ಕರ್ನಾಟಕ

karnataka

ಹಾವೇರಿಯಲ್ಲಿ ಎರಡು ಪ್ರತ್ಯೇಕ ಅಕ್ರಮ ಹಣ ಸಾಗಣೆ ಪ್ರಕರಣ; 19 ಲಕ್ಷ ರೂ. ವಶಕ್ಕೆ

By

Published : Mar 28, 2023, 7:47 PM IST

Updated : Mar 28, 2023, 8:22 PM IST

ರಾಜ್ಯದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಅಕ್ರಮ ಹಣ ಹಾಗೂ ಅಕ್ರಮ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

illegal money smuggling
ಅಕ್ರಮ ಹಣ ವಶ

ಹಾವೇರಿ:ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 19 ಲಕ್ಷದ 19 ಸಾವಿರ ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಖಲೆ ಇಲ್ಲದೆ ಸಾಗಿಸುತ್ತಿದ್ದ 16 ಲಕ್ಷ 24 ಸಾವಿರ ರೂಪಾಯಿ ಹಣವನ್ನು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪೊಲೀಸರು ಮತ್ತು 2 ಲಕ್ಷ 95 ಸಾವಿರ ರೂಪಾಯಿ ಹಣವನ್ನು ಹಾನಗಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೊದಲನೇ ಪ್ರಕರಣದಲ್ಲಿ, 19 ಲಕ್ಷ 19 ಸಾವಿರ ರೂಪಾಯಿಗೆ ಸಂಬಂಧಪಟ್ಟಂತೆ ಬಂಕಾಪುರ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 48 ರ ಟೋಲ್ ನಾಕಾ ಬಳಿ ಪೊಲೀಸರು ಟೋಲ್ ನಾಕಾದಲ್ಲಿ ಕಾರು ಪರಿಶೀಲನೆ ನಡೆಸಿದಾಗ ಈ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಅಕ್ರಮ ಹಣ ಸಾಗಾಣಿಕೆ ತಡೆಗಟ್ಟಲು ಪೊಲೀಸರು ಸ್ಥಾಪಿಸಿರುವ ಚೆಕ್ ಪೋಸ್ಟ್‌ನಲ್ಲಿನ ಸಿಬ್ಬಂದಿ ಈ ಹಣ ಪತ್ತೆ ಹಚ್ಚಿದ್ದಾರೆ.

ಇನ್ನು ಆರೋಪಿಗಳು ಹಾವೇರಿ ನಗರದ ಕೊಂಡವಾಡಗದ ನಿವಾಸಿ ನಟರಾಜ್ ಬಾಳಿಮಠ ಮತ್ತು ಶ್ರೀಕಂಠಯ್ಯ ಬಾಳಿಮಠ ಎಂಬುವವರು ಆಗಿದ್ದು ಮಾರುತಿ ಸುಜುಕಿ ಕಾರ್‌ನಲ್ಲಿ ಹಣ ಸಾಗಿಸುತ್ತಿದ್ದರು. ಅಕ್ರಮ ಹಣ ಕೊಂಡೊಯ್ಯುತ್ತಿದ್ದ ಕಾರು ಶಿಗ್ಗಾಂವಿ ಕಡೆಯಿಂದ ಹಾವೇರಿ ಕಡೆ ಸಂಚರಿಸುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರ ಮೇಲೆ ದೂರು ದಾಖಲಿಸಿಕೊಂಡಿರುವ ಬಂಕಾಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಎರಡನೇ ಪ್ರಕರಣ: ಮತ್ತೊಂದೆಡೆ ಹಾನಗಲ್ ತಾಲೂಕು ಗೊಂದಿ ಚೆಕ್‌ ಪೋಸ್ಟ್​ ನಲ್ಲಿ ಮೊದಲನೇ ಕೇಸ್​ನಂತೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2 ಲಕ್ಷ 95 ಸಾವಿರ ರೂಪಾಯಿ ಹಣವನ್ನು ಹಾನಗಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾನಗಲ್ ತಾಲೂಕಿನ ಗೊಂದಿ ಚೆಕ್ ಪೋಸ್ಟ್​ ನಲ್ಲಿ ಸಂಚರಿಸುತ್ತಿದ್ದ ಕಾರಿನಲ್ಲಿ ಈ ಹಣ ಪತ್ತೆಯಾಗಿದೆ. ಈ ಕಾರು ಶಿವಮೊಗ್ಗದಿಂದ ಹಾನಗಲ್ ಕಡೆಗೆ ಹೊರಟಿತ್ತು. ಈ ಕುರಿತಂತೆ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಯ್ಯದ ಇಬ್ರಾಹಿಂ, ನಿಜಮಬೇಗ್ ಮತ್ತು ನಯಾಜ್ ಇಮ್ತಿಯಾಜ್ ಮೇಲೆ ಪ್ರಕರಣ ದಾಖಲಾಗಿದೆ. ಈ ಮೂವರು ಶಿವಮೊಗ್ಗ ಜಿಲ್ಲೆಯ ಸೋಮನಕೊಪ್ಪ ಗ್ರಾಮದವರಾಗಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಗುಣಾರೆ, ಜಿಲ್ಲೆಯಲ್ಲಿ 21 ಚೆಕ್ ಪೋಸ್ಟ್‌ ಸ್ಥಾಪಿರುವುದಾಗಿ ತಿಳಿಸಿದರು. ಈ ಚೆಕ್ ಪೋಸ್ಟಗಳಲ್ಲಿ ಅಧಿಕವಾಗಿ ದೊರೆತ ಹಣ ಎಂದರೆ ಬಂಕಾಪೂರ ಚೆಕ್ ಪೋಸ್ಟ್​ನಲ್ಲಿ ದೊರೆತ 16 ಲಕ್ಷದ 24 ಸಾವಿರ ರೂಪಾಯಿ ಎಂದು ತಿಳಿಸಿದರು. ಈ ಹಣ ಸಾಗಿಸುತ್ತಿದ್ದವರ ಬಳಿ ಸಮರ್ಪಕ ದಾಖಲೆ ಇಲ್ಲಾ. ಈ ಹಣಕ್ಕೆ ಸಮರ್ಪಕ ದಾಖಲೆ ಸಾಬೀತಪಡಿಸಿದರೇ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಕುರಿತಂತೆ ಸಮರ್ಪಕ ತನಿಖೆ ನಡೆಸಿದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಹಣ ಸಾಗಿಸುವಾಗ ಸಾರ್ವಜನಿಕರು ದಾಖಲೆ ಇಟ್ಟುಕೊಳ್ಳಬೇಕು ದಾಖಲೆ ಇಲ್ಲದಿದ್ದರೆ ವಿನಾಕಾರಣ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಶಿವಕುಮಾರ್ ಗುಣಾರೆ ತಿಳಿಸಿದರು.

ಅಕ್ರಮ ಮದ್ಯ ಸಾಗಿಸುತ್ತಿದ್ದವರನ್ನು ಸೆರೆ ಹಿಡಿದ ದೃಶ್ಯ

ವಿಜಯಪುರ - ಅಕ್ರಮ ಮದ್ಯವನ್ನು ವಶಪಡಿಸಿಕೊಂಡ ಅಬಕಾರಿ ಇಲಾಖೆ: ಅಕ್ರಮವಾಗಿ ಸಾಗಿಸುತ್ತಿದ್ದ 1,512 ಲೀ. ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಬಬಲೇಶ್ವರ ಪಟ್ಟಣದ ಶಾಂತವೀರ ಸರ್ಕಲ್ ಹತ್ತಿರ ನಡೆದಿದೆ.‌ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಗ್ರಾಮದಿಂದ ಹೊಸೂರಕ್ಕೆ ಬರುವ ರಸ್ತೆಯಲ್ಲಿ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ವಿಜಯಪುರ ಅಬಕಾರಿ ನಿರೀಕ್ಷಕರ ನೇತೃತ್ವದ ತಂಡ ದಾಳಿ ನಡೆಸಿ, ವಾಹನ ಸಂಖ್ಯೆ.ಕೆಎ-28, ಬಿ-3432 ವಾಹನದಲ್ಲಿ 7,89 ಲಕ್ಷ ರೂ ಮೌಲ್ಯದ ಒಟ್ಟು 1,512 ಲೀಟರ್ ಮದ್ಯ ಹಾಗೂ ಸಾಗಾಣಿಕೆಗೆ ಬಳಸಿದ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಅನೀಲ ಎಂ.ಪತ್ತಾರ ನೇತೃತ್ವ ವಹಿಸಿದ್ದರು. ಅಬಕಾರಿ ನಿರೀಕ್ಷಕ ಎಮ.ಆರ್. ನಿಂಗರೆಡ್ಡಿ, ಪೇದೆ ಬಿ.ಎಸ್.ತಡಕಲ್, ಅರ್ಜುನ ಗೊಟಗುಣಕಿ ಸೇರಿದಂತೆ ಇತರರು ಭಾಗಿಯಾಗಿದ್ದರು.

ಇದನ್ನೂ ಓದಿ:ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದ ಹುಬ್ಬಳ್ಳಿ ಉದ್ಯಮಿ ಗಡಿಪಾರು

Last Updated : Mar 28, 2023, 8:22 PM IST

ABOUT THE AUTHOR

...view details