ಕರ್ನಾಟಕ

karnataka

ಹಾವೇರಿ ಜಿಲ್ಲೆಯಾದ್ಯಂತ ಭಾರಿ ಮಳೆ: ಕೆಳ ಸೇತುವೆಯಲ್ಲಿ ಸಿಲುಕಿದ ಸಾರಿಗೆ ಬಸ್

By

Published : May 21, 2022, 9:43 AM IST

ಪ್ರಯಾಣಿಕರನ್ನು ಸಾಗಿಸುತ್ತಿದ್ದ ಸಾರಿಗೆ ಬಸ್ ಕೆಳ ಸೇತುವೆಯಲ್ಲಿ ಸಿಲುಕಿರುವ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಯಲವಿಗಿ ಗ್ರಾಮದಲ್ಲಿ ನಡೆದಿದೆ.

bus caught in lower bridge in Haveri
ಕೆಳ ಸೇತುವೆಯಲ್ಲಿ ಸಿಲುಕಿದ ಸಾರಿಗೆ ಬಸ್

ಹಾವೇರಿ: ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಈ ಮಧ್ಯೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಸಾರಿಗೆ ಬಸ್ ಕೆಳ ಸೇತುವೆಯಲ್ಲಿ ಸಿಲುಕಿರುವ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಯಲವಿಗಿ ಗ್ರಾಮದಲ್ಲಿ ನಡೆದಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರದಿಂದ ಹಾವೇರಿ ಜಿಲ್ಲೆಯ ಸವಣೂರಿಗೆ ಬಸ್ ಹೊರಟಿತ್ತು. ಯಲವಿಗಿ ರೈಲು ಕೆಳ ಸೇತುವೆಯಲ್ಲಿ ನೀರು ನಿಂತಿದ್ದರೂ ಚಾಲಕ ಬಸ್ ಚಲಾಯಿಸಿದ್ದಾನೆ ಎನ್ನಲಾಗ್ತಿದೆ. ಪರಿಣಾಮ ಸೇತುವೆ ಮಧ್ಯದಲ್ಲಿ ಬಸ್ ನೀರಿನಲ್ಲಿ ಸಿಲುಕಿಕೊಂಡಿದೆ. ಬಸ್ ನೀರಲ್ಲಿ ಸಿಲುಕುತ್ತಿದ್ದಂತೆ ಪ್ರಯಾಣಿಕರು ಬಸ್​​ನಿಂದ ಇಳಿದು ಮೇಲೆ ಬಂದಿದ್ದಾರೆ. ಬಳಿಕ ಸ್ಥಳೀಯರು ಟ್ರ್ಯಾಕ್ಟರ್ ಸಹಾಯದಿಂದ ಬಸ್​​ನ್ನು ಮೇಲಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ.

ಕೆಳ ಸೇತುವೆಯಲ್ಲಿ ಸಿಲುಕಿದ ಸಾರಿಗೆ ಬಸ್

ಮರದ ಟೊಂಗೆ ಕತ್ತರಿಸಿ ಸಂಚಾರಕ್ಕೆ ಅನುವು:ಇನ್ನೊಂದಡೆ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದ್ದ ಮರದ ಟೊಂಗೆಗಳನ್ನ ಆಡೂರು ಪೊಲೀಸ್ ಠಾಣೆಯ ಪಿಎಸ್ಐ ಗಡ್ಡೆಪ್ಪ ಗುಂಜಟಗಿ ಅವರು ಕತ್ತರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟ ಘಟನೆ ಹಾನಗಲ್ ತಾಲೂಕು ಆಡೂರು ಗ್ರಾಮದ ಬಳಿ ನಡೆದಿದೆ. ಹಾವಣಗಿ ಮತ್ತು ಬಾಳಂಬೀಡ ಗ್ರಾಮದ ಮಧ್ಯದಲ್ಲಿ ಭಾರಿ ಮಳೆ ಗಾಳಿಗೆ ಮರಗಳು ರಸ್ತೆಗುರುಳಿದ್ದವು. ಮರಗಳು ರಸ್ತೆಗೆ ಬಿದ್ದಿದ್ದರಿಂದ ಸಂಚಾರ ಸ್ಥಗಿತಗೊಂಡಿತ್ತು.

ಈ ಸಂದರ್ಭದಲ್ಲಿ ಕಾರ್ಯ ನಿಮಿತ್ತ ಹೋಗುತ್ತಿದ್ದ ಪಿಎಸ್ಐ ಗಡ್ಡೆಪ್ಪ ಕೊಡಲಿ, ಮರ ಕತ್ತರಿಸುವ ಮಷಿನ್​​ಗಳ ಸಹಾಯದಿಂದ ಮರದ ಟೊಂಗೆ ಕತ್ತರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಪಿಎಸ್ಐ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ಥಳೀಯರು ಅವರ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.

ಮೈದುಂಬಿ ಭೋರ್ಗರೆಯುತ್ತಿರುವ ಮದಗ ಮಾಸೂರು ಕೆರೆ

ಮೈದುಂಬಿದ ಮದಗ ಕೆರೆ: ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮದಗ ಮಾಸೂರು ಕೆರೆ ಮೈದುಂಬಿದೆ. ಕೆರೆ ಮೈದುಂಬಿದ ಪರಿಣಾಮ ಕೋಡಿ ಬಿದ್ದಿದ್ದು, ಸುಂದರವಾದ ಕಿರು ಜಲಪಾತ ನಿರ್ಮಾಣವಾಗಿದೆ. ಮದಗ ಮಾಸೂರು ಕೆರೆಯಿಂದ ಹೊರಹೂಮ್ಮುವ ಕುಮದ್ವತಿ ಕಿರು ಜಲಪಾತವಾಗಿ ಧುಮ್ಮಿಕ್ಕುತ್ತಿರುವ ದೃಶ್ಯ ನಯನ ಮನೋಹರವಾಗಿದೆ. ಈ ಕಿರು ಜಲಪಾತ ಭೋರ್ಗರೆಯುತ್ತಿರುವುದನ್ನು ಕಣ್ತುಂಬಿಕೊಳ್ಳಲು ಜನರು ಮಳೆಯನ್ನೂ ಲೆಕ್ಕಿಸದೆ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಮಳೆ ಆರ್ಭಟ: ಗದ್ದೆಗೆ ತೆರಳಿದ್ದ ವ್ಯಕ್ತಿ ಸಾವು, ರಾಜಕಾಲುವೆಯಲ್ಲಿ ಶಿಶು ಶವ ಪತ್ತೆ

ABOUT THE AUTHOR

...view details