೆ ಅದೆಷ್ಟೋ ಭಕ್ತರಲ್ಲಿದೆ.
ಇಲ್ಲಿ, ಕೆಮ್ಮಿನಿಂದ ಗುಣಮುಖರಾಗುವ ಭಕ್ತರು ಹುಣಸೆ ಹಣ್ಣು, ಉಪ್ಪು, ಬೆಳ್ಳುಳ್ಳಿ, ಸಿಹಿ ಅಡುಗೆಯ ಎಡೆಯನ್ನ ದೇವಿಗೆ ಅರ್ಪಿಸಿ ಭಕ್ತಿ ಮೆರೆಯುತ್ತಾರೆ. ಇಲ್ಲಿನ ಗ್ರಾಮದ ಜನತೆಗೆ ಕೆಮ್ಮವ್ವ ದೇವಿ ವರದಾನವಾಗಿದ್ದಾಳೆ ಅಂತಾರೆ ಇಲ್ಲಿಯ ಭಕ್ತರು.