ಹಾವೇರಿ:ಏನಾದರೂ ಸಮಸ್ಯೆಯಾದರೇ ಮನುಷ್ಯ ದೇವರಿಗೆ ಪೂಜೆ ಸಲ್ಲಿಸಿ ಸಮಸ್ಯೆ ಬಗೆಹರಿಸುವಂತೆ ಬೇಡಿಕೊಳ್ಳುತ್ತಾನೆ. ಆದರೆ, ದೇವರಿಗೆ ಸಮಸ್ಯೆಯಾದರೇ.. ಇಂತಹ ಪ್ರಸಂಗ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಕಡೂರು ಗ್ರಾಮದ ಆಂಜನೇಯನಿಗೆ ಬಂದೊದಗಿದೆ. ಗ್ರಾಮದಲ್ಲಿನ ಭಕ್ತರ ಎರಡು ಗುಂಪುಗಳು ದೇವಸ್ಥಾನ ಆಡಳಿತ ನಡೆಸಲು ಮುಂದಾಗಿವೆ. ಪರಿಣಾಮ ಎರಡು ಗುಂಪಗಳ ಮುಖ್ಯಸ್ಥರು ದೇವಸ್ಥಾನಕ್ಕೆ ಬೀಗ ಹಾಕಿದ್ದಾರೆ.
ಒಂದು ಗುಂಪು ದೇವಸ್ಥಾನದ ಆಡಳಿತ ಮಾಡುತ್ತಿರುವ ಇನ್ನೊಂದು ಗುಂಪು ಮನ ಬಂದಂತೆ ಆಡಳಿತ ನಡೆಸುತ್ತಿದೆ. ಗ್ರಾಮದಲ್ಲಿ ಯಾರನ್ನೂ ವಿಶ್ವಾಸಕ್ಕೆ ತಗೆದುಕೊಳ್ಳದೇ ದೇವಸ್ಥಾನ ಆದಾಯವನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದೆ. ದೇವಸ್ಥಾನಕ್ಕೆ ಸಂಬಂಧಿಸಿದ 49 ಎಕರೆ ಜಮೀನು ಇದೆ. 12 ವಾಣಿಜ್ಯ ಮಳಿಗೆಗಳಿವೆ. ಇವುಗಳನ್ನು ಗ್ರಾಮದ ಸಾಹುಕಾರ್ ಕುಟುಂಬ ತಮಗೆ ಇಚ್ಛೆ ಬಂದಂತೆ ಬೇಕಾದವರಿಗೆ ನೀಡುತ್ತಿದೆ. ಈ ಕುರಿತು ಕೇಳಲು ಹೋದವರ ಮೇಲೆ ಸುಳ್ಳು ಕೇಸ್ ಹಾಕಿ ಜೈಲು ಪಾಲುಮಾಡಿದೆ ಎಂದು ಒಂದು ಗುಂಪು ಆರೋಪಿಸುತ್ತಿದೆ.
ಅಲ್ಲದೇ ಗ್ರಾಮದ ಎಲ್ಲ ಭಕ್ತರು ಆಂಜನೇಯನನ್ನು ಪೂಜಿಸುತ್ತಾರೆ. ಭಕ್ತರ ಆದಾಯದಿಂದಲೇ ದೇವಸ್ಥಾನ ನಡೆಯುತ್ತಿದೆ. ಹೀಗಾಗಿ ದೇವಸ್ಥಾನ ಆಡಳಿತ ಮಂಡಳಿ ಮಾಡಲಿ. ಅದರಲ್ಲಿ ಎಲ್ಲ ಜಾತಿಯವರಿಗೆ ಸದಸ್ಯ ಸ್ಥಾನ ಸಿಗಲಿ ಎಂದು ಪಟ್ಟುಹಿಡಿದಿದೆ. ಈ ಗುಂಪಿನ ಜೊತೆ ಈ ಹಿಂದೆ ಪೂಜಾರಿಕೆ ಮಾಡುತ್ತಿದ್ದ ಕುಟುಂಬ ಸಹ ಸೇರಿದೆ.