ಕರ್ನಾಟಕ

karnataka

ಎಂ.ಎಂ.ಹಿರೇಮಠ ಜಾತಿ ಪ್ರಮಾಣ ಪತ್ರ ಅಸಿಂಧುಗೊಳಿಸಿ ಡಿಸಿ ಆದೇಶ

By

Published : Mar 30, 2023, 9:12 AM IST

ಹಾವೇರಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದ ಎಂ.ಎಂ.ಹಿರೇಮಠ ಅವರ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿ ರದ್ದುಗೊಳಿಸಿದ್ದಾರೆ.

MM Hiremath
ಎಂ ಎಂ ಹಿರೇಮಠ

ಹಾವೇರಿ: ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಅವರ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಹಾವೇರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅಸಿಂಧುಗೊಳಿಸಿದ್ದಾರೆ. ಈ ಕುರಿತಂತೆ ಆದೇಶ ಹೊರಡಿಸಿರುವ ಅವರು, ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಅವರು ಮೂಲತಃ ಜಂಗಮ ಜಾತಿಯವರಾಗಿದ್ದರು. ಆದರೆ, ಸರ್ಕಾರ ಬೇಡ ಜಂಗಮರಿಗೆ ಎಸ್​ಸಿ ಪ್ರಮಾಣಪತ್ರ ನೀಡಲಾರಂಭಿಸುತ್ತಿದ್ದಂತೆ ಹಿರೇಮಠ ಸಹ ಬೇಡ ಜಂಗಮ ಪ್ರಮಾಣಪತ್ರವನ್ನು ಹಾವೇರಿ ತಹಶೀಲ್ದಾರ್ ಕಚೇರಿಯಿಂದ ಪಡೆದಿದ್ದರು.

ಡಿಸಿ ಆದೇಶ ಪ್ರತಿ

ಹಾವೇರಿ ಎಸ್​ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಲುವಾಗಿ ಜಾತಿ ಪ್ರಮಾಣಪತ್ರ ಪಡೆದಿದ್ದರು ಎನ್ನಲಾಗಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್​ ಹಾವೇರಿ ವಿಧಾನಸಭಾ ಮೀಸಲು ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ರುದ್ರಪ್ಪ ಲಮಾಣಿ ಹೆಸರನ್ನು ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಎಂ.ಎಂ.ಹಿರೇಮಠ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಹ ರಾಜೀನಾಮೆ ಸಲ್ಲಿಸಿದ್ದರು. ಇದರ ಪ್ರತಿಯನ್ನು ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಡಿ.ಕೆ.ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಅವರಿಗೆ ರವಾನಿಸಿದ್ದರು. ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗಿ ಎರಡೇ ದಿನಕ್ಕೆ ಈ ಬೆಳವಣಿಗೆ ನಡೆದಿತ್ತು.

ಇದನ್ನೂ ಓದಿ :ಕೈತಪ್ಪಿದ ಟಿಕೆಟ್​.. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ ಎಂ ಹಿರೇಮಠ್ ರಾಜೀನಾಮೆ, ಹಲವರಲ್ಲಿ ಅಸಮಾಧಾನ

ರಾಜೀನಾಮೆ ಪತ್ರದಲ್ಲಿ ಹಿರೇಮಠ ಅವರು, ಪಕ್ಷ ನೀಡಿರುವ ಜವಾಬ್ದಾರಿಯನ್ನು ಕಳೆದ 4 ವರ್ಷಗಳಿಂದ ನಿಭಾಯಿಸಿಕೊಂಡು ಬಂದಿದ್ದೇನೆ. ಆದರೆ, ನನಗೆ ಈಗ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜಿಲ್ಲಾಧ್ಯಕ್ಷ ಸ್ಥಾನ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ಅಂಗೀಕರಿಸಿ ಎಂದು ಕೇಳಿಕೊಂಡಿದ್ದರು.

ನಿನ್ನೆ ಹಾವೇರಿ ನಗರದ ಕೃಷ್ಣಮಂದಿರದಲ್ಲಿ ಎಂ.ಎಂ.ಹಿರೇಮಠ ಬೆಂಬಲಿಗರು ಸಭೆ ನಡೆಸಿದರು. ಈ ವೇಳೆ ಹಾಜರಿದ್ದ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ, ಮುಂದಿನ 2 ದಿನಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರು. ಕೊನೆಯ ಪಕ್ಷ ಪಕ್ಷೇತರರಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ :ಹಾವೇರಿ ಕಾಂಗ್ರೆಸ್​​​ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎಂ.ಎಂ.ಹಿರೇಮಠ ರಾಜೀನಾಮೆ

"ಮೀಸಲು ಕ್ಷೇತ್ರ ಹಾವೇರಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ಹೊಂದಿದ್ದ ಎಂ.ಎಂ.ಹಿರೇಮಠ ಅವರು ಬೇಡ ಜಂಗಮ ಜಾತಿಗೆ ಸೇರಿರುವ ಕುರಿತಂತೆ ಸ್ಪಷ್ಟ ದಾಖಲಾತಿ ನೀಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ, ಅವರ ಬೇಡ ಜಂಗಮ ಜಾತಿ ಪ್ರಮಾಣ ಪತ್ರವನ್ನ ರದ್ದುಗೊಳಿಸಿರುವುದಾಗಿ" ಜಿಲ್ಲಾಧಿಕಾರಿ ರಘುನಂದನಮೂರ್ತಿ ತಿಳಿಸಿದ್ದಾರೆ. ಈ ಮಧ್ಯೆ ಜಿಲ್ಲಾಧಿಕಾರಿಯ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವುದಾಗಿ ಎಂ.ಎಂ.ಹಿರೇಮಠ ತಿಳಿಸಿದ್ದಾರೆ.

ಇದನ್ನೂ ಓದಿ :ಕರ್ನಾಟಕ ರಾಜಕೀಯದಲ್ಲಿ ಮಹಿಳೆಯರ ಪಾಲೇನು? ಇಲ್ಲಿದೆ ಅಂಕಿಅಂಶ

ABOUT THE AUTHOR

...view details