ಹಾವೇರಿ:ಜಿಲ್ಲೆಯ ರಟ್ಟಿಹಳ್ಳಿ ತಾಲೂಕು ಚಪ್ಪರದಳ್ಳಿ ಗ್ರಾಮದಲ್ಲಿ ಆರತಕ್ಷತೆ ವೇಳೆ ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡು ರಟ್ಟಿಹಳ್ಳಿಯ ತಾಲೂಕಾಸ್ಪತ್ರೆಗೆ ಸೇರಿದ್ದ 50ಕ್ಕೂ ಅಧಿಕ ಜನರ ಆರೋಗ್ಯ ಸುಧಾರಿಸಲಾರಂಭಿಸಿದೆ. ರಟ್ಟಿಹಳ್ಳಿಯ ತಾಲೂಕು ಆಸ್ಪತ್ರೆ 35 ಬೆಡ್ ಇರುವ ಆಸ್ಪತ್ರೆಗೆ ಕಲುಷಿತ ಆಹಾರ ಸೇವನೆಯಿಂದ ಇಷ್ಟು ಜನ ಅನಾರೋಗ್ಯದಿಂದ ಬಳಲುತ್ತಿದ್ದರೂ, ಯಾವ ವೈದ್ಯರು ತಕ್ಷಣ ನಮ್ಮ ಹತ್ತಿರ ಬರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಲುಷಿತ ಆಹಾರ ಸೇವಿಸಿದವರಲ್ಲಿ ಮೂವರು ತೀವ್ರ ಅಸ್ವಸ್ಥಗೊಂಡಿದ್ದು ಅವರನ್ನು ಹಿರೇಕೆರೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಅಸ್ವಸ್ಥಗೊಂಡ ಮೂವರಲ್ಲಿ ಒಬ್ಬರು ಮಹಿಳೆ ಮತ್ತು ಇಬ್ಬರು ಗರ್ಭಿಣಿಯರು ಇದ್ದು, ಹಿರೇಕೆರೂರು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ ಮಂಗಳವಾರ ರಾತ್ರಿ ರಟ್ಟಿಹಳ್ಳಿ ಆಸ್ಪತ್ರೆಗೆ ಬಂದಿದ್ದ ವೇಳೆ ವೈದ್ಯರು ಇಲ್ಲದ ಕಾರಣ, ಚಿಕಿತ್ಸೆ ಸಿಕ್ಕಿಲ್ಲ ಎಂದು ಚಪ್ಪರದಹಳ್ಳಿ ಗ್ರಾಮಸ್ಥರು ಮತ್ತು ಅಸ್ವಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನರ್ಸ್ಗಳು ಅಸ್ವಸ್ಥರಿಗೆ ಚಿಕಿತ್ಸೆ ನೀಡಿದರು ವೈದ್ಯರು ಬರಲೇ ಇಲ್ಲ: ಆರೋಪ -ರಟ್ಟಿಹಳ್ಳಿಯ ತಾಲೂಕು ಆಸ್ಪತ್ರೆ ನರ್ಸಗಳೇ ಓಡಾಡಿ ಚಿಕಿತ್ಸೆ ನೀಡಿದರೆ ಹೊರತು ವೈದ್ಯರು ಬರಲಿಲ್ಲ. ಈ ಘಟನೆ ಕುರಿತಾಗಿ ಅಸ್ವಸ್ಥರು, ಗ್ರಾಮಸ್ಥರು ಪೋನ್ ಮಾಡಿದರೂ, ವೈದ್ಯರು ಬರಲಿಲ್ಲ. ಆಸ್ಪತ್ರೆ ವೈದ್ಯಾಧಿಕಾರಿ ಪುಷ್ಪಾ ಬಣಕಾರ್ ಕಲುಷಿತ ಆಹಾರ ಸೇವಿಸಿ ಅಸ್ವಸ್ಥರಾದ ರೋಗಿಗಳಿಗೆ ಸರಿಯಾಗಿ ಸ್ಪಂದಿಸಲಿಲ್ಲ. ರೋಗಿಗಳ ವಿಚಾರಣೆಗೆ ಬಂದಿದ್ದ ಡಿಹೆಚ್ಒ ರಾಘವೇಂದ್ರಸ್ವಾಮಿ ಎದುರು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕೂಡಲೇ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಆಸ್ಪತ್ರೆಗೆ ಬೇರೆ ವೈದ್ಯರನ್ನು ನೇಮಿಸುವಂತೆ ಪಟ್ಟುಹಿಡಿದರು. ಈ ಸಂದರ್ಭದಲ್ಲಿ ಡಿಹೆಚ್ಓ ಮಾತನಾಡಿ, ಡಾ.ಪುಷ್ಪಾ ಬಣಕಾರ್ ವಿರುದ್ದ ಈ ಹಿಂದೆ ಸಹ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಅವರಿಗೆ ಈ ಕುರಿತಂತೆ ಸುಧಾರಣೆಯಾಗಿ ಎಂದು ಹೇಳಲಾಗಿತ್ತು. ಆದರೆ, ಅವರು ತಮ್ಮ ಹಿಂದಿನ ವರ್ತನೆ ಮುಂದುವರೆಸಿದ ಕಾರಣ ಇಂದಿನಿಂದ ಅವರಿಗೆ ಕಡ್ಡಾಯ ರಜೆ ನೀಡಿ ಕಳಿಸಲಾಗಿದೆ ಎಂದು ಡಿಎಚ್ಒ ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.