ಹಾವೇರಿ:ಗುಜರಾತ್ ಆನಂದನಗರದ ನಂತರ ಅದೇ ಮಾದರಿಯ ಕಾಂಬಿಬ್ಲಾಕ್ ಹಾಲು ಸಂಸ್ಕರಣಾ ಘಟಕವು ಹಾವೇರಿ ಸಮೀಪದ ಜಂಗಮನಕೊಪ್ಪದ ಬಳಿ ಸ್ಥಾಪನೆಯಾಗಲಿದೆ. ಈ ಘಟಕ ಸ್ಥಳೀಯ 24 ಸಾವಿರ ರೈತರ ಕುಟುಂಬಗಳಿಗೆ ಹೆಚ್ಚಿನ ಲಾಭ ತರಲಿದೆ ಎಂದು ಜಿಲ್ಲಾ ಕೆಎಂಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ ತಿಳಿಸಿದರು.
ಕೆಎಂಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ ಓದಿ: ಫುಟ್ಪಾತ್ ಮೇಲೆ ಶವವಿರಿಸಿ ಹೋಗಿದ್ದ ಆ್ಯಂಬುಲೆನ್ಸ್ ಚಾಲಕ ಬಂಧನ
ಹಾವೇರಿಯಲ್ಲಿ ಮಾತನಾಡಿದ ಅವರು, ಈ ಘಟಕ ಸ್ಥಾಪನೆಯಾದ ನಂತರ ದಿನಕ್ಕೆ ಒಂದು ಲಕ್ಷ ಲೀಟರ್ ಹಾಲು ಸಂಸ್ಕರಣೆ ಮಾಡಬಹುದು. ಈ ಕುರಿತಂತೆ ಕೆಎಂಎಫ್ ಹಲವು ವರ್ಷಗಳಿಂದ ಯೋಜನೆ ರೂಪಿಸಿದ್ದು, ಗುರುವಾರ ನಡೆದ ರಾಜ್ಯ ಕ್ಯಾಬಿನಟ್ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗಲಿದ್ದು, ರೈತರಿಗೆ ಹೆಚ್ಚು ಉಪಯೋಗವಾಗುತ್ತದೆ. ಸುಮಾರು 90 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಈ ಘಟಕದ ಕಾಮಗಾರಿ ಜೂನ್ 10 ರಂದು ಆರಂಭವಾಗಲಿದೆ. 18 ತಿಂಗಳಲ್ಲಿ ಕಾಮಗಾರಿ ಸಂಪೂರ್ಣವಾಗಿ ಮುಗಿದು ಕಾಂಬಿಬ್ಲಾಕ್ ಕಾರ್ಯ ನಿರ್ವಹಿಸಲಿದೆ ಎಂದು ಬಸವರಾಜ್ ತಿಳಿಸಿದರು.
ಕೆಎಂಎಫ್ಗೆ ಹಾವೇರಿ ಜಿಲ್ಲೆಯಿಂದಲೇ ಅತಿಹೆಚ್ಚು ಹಾಲು ಪೂರೈಕೆಯಾಗುತ್ತಿದ್ದು, ಈಗ ಈ ಬ್ಲಾಕ್ ಆರಂಭಿಸಿರುವುದರಿಂದ ಸಾಗಾಣಿಕೆ ಖರ್ಚು ಸಹ ಉಳಿಯಲಿದೆ. ಅಲ್ಲದೆ ಮುಂದಿನ ಐದು ವರ್ಷಗಳಲ್ಲಿ ಹಾವೇರಿ ಜಿಲ್ಲೆ ಒಂದರಲ್ಲೇ ಮೂರು ಲಕ್ಷ ಲೀಟರ್ ಹಾಲು ಉತ್ಪಾದಿಸುವ ಗುರಿ ಹೊಂದಲಾಗಿದೆ. ಘಟಕದಲ್ಲಿ ಹಾಲು ಉತ್ಪನ್ನಗಳ ತಯಾರಿಕೆ ಆರಂಭವಾದರೆ ರೈತರಿಗೆ ಅದರ ಲಾಭ ಸಿಗಲಿದೆ ಎಂದು ಬಸವರಾಜ್ ಅರಬಗೊಂಡ ತಿಳಿಸಿದರು.