ಕರ್ನಾಟಕ

karnataka

ವಿಶೇಷ ಪ್ಯಾಕೇಜ್‌ ಭರವಸೆ ನೀಡಿದ ಡಿಸಿ: ಪ್ರತಿಭಟನೆ ಹಿಂಪಡೆದ ಗರ್ಭಕೋಶ ವಂಚಿತ ಮಹಿಳೆಯರು

By

Published : Oct 18, 2022, 10:58 PM IST

ಗರ್ಭಕೋಶ ವಂಚಿತ ಮಹಿಳೆಯರು ವಿಶೇಷ ಪ್ಯಾಕೇಜ್‌ಗೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ವಾಪಾಸ್​ ಪಡೆದಿದ್ದಾರೆ.

women-who-withdrew-their-protest-in-haveri
ಪ್ರತಿಭಟನೆ ಹಿಂಪಡೆದ ಗರ್ಭಕೋಶ ವಂಚಿತ ಮಹಿಳೆಯರು

ಹಾವೇರಿ :ವಿಶೇಷ ಪ್ಯಾಕೇಜ್‌ಗೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗರ್ಭಕೋಶ ವಂಚಿತ ಮಹಿಳೆಯರು ವಾಪಸ್ ಪಡೆದಿದ್ದಾರೆ. ಜಿಲ್ಲಾಧಿಕಾರಿಗಳಿಂದ ಪರಿಹಾರ ನೀಡುವ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆದಿದ್ದಾರೆ.

ಕಳೆದ ಹಲವು ವರ್ಷಗಳ ಹಿಂದೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಾಸ್ಪತ್ರೆಯಲ್ಲಿ ಪಿ ಶಾಂತ ಎಂಬ ವೈದ್ಯ ಧನದ ದಾಹಕ್ಕೆ ಈ ಮಹಿಳೆಯರ ಗರ್ಭಕೋಶ ಕಿತ್ತುಹಾಕಿದ್ದರು. ಜ್ವರ ಕೆಮ್ಮು ಸುಸ್ತು ಎಂದು ಆಸ್ಪತ್ರೆಗೆ ಬಂದ ಬಡಮಹಿಳೆಯರ ಗರ್ಭಕೋಶಕ್ಕೆ ಕತ್ತರಿಹಾಕಿದ್ದರು. ತಾಲೂಕಿನ ತಾಂಡಾಗಳು ಸೇರಿದಂತೆ ವಿವಿಧ ಗ್ರಾಮಗಳ 1,522 ಮಹಿಳೆಯರ ಗರ್ಭಕೋಶಕ್ಕೆ ತೆಗೆದಿದ್ದರು. ಖಾಸಗಿ ಔಷಧಿ ಕೇಂದ್ರದ ಸಹಾಯಕ ಶಾಮೀಲಾಗಿ ಆಸ್ಪತ್ರೆಗೆ ಬಂದಿದ್ದ ಬಹುತೇಕ ಮಹಿಳೆಯರಿಗೆ ಮೋಸ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.

ಯಾವ ಸಮಸ್ಯೆಯಿಂದ ಆಸ್ಪತ್ರೆಗೆ ಮಹಿಳೆಯರು ಬಂದರೂ ಅವರಿಗೆ ಗರ್ಭಕೋಶ ತಗೆಯಬೇಕು ಎಂದು ಸಲಹೆ ನೀಡುತ್ತಿದ್ದರು. ಅದಕ್ಕಾಗಿ ಶಸ್ತ್ರಚಿಕಿತ್ಸೆ ಮಾಡಲು ಖಾಸಗಿ ಔಷಧಿ ಅಂಗಡಿಗೆ ಮಾತ್ರೆ ಸೇರಿದಂತೆ ಉಪಕರಣ ಬರೆದುಕೊಡುತ್ತಿದ್ದರು. ಮಕ್ಕಳಾದ ತಾಯಂದಿರಷ್ಟೇ ಅಲ್ಲದೆ ಮದುವೆಯಾಗದ ಯುವತಿಯರ ಗರ್ಭಕೋಶಕ್ಕೂ ಸಹ ಇತ ಕತ್ತರಿಹಾಕಿದ್ದರು. ನಂತರದ ದಿನಗಳಲ್ಲಿ ಈ ಮಹಿಳೆಯರಿಗೆ ತಮಗೆ ಆದ ಅನ್ಯಾಯದ ಬಗ್ಗೆ ತಿಳಿದಿತ್ತು.

ಪ್ರತಿಭಟನೆ ಹಿಂಪಡೆದ ಗರ್ಭಕೋಶ ವಂಚಿತ ಮಹಿಳೆಯರು

1,522 ಮಹಿಳೆಯರು ಸೇರಿ ಸಂಘಟಿತರಾಗಿ ಹೋರಾಟಕ್ಕೆ ಇಳಿದರು. ಈ ಕುರಿತಂತೆ ಪ್ರತಿಭಟನೆ ಹೋರಾಟ ಪ್ರಾರಂಭಿಸುತ್ತಿದ್ದಂತೆ ಸರ್ಕಾರ, ವೈದ್ಯನನ್ನ ಕಿತ್ತುಹಾಕಿತ್ತು. ಆದರೆ ಅಂದಿನಿಂದ ವಿಶೇಷ ಪ್ಯಾಕೇಜ್‌ಗೆ ಗರ್ಭಕೋಶ ಕಳೆದುಕೊಂಡ ಮಹಿಳೆಯರು ಪ್ರತಿಭಟನೆಗೆ ಇಳಿದಿದ್ದರು. ಪ್ರತಿಭಟನೆ ಅಂಗವಾಗಿ ಇದೇ ಏಪ್ರೀಲ್ ತಿಂಗಳಿನಲ್ಲಿ ರಾಣೆಬೆನ್ನೂರಿಂದ ಸಿಎಂ ಶಿಗ್ಗಾಂವಿ ನಿವಾಸಕ್ಕೆ ಈ ಮಹಿಳೆಯರು ಪಾದಯಾತ್ರೆ ಕೈಗೊಂಡಿದ್ದರು.

ಪಾದಯಾತ್ರೆ ಹಾವೇರಿಯ ನೆಲೋಗಲ್ ಬಳಿ ಬರುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತು ಸಮಸ್ಯೆ ಬಗೆಹರಿಸುವ ಭರವಸೆ ನೀಡಿತ್ತು. ಅಲ್ಲದೆ ಗರ್ಭಕೋಶ ಕಳೆದುಕೊಂಡ ಮಹಿಳೆಯರನ್ನು ಸಿಎಂ ಬಸವರಾಜ್ ಬೊಮ್ಮಾಯಿ ಬಳಿ ಕರೆದೊಯ್ಯಲಾಗಿತ್ತು. ಅಂದು ಮಹಿಳೆಯರ ತಲೆಯ ಮೇಲೆ ಕೈಇಟ್ಟು ಪರಿಹಾರ ನೀಡುವ ಭರವಸೆ ನೀಡಿದ್ದ ಸಿಎಂ ವಿಶೇಷ ಪ್ಯಾಕೇಜ್ ನೀಡಲಿಲ್ಲ.

ಇದರಿಂದ ನೊಂದ ಮಹಿಳೆಯರು ಇದೇ 17 ರಂದು ಸಿಎಂ ಶಿಗ್ಗಾಂವಿ ನಿವಾಸಕ್ಕೆ ಮತ್ತೆ ಪಾದಯಾತ್ರೆ ಕೈಗೊಂಡಿದ್ದರು. ಜಿಲ್ಲಾಡಳಿತ ಮತ್ತೆ ಪಾದಯಾತ್ರೆ ತಡೆದು ಪ್ರತಿಭಟನೆಗೆ ಅವಕಾಶ ಕಲ್ಪಿಸಿತ್ತು. ಅದರಂತೆ ಈ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ಕುಳಿತಿದ್ದರು. ಇದೀಗ ಮತ್ತೆ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಈ ಮಹಿಳೆಯರಿಗೆ ವಿಶೇಷ ಪ್ಯಾಕೇಜ್ ನೀಡುವ ಭರವಸೆ ನೀಡಿದೆ. ಇದರಿಂದ ಮತ್ತೆ ಪ್ರತಿಭಟನೆ ವಾಪಸ್ ಪಡೆದ ಮಹಿಳೆಯರು ಸರ್ಕಾರ ಭರವಸೆ ಈಡೇರಿಸದಿದ್ದರೆ ಮತ್ತೆ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ ;ಹಣದ ದಾಹಕ್ಕೆ ಮಹಿಳೆಯರ ಗರ್ಭಕೋಶ ಕತ್ತರಿಸಿದ ವೈದ್ಯ.. ಸಿಎಂ ಮನೆಗೆ ಪಾದಯಾತ್ರೆಗೆ ನಿರ್ಧರಿಸಿದ ಮಹಿಳೆಯರು

ABOUT THE AUTHOR

...view details