ಕರ್ನಾಟಕ

karnataka

By

Published : Jul 13, 2023, 4:48 PM IST

ETV Bharat / state

ಹಾವೇರಿ ಕುರಿ ಮಾರುಕಟ್ಟೆಯಲ್ಲಿ ದರ ಕುಸಿತ.. ಮೂಲಸೌಕರ್ಯ ಕೊರತೆ

ಹಾವೇರಿ ಕುರಿಮಾರುಕಟ್ಟೆಯಲ್ಲಿ ಅಧಿಕ ಸಂಖ್ಯೆಯ ಕುರಿಗಳು ಮಾರಾಟಕ್ಕೆ ಬರುತ್ತಿವೆ. ಆದರೆ, ಖರೀದಿಗೆ ಜನ ಬರದಿರುವುದರಿಂದ ಕುರಿಗಳ ಬೆಲೆಯೂ ಸಹ ಇಳಿಕೆಯಾಗಿದೆ.

ಹಾವೇರಿ ಕುರಿ ಮಾರುಕಟ್ಟೆ
ಹಾವೇರಿ ಕುರಿ ಮಾರುಕಟ್ಟೆ

ಕುರಿಗಾಯಿ ರಾಜು ಮಾತನಾಡಿದ್ದಾರೆ

ಹಾವೇರಿ :ಉತ್ತರಕರ್ನಾಟಕದ ಪ್ರಮುಖ ಕುರಿ ಮಾರುಕಟ್ಟೆಗಳಲ್ಲಿ ಹಾವೇರಿ ಪ್ರಸಿದ್ಧವಾಗಿದೆ. ಹಾವೇರಿಯ ಕುರಿ ಮಾರುಕಟ್ಟೆಯಲ್ಲಿ ಪ್ರತಿ ಗುರುವಾರ ಕುರಿ ವಹಿವಾಟು ಜೋರಾಗಿಯೇ ನಡೆಯುತ್ತದೆ. ಮಾರುಕಟ್ಟೆ ಸುತ್ತಮುತ್ತಲ ಪ್ರದೇಶಗಳಿಂದ 10 ಸಾವಿರಕ್ಕೂ ಅಧಿಕ ಕುರಿಗಳು ಮಾರಾಟಕ್ಕೆ ಬರುತ್ತವೆ.

ತಿಂಗಳಿಗೆ 10 ಕೋಟಿಗೂ ಅಧಿಕ ವಹಿವಾಟನ್ನು ಹಾವೇರಿ ಕುರಿ ಮಾರುಕಟ್ಟೆ ನಡೆಸುತ್ತೆ. ಹಾವೇರಿ, ರಾಣೆಬೆನ್ನೂರು, ಹಿರೇಕೆರೂರು, ಹುಬ್ಬಳ್ಳಿ, ನವಲಗುಂದ, ನರಗುಂದ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಸಹ ಇಲ್ಲಿ ಕುರಿಗಾಯಿಗಳು ಕುರಿಗಳನ್ನ ತಂದು ಮಾರುತ್ತಾರೆ. ಈ ಭಾಗದಲ್ಲಿ ಕುರುಬ ಸಮುದಾಯ ಅಧಿಕ ಸಂಖ್ಯೆಯಲ್ಲಿರುವುದರಿಂದ ಹೆಚ್ಚು ಕುರಿಗಳು ಮಾರುಕಟ್ಟೆಗೆ ಬರುತ್ತವೆ.

ಪ್ರಮುಖವಾಗಿ ಹಾವೇರಿ ಕುರಿ ಮಾರುಕಟ್ಟೆಯನ್ನ ಕಟಿಂಗ್ ಪರ್ಪಸ್ ಮಾರುಕಟ್ಟೆ ಎಂದು ಕರೆಯುತ್ತಾರೆ. ಅಂದರೆ ಇಲ್ಲಿ ಬಲಿಷ್ಠ ಮತ್ತು ಸದೃಢ ಕುರಿಗಳು ಮಾರಾಟಕ್ಕೆ ಬರುತ್ತವೆ. ಈ ಹಿನ್ನೆಲೆಯಲ್ಲಿ ಹಾವೇರಿ ಕುರಿ ಮಾರುಕಟ್ಟೆಗೆ ತಮಿಳುನಾಡು, ಆಂಧ್ರಪ್ರದೇಶ, ಮೈಸೂರು, ಬೆಂಗಳೂರು ಮತ್ತು ಹಾಸನ ಜಿಲ್ಲೆಯ ವರ್ತಕರು ಆಗಮಿಸುತ್ತಾರೆ. ಬುಧವಾರ ರಾತ್ರಿಯಿಂದ ಆರಂಭವಾಗುವ ಕುರಿ ವ್ಯಾಪಾರ ಗುರುವಾರ ಮಧ್ಯಾಹ್ನದವರೆಗೆ ನಡೆಯುತ್ತೆ. ಕುರಿಗಳ ಸಾಗಾಟಕ್ಕಾಗಿ ವಿಶೇಷ ಲಾರಿಗಳಿದ್ದು, ಆ ಲಾರಿಗಳಲ್ಲಿ ಖರೀದಿಸಿದ ಕುರಿಗಳನ್ನ ವರ್ತಕರು ದೂರದ ಊರುಗಳಿಗೆ ಸಾಗಿಸುತ್ತಾರೆ.

ಕುರಿ ಮಾರುಕಟ್ಟೆಯಲ್ಲಿ ಮೂಲಸೌಕರ್ಯದ ಕೊರತೆ: ಇನ್ನು ಹಾವೇರಿ ಸುತ್ತಮುತ್ತಲಿನ ಮಾಂಸಾಹಾರಿ ಖಾನಾವಳಿ ಮತ್ತು ಢಾಬಾ ಮಾಲೀಕರು ಸಹ ಮಾರುಕಟ್ಟೆಯಲ್ಲಿ ಕುರಿ ಖರೀದಿಸುತ್ತಾರೆ. ಹೊಸದಾಗಿ ಕುರಿ ಸಾಕುವವರಿಗೆ ಇಲ್ಲಿ ಮರಿಗಳು ಸಹ ಸಿಗುತ್ತವೆ. ಕುರಿ ಸಾಕಾಣಿಕೆ ನಡೆಸುವವರು ಸಹ ಇಲ್ಲಿ ಆಗಮಿಸಿ ಮರಿಕುರಿಗಳನ್ನ ಖರೀದಿಸುತ್ತಾರೆ. ಆದರೆ, ತಿಂಗಳಿಗೆ ಹತ್ತಾರು ಕೋಟಿ ರೂಪಾಯಿ ವಹಿವಾಟು ನಡೆಸುವ ಮಾರುಕಟ್ಟೆಗೆ ಮೂಲ ಸೌಕರ್ಯಗಳಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಮಳೆಗಾಲದಲ್ಲಂತೂ ಇಲ್ಲಿ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಕುರಿಮರಿಗಳನ್ನ ಮಾರಲು ಸರಿಯಾದ ಜಾಗವಿಲ್ಲ. ರಸ್ತೆಯಲ್ಲಿ ಕುರಿಗಳನ್ನು ನಿಲ್ಲಿಸಿ ಮಾರಾಟಮಾಡಬೇಕಾದ ಪರಿಸ್ಥಿತಿ ಇದೆ. ವ್ಯಾಪಾರ ಮಾಡುವ ರಸ್ತೆ ಸಹ ಮಳೆಗಾಲದಲ್ಲಿ ಕೆಸರುಮಯವಾಗುತ್ತೆ. ರಸ್ತೆಯ ಅಕ್ಕಪಕ್ಕದಲ್ಲಿ ನಿಂತು ರೈತರು, ಕುರಿಗಾಯಿಗಳು ವ್ಯಾಪಾರ ಮಾಡುವ ಅನಿವಾರ್ಯತೆ ನಿರ್ಮಾಣವಾಗುತ್ತೆ. ಕುರಿಗಾಯಿಗಳು ನಿಲ್ಲಲು ಕುರಿಗಳ ಹಿಂಡು ನಿಲ್ಲಿಸಲು ಮತ್ತು ಖರೀದಿದಾರರ ಖರೀದಿಗೆ ಸರಿಯಾದ ಜಾಗವಿಲ್ಲ. ಎಲ್ಲೆಂದರಲ್ಲಿ ವಾಹನಗಳನ್ನ ನಿಲ್ಲಿಸಲಾಗುತ್ತದೆ. ಕುರಿ ತುಂಬಿಸುವುದಕ್ಕೆ ಲಾರಿ ಬರುವಷ್ಟರಲ್ಲಿ ನಮ್ಮ ಕುರಿಹಿಂಡಿನ ಒಂದೊಂದು ಕುರಿ ಇರುವುದೇ ಇಲ್ಲ ಎನ್ನುತ್ತಾರೆ ಕುರಿಗಾಯಿಗಳು.

ಖರೀದಿದಾರರಿಲ್ಲದೆ ಕುರಿಗಳ ಬೆಲೆ ಸಹ ಇಳಿಕೆ: ಕುರಿ ಮಾರಾಟ ಮಾಡಲು ಬರುವವರಿಗೆ ಉಳಿದುಕೊಳ್ಳುವ ವ್ಯವಸ್ಥೆ ಇಲ್ಲ. ಕುಡಿಯಲು ನೀರು ಸಹ ಇಲ್ಲಿ ಸಿಗುವುದಿಲ್ಲ ಎನ್ನುವ ಆರೋಪವನ್ನ ಕುರಿಗಾಯಿಗಳು ಮಾಡುತ್ತಿದ್ದಾರೆ. ನಗರಸಭೆ ಮತ್ತು ಸರ್ಕಾರಕ್ಕೆ ಖರೀದಿದಾರರು, ಕುರಿಗಾಯಿಗಳು ಒಂದು ಕುರಿಗೆ ಇಂತಿಷ್ಟು ಅಂತಾ ತೆರಿಗೆ ಕಟ್ಟುತ್ತಾರೆ. ಆದರೂ ಯಾವುದೇ ಸೌಲಭ್ಯ ಒದಗಿಸಿಲ್ಲ ಎನ್ನುತ್ತಾರೆ ಕುರಿಗಾಯಿಗಳು.

ಇನ್ನು ಪ್ರಸ್ತುತ ಮುಂಗಾರು ಮಳೆ ವಿಳಂಬವಾಗಿದ್ದರಿಂದ ರೈತರ ಕೈಯಲ್ಲಿ ಹಣ ಇಲ್ಲ. ಹಣ ಇಲ್ಲದ ಕಾರಣ ಅಧಿಕ ಸಂಖ್ಯೆಯಲ್ಲಿ ರೈತರು ಕುರಿ ಮಾರಾಟ ಮಾಡಲು ಬಂದಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಕುರಿಗಳ ಸಂಖ್ಯೆ ಅಧಿಕವಾಗಿದೆ. ಕುರಿ ಖರೀದಿ ಮಾಡುವವರು ಕಡಿಮೆ ಇರುವುದರಿಂದ ಕುರಿಗಳ ಬೆಲೆ ಸಹ ಇಳಿಕೆಯಾಗಿದೆ.

ಇದನ್ನೂ ಓದಿ :ದೊಡ್ಡಬಳ್ಳಾಪುರದಲ್ಲಿ ಹೆಚ್ಚಿದ ಕುರಿಗಳ ಕಳ್ಳತನ: ಗ್ರಾಮಸ್ಥರಲ್ಲಿ ಆತಂಕ

ABOUT THE AUTHOR

...view details