ಹಾವೇರಿ: ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿರುವುದನ್ನು ಇಡೀ ದೇಶವೇ ಸ್ವಾಗತ ಮಾಡಿದೆ ಎಂದು ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಉಳಿಯಬೇಕಾದರೆ ಈ ತೀರ್ಪನ್ನು ಸ್ವಾಗತ ಮಾಡಬೇಕು. ಪಕ್ಷಗಳು ತಪ್ಪು ಮಾಡಬಹುದು. ಆದರೆ, ನ್ಯಾಯಾಲಯ ತಪ್ಪು ಮಾಡುವುದಿಲ್ಲ ಎಂಬುದು ಸಾಬೀತಾಗಿದೆ ಎಂದು ಶಿವಾನಂದ ಪಾಟೀಲ್ ತಿಳಿಸಿದರು.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ 250 ಕೋಟಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಕುಮಾರಸ್ವಾಮಿ ವಿದೇಶ ಪ್ರವಾಸ ಮುಗಿಸಿ ಬಂದಿದ್ದಾರೆ. ವಿಮಾನ ನಿಲ್ದಾಣದಿಂದಲೇ ಕುಮಾರಸ್ವಾಮಿ ಆರೋಪಗಳನ್ನು ಹೊರಿಸಲು ಪ್ರಾರಂಭಿಸಲು ಶುರು ಮಾಡಿದರೆ ಕಷ್ಟ ಅಲ್ವಾ. ಪ್ರವಾಸ ಮುಗಿಸಿ ಈಗಷ್ಟೆ ಬಂದಿದ್ದಾರೆ. ಮನೆಗೆ ತಲುಪಿದ ನಂತರ ಹೇಳಿದರೆ ಚೆನ್ನಾಗಿತ್ತು ಎಂದು ಶಿವಾನಂದ ಪಾಟೀಲ್ ವ್ಯಂಗ್ಯವಾಡಿದರು. ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಸರ್ಕಾರದ ಮೇಲೆ ಸಿಟ್ಟಿಗೆ ಕಾರಣ ಏನು ಎಂಬುವ ಕುರಿತಂತೆ ಅವರನ್ನೇ ಕೇಳಬೇಕು ಎಂದು ಶಿವಾನಂದ ಪಾಟೀಲ್ ತಿಳಿಸಿದರು.
ಪಕ್ಷ ಕಟ್ಟಲು ದುಡಿಯುವವರು ಒಬ್ಬರು, ಅಧಿಕಾರ ಅನುಭವಿಸುವವರು ಒಬ್ಬರು ಎಂಬ ಬಸವರಾಜ್ ರಾಯರೆಡ್ಡಿ ಹೇಳಿಕೆಗೆ ಶಿವಾನಂದ ಪಾಟೀಲ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅದರ ಬಗ್ಗೆ ನನಗೆ ಗೊತ್ತಿಲ್ಲ, ಆ ವಿಷಯದ ಬಗ್ಗೆ ಕೇಲಿಲ್ಲ. ಅದರ ಬಗ್ಗೆ ಕಮೆಂಟ್ ಮಾಡಲ್ಲ. ಕಾಂಟ್ರರ್ವಸಿ ಬಗ್ಗೆ ಮಾತಾಡೊಕೆ ಹೋಗೊಲ್ಲ ಎಂದು ಪಾಟೀಲ ತಿಳಿಸಿದರು.