ಕರ್ನಾಟಕ

karnataka

ಹೆಗ್ಗೇರಿ ಕೆರೆಗೆ ಕಾಲುವೆಯಿಂದ ನೀರು ಹರಿಸಲಾರಂಭಿಸಿದ ಹಾವೇರಿ ನಗರಸಭೆ

By ETV Bharat Karnataka Team

Published : Aug 26, 2023, 12:45 PM IST

Updated : Aug 26, 2023, 1:04 PM IST

ಅಸಮರ್ಪಕ ಮಳೆಯಿಂದಾಗಿ ಹೆಗ್ಗೇರಿ ಕೆರೆ ಒಡಲು ಬರಿದಾಗಲಾರಂಭಿಸಿದ ಹಿನ್ನೆಲೆ ಹಾವೇರಿ ನಗರಸಭೆಯು ಕಾಲುವೆಯಿಂದ ನೀರು ಹರಿಸಲಾರಂಭಿಸಿದೆ.

Heggeri lake
ಹೆಗ್ಗೇರಿ ಕೆರೆ

ಹೆಗ್ಗೇರಿ ಕೆರೆಗೆ ಕಾಲುವೆಯಿಂದ ನೀರು ಹರಿಸಲಾರಂಭಿಸಿದ ನಗರಸಭೆ

ಹಾವೇರಿ : ಪ್ರಸ್ತುತ ವರ್ಷ ಮುಂಗಾರು ಮಳೆ ಸಮರ್ಪಕವಾಗಿಲ್ಲ. ಹೀಗಾಗಿ, ಬರಗಾಲದ ಛಾಯೆ ಅವರಿಸಿದೆ. ರಾಜ್ಯದ ಪ್ರಮುಖ ಕೆರೆಕಟ್ಟೆಗಳು ಬೇಸಿಗೆ ಬರುವ ಮುನ್ನವೇ ಬರಿದಾಗಲಾರಂಭಿಸಿವೆ. ಇದಕ್ಕೆ ಹಾವೇರಿಯ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಹೆಗ್ಗೇರಿ ಕೆರೆ ಕೂಡ ಹೊರತಾಗಿಲ್ಲ.

ಹೌದು, ಹೆಗ್ಗೇರಿ ಕೆರೆ ಬರಿದಾದರೆ ಈ ನೀರನ್ನೇ ಅವಲಂಬಿಸಿರುವ ಸಾವಿರಾರು ರೈತರ ಬದುಕು ಅಸಹನೀಯವಾಗಲಿದೆ. ಕೆರೆ ತುಂಬಿದರೆ ಸುತ್ತಮುತ್ತಲಿನ ಗ್ರಾಮಗಳ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಆದರೆ, ಪ್ರಸ್ತುತ ವರ್ಷದ ಅಸಮರ್ಪಕ ಮಳೆಯಿಂದಾಗಿ ಹೆಗ್ಗೇರಿ ಕೆರೆ ಒಡಲು ಬರಿದಾಗಲಾರಂಭಿಸಿದೆ. ಇದರಿಂದ ಎಚ್ಚೆತ್ತ ಹಾವೇರಿ ನಗರಸಭೆ, ಇದೀಗ ಕೆರೆಗೆ ತುಂಗಭದ್ರಾ ಕಾಲುವೆಯಿಂದ ನೀರು ಹರಿಸಲಾರಂಭಿಸಿದೆ. ಹೀಗಾಗಿ, ಹೆಗ್ಗೇರಿ ದಿನದಿಂದ ದಿನಕ್ಕೆ ಮೈದುಂಬಿಕೊಳ್ಳಲಾರಂಭಿಸಿದೆ. ನೇರವಾಗಿ ಯುಟಿಪಿ ಕಾಲುವೆಯಿಂದ ನೀರು ಹಾಯಿಸಲು ಬಾರದ ಕಾರಣ ಚೌಡಯ್ಯದಾನಪುರದಿಂದ ಕಾಲುವೆಯಲ್ಲಿನ ನೀರು ಎತ್ತರಕ್ಕೆ ಏರಿಸಿ ಅಲ್ಲಿಂದ ಹೆಗ್ಗೇರಿಗೆ ನೀರು ಹರಿಸಲಾಗುತ್ತಿದೆ. ಕೆರೆಗೆ ನೀರು ಬರುತ್ತಿರುವುದು ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಸಂತಸ ನೀಡಿದೆ.

" ಈ ವರ್ಷ ಮಳೆರಾಯ ಕೈ ಕೊಟ್ಟಿದ್ದಾನೆ. ಮುಂಗಾರು ನಂಬಿಕೊಂಡು ಬಿತ್ತನೆ ಮಾಡಿದ ಬೆಳೆಗಳು ಒಣಗಲಾರಂಭಿಸಿವೆ. ಕೊನೆಯ ಪಕ್ಷ ಕೆರೆಯಾದರೂ ತುಂಬಿದರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಕೊಳವೆ ಬಾವಿಯಿಂದ ನೀರು ಹರಿಸಿ ಬೆಳೆ ಬೆಳೆಯಬಹುದು" ಎನ್ನುತ್ತಿದ್ದಾರೆ ರೈತರು.

"ಕೆರೆಯನ್ನು ನಂಬಿ ತರಕಾರಿ, ಮೆಕ್ಕೆಜೋಳ, ಹತ್ತಿ, ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಮಧ್ಯೆ ಕೆರೆಯ ನೀರನ್ನು ಹಾವೇರಿ ನಗರದ 24 x7 ಕುಡಿಯುವ ನೀರಿನ ಯೋಜನೆಗೆ ಸಹ ಬಳಸುವ ಯೋಚನೆ ಇದೆ. ಕೆರೆಗೆ ನಗರಸಭೆ ತಡೆ ಬೇಲಿ ಹಾಕಿದ್ದು, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ನಗರಸಭೆ ಅಧಿಕಾರಿಗಳು ಕೇವಲ ಕೆರೆಯ ಒಂದು ದಡದ ಮೇಲೆ ತಂತಿಬೇಲಿ ಹಾಕಿದ್ದಾರೆ, ಕೆರೆಯ ಸುತ್ತ ತಂತಿ ಬೇಲಿ ಹಾಕಿದರೆ ಒತ್ತುವರಿ ತಡೆಗಟ್ಟಬಹುದು" ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ :ವರುಣಾರ್ಭಟಕ್ಕೆ ಹಿಮಾಚಲ ಪ್ರದೇಶ ತತ್ತರ..ಯೆಲ್ಲೋ ಅಲರ್ಟ್ ಘೋಷಣೆ : ಮೇಘ ಸ್ಫೋಟದಲ್ಲಿ ಸಿಲುಕಿದ್ದ 51 ಜನರ ರಕ್ಷಣೆ

"ಹೆಗ್ಗೇರಿ ಕೆರೆಗೆ ಕಾಗಿನೆಲೆ ಕೆರೆಯಿಂದ ನೀರು ಹರಿದು ಬರುವ ಮಾರ್ಗವನ್ನು ಸರಿಪಡಿಸಬೇಕು. ಜೊತೆಗೆ, ಕೆರೆಯ ವರೆಗೂ ಯುಟಿಪಿ ಕಾಲುವೆ ನಿರ್ಮಿಸಲಾಗಿದೆ. ಈ ಕಾಲುವೆ ಕೆರೆಯ ನೀರಿನ ಮಟ್ಟದಿಂದ ಕೆಳಗೆ ಇದ್ದು, ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಕ್ರಮಕೈಗೊಳ್ಳಬೇಕು" ಎಂದು ಹೇಳಿದ್ದಾರೆ.

ಇದನ್ನೂ ಓದಿ :ಮಳೆ ಕುಂಠಿತ - ಸವಣೂರು ಏತ ನೀರಾವರಿ ಯೋಜನೆಗೆ ನೀರಿನ ಕೊರತೆ: ಆತಂಕದಲ್ಲಿ ರೈತರು

ಹೆಗ್ಗೇರಿ ಕೆರೆಯ ಬಗ್ಗೆ..: ಸಾವಿರಾರು ವರ್ಷಗಳ ಇತಿಹಾಸ ಇರುವ ಈ ಕೆರೆಯನ್ನು ನಳಮಹಾರಾಜ ಕಟ್ಟಿಸಿದ ಎಂಬ ಐತಿಹಾಸ ಇದೆ. ಸಾವಿರಾರು ಎಕರೆ ವಿಸ್ತಿರ್ಣದಲ್ಲಿದ್ದ ಕೆರೆ, ವರ್ಷದಿಂದ ವರ್ಷಕ್ಕೆ ಒತ್ತುವರಿಯಾಗುತ್ತಿದ್ದು, ಸುಮಾರು 800 ಎಕರೆ ವಿಸ್ತಿರ್ಣ ಹೊಂದಿದೆ. ಹೆಗ್ಗೇರಿ ಕೆರೆ ಒತ್ತುವರಿ ನಿಲ್ಲಬೇಕು, ಸುತ್ತಲೂ ತಡೆಬೇಲಿ ಹಾಕಬೇಕು ಮತ್ತು ಕಲುಷಿತ ನೀರು ಸೇರಿದಂತೆ ನೋಡಿಕೊಳ್ಳಬೇಕು ಎನ್ನುವುದು ಸ್ಥಳೀಯರ ಮನವಿ.

ಇದನ್ನೂ ಓದಿ :ಮಾಯವಾದ ಮಳೆ, ಬಿರುಕು ಬಿಟ್ಟಿದೆ ಗದ್ದೆ; ಆಕಾಶದತ್ತ ಮುಖ ಮಾಡಿದ ಅನ್ನದಾತ

Last Updated : Aug 26, 2023, 1:04 PM IST

ABOUT THE AUTHOR

...view details