ಹಾವೇರಿ: ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆಯಾದ್ರೆ ನನಗೂ ಅವಕಾಶ ಸಿಗಲಿದೆ ಎಂದು ಬಿಜೆಪಿ ಶಾಸಕ ನೆಹರು ಓಲೇಕಾರ ಹೇಳಿದ್ದಾರೆ.
ಸೋಮಾರಿ ಸಚಿವರನ್ನು ಕೈ ಬಿಟ್ಟು ನನಗೆ ಸಚಿವ ಸ್ಥಾನ ಕೊಡಲಿ: ಶಾಸಕ ನೆಹರೂ ಓಲೇಕಾರ್
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಶಾಸಕ ನೆಹರೂ ಓಲೇಕಾರ್ ಪ್ರತಿಕ್ರಿಯಿಸಿದ್ದು, ಈ ಬಾರಿ ತಮಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಜಾತಿಯ ಬಲಗೈ ಸಮಾಜದ ಶಾಸಕರಾದ ಓಲೇಕಾರ್ ಹಾವೇರಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ್ದು, ನಾನು ಮೂರನೆ ಬಾರಿ ಆಯ್ಕೆ ಆಗಿದ್ದೇನೆ, ಈ ಬಾರಿ ಅವಕಾಶ ಮಾಡಿಕೊಡ್ತಾರೆ ಎಂಬ ವಿಶ್ವಾಸವಿದೆ. ಸರಕಾರದಲ್ಲಿ ಒಳ್ಳೆಯ ಹುಮ್ಮಸ್ಸಿನಿಂದ ಕೆಲಸ ಮಾಡುವೆ. ಸಿಎಂ ಯಡಿಯೂರಪ್ಪ ಸೇರಿ ಬಹುತೇಕರು ಆಲೋಚನೆ ಮಾಡಿ ನನಗೂ ಅವಕಾಶ ಕೊಡಲಿ ಎಂದರು.
ಸಂಪುಟದಲ್ಲಿ ಬಹಳ ಕೆಲಸ ಮಾಡದ ಸೋಮಾರಿ ಸಚಿವರು ಇದ್ದಾರೆ. ಅದೆಲ್ಲವೂ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷರು ಮತ್ತು ಹೈಕಮಾಂಡ್ ಗೆ ಗೊತ್ತಿದೆ. ಅಂಥವರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು. ಜಿಲ್ಲೆಯಲ್ಲಿ ಯಾರನ್ನು ಕೈಬಿಡಬೇಕು ಎಂಬುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಹೊಸಬರಿಗೆ ಅವಕಾಶ ನೀಡಿದ್ರೆ ಉಳಿದ ಎರಡೂವರೆ ವರ್ಷದ ಅವಧಿ ಸುಸೂತ್ರವಾಗಿ ನಡೆಸಲು ಸಾಧ್ಯವಾಗುತ್ತೆ ಎಂದ್ರು.