ಕರ್ನಾಟಕ

karnataka

ETV Bharat / state

ಅಕ್ರಮವಾಗಿ ಆಹಾರ ಧಾನ್ಯಗಳ ಕಿಟ್ ಸಾಗಣೆ ಆರೋಪ: ತನಿಖೆಗೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಒತ್ತಾಯ - investigation about trafficking food grains kit

ಹಾವೇರಿಯಲ್ಲಿ ಅಕ್ರಮವಾಗಿ ಆಹಾರ ಧಾನ್ಯಗಳ ಕಿಟ್ ಸಾಗಣೆ ಮಾಡಲಾಗಿದ್ದು, ಕಿಟ್​ ವಿತರಣೆಯಲ್ಲಿ ಶಾಸಕ ನೆಹರು ಓಲೇಕಾರ್ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಆರೋಪಿಸಿದ್ದಾರೆ.

Rudrappa Lamani
ರುದ್ರಪ್ಪ ಲಮಾಣಿ

By

Published : Jul 18, 2021, 9:24 AM IST

ಹಾವೇರಿ: ಕೋವಿಡ್ ಹಿನ್ನೆಲೆ ಲಾಕ್​ಡೌನ್​ ಜಾರಿಗೊಳಿಸಿದ್ದ ವೇಳೆ ಸರ್ಕಾರದ ವತಿಯಿಂದ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗಿತ್ತು. ಆದರೆ ಜಿಲ್ಲೆಯಲ್ಲಿ ಈ ಕಿಟ್‌ಗಳನ್ನು ಅಕ್ರಮವಾಗಿ ಸಾಗಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವ್ಯಕ್ತಿಯೋರ್ವ ನಗರಸಭೆಯಲ್ಲಿರುವ ಕಿಟ್‌ಗಳನ್ನು ಕಾರಿನಲ್ಲಿ ಬೇರೆ ಕಡೆಗೆ ಸಾಗಿಸಿರುವ ವಿಡಿಯೋ ವೈರಲ್ ಆಗಿದ್ದು, ಕಿಟ್​ ವಿತರಣೆಯಲ್ಲಿ ಶಾಸಕ ನೆಹರು ಓಲೇಕಾರ್ ರಾಜಕೀಯ ಮಾಡುತ್ತಿದ್ದಾರೆ. ಅವರು ಸೂಚಿಸಿದ ವ್ಯಕ್ತಿಗಳಿಗೆ ಮಾತ್ರ ಕಿಟ್ ವಿತರಿಸಲಾಗುತ್ತದೆ. ಜೊತೆಗೆ ಬಿಜೆಪಿ ಕಾರ್ಯಕರ್ತರಿಗೆ ಮತ್ತು ಬಿಜೆಪಿ ಪಕ್ಷ ಗೆದ್ದ ವಾರ್ಡ್‌ಗಳಿಗೆ ಮಾತ್ರ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗುತ್ತದೆ ಎಂದು ಆರೋಪಿಸಿದರು.

ಆಹಾರ ಧಾನ್ಯಗಳ ಕಿಟ್ ಸಾಗಾಟದ ಕುರಿತು ರುದ್ರಪ್ಪ ಲಮಾಣಿ ಪ್ರತಿಕ್ರಿಯೆ

ಇದು ಸರ್ಕಾರದಿಂದ ಬಂದಂತಹ ಕಾರ್ಮಿಕರಿಗೆ ನೀಡಬೇಕಾದ ಕಿಟ್‌ಗಳು. ಈ ಕುರಿತಂತೆ ಕೂಡಲೇ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನೆಹರು ಓಲೇಕಾರ್ ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ಎಲ್ಲರನ್ನು ಸಮಾನವಾಗಿ ನೋಡಬೇಕು. ಪಕ್ಷಬೇಧ ಮರೆತು ಎಲ್ಲಾ ಕಾರ್ಮಿಕರಿಗೆ ಕಿಟ್ ವಿತರಿಸಬೇಕು ಎಂದು ಆಗ್ರಹಿಸಿದರು.

ಇನ್ನು ಆಹಾರ ಧಾನ್ಯಗಳ ಕಿಟ್ ಅಕ್ರಮ ಸಾಗಣೆಯ ಕುರಿತು ಜಿಲ್ಲಾಧಿಕಾರಿ ಸಂಜಯ್​ ಶೆಟ್ಟಣ್ಣನವರ್​ ಅವರನ್ನು ಪ್ರಶ್ನಿಸಿದಾಗ, ನಮಗೆ ಈ ಕುರಿತಂತೆ ಮಾಹಿತಿ ಇಲ್ಲ. ವಿಡಿಯೋ ವೈರಲ್ ಆಗಿರುವುದು ಸಹ ಗೊತ್ತಿಲ್ಲ. ಈ ಕುರಿತಂತೆ ವಿಡಿಯೋ ನೋಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ABOUT THE AUTHOR

...view details