ಹಾವೇರಿ:ಪಠ್ಯ ವಾಪಸಾತಿ ಕುರಿತಂತೆ ನಾನು ಇನ್ನೂ ಅಧ್ಯಯನ ಮಾಡಿಲ್ಲ. ಈ ಕುರಿತಂತೆ ಸಾಕಷ್ಟು ಪರ ವಿರೋಧ ಇವೆ. ಆದರೆ ಒಂದಂತೂ ಸತ್ಯ ಈ ವಿಷಯದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಭಾಗವಹಿಸಬಾರದು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ಈ ವಿಚಾರವನ್ನು ಶಿಕ್ಷಣ ಇಲಾಖೆಯ ಡಿಎಸ್ಈಆರ್ಟಿಗೆ ಬಿಡಬೇಕು ಎಂದು ಒತ್ತಾಯಿಸಿದರು.
ಯಾವುದೇ ರಾಜಕೀಯ ಪಕ್ಷವಿರಲಿ ಡಿಎಸ್ಈಆರ್ಟಿ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಮಕ್ಕಳಿಗೆ ಅದನ್ನು ಕಲಿಸಿ ಇದನ್ನು ಕಲಿಸಿ ಎನ್ನುವ ಬದಲು ಸರ್ಕಾರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉಪಯೋಗವಾಗುವಂತಹ ಪಠ್ಯ ರಚಿಸುವ ನಿಲುವು ವ್ಯಕ್ತಪಡಿಸಬೇಕು ಎಂದು ಹೊರಟ್ಟಿ ಅಭಿಪ್ರಾಯಪಟ್ಟರು. ಡಿಎಸ್ಇಆರ್ಟಿ ಮೇಲೆ ನಮಗೆ ಯಾರಿಗೂ ಅಧಿಕಾರವಿಲ್ಲ. ಅದು ರಚಿಸಿದ ಪಠ್ಯವನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಬಹುದೇ ಹೊರತು ಪೂರ್ತಿ ಬದಲಾವಣೆ ಮಾಡಲು ಬರುವುದಿಲ್ಲ ಎಂದು ಹೊರಟ್ಟಿ ತಿಳಿಸಿದರು.
ಇವತ್ತಿನ ಶಿಕ್ಷಣ ಪದ್ದತಿ ಬಗ್ಗೆ ಮಾತನಾಡಿದ ಹೊರಟ್ಟಿ ಇಂಜಿನಿಯರ್ ಮತ್ತು ವೈದ್ಯರು ಬಿಟ್ಟರೆ ಇಂದಿನ ಶಿಕ್ಷಣ ಪದ್ದತಿಯಿಂದ ಯಾರೂ ಉದ್ಧಾರವಾಗುವುದಿಲ್ಲ. ಇವತ್ತಿನ ಶಿಕ್ಷಣ ಪದ್ದತಿಯಲ್ಲಿ ಬದುಕಿನ ಶಿಕ್ಷಣದ ಪದ್ದತಿಯಿಲ್ಲ ಎಂದು ಹೇಳಿದರು.