ಹಾವೇರಿ :ಹಾನಗಲ್ ತಾಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮ ವಿಶಿಷ್ಟ ಮದುವೆಗೆ ಸಾಕ್ಷಿಯಾಯಿತು. ಈ ವಿಶಿಷ್ಟ ಮದುವೆಗೆ ಕಾರಣರಾದವರು ಗ್ರಾಮದ ಯುವಕ ಯೋಗಪಟು ಪ್ರದೀಪ್ ಮತ್ತು ವಿಯಟ್ನಾಂ ದೇಶದ ಹೊ ಚಿ ಮಿನ್ ಸಿಟಿಯ ಯುವತಿ ಕುಯಾನ್ ತ್ರಾಂಗ್.
ಪ್ರದೀಪ್ ಖಂಡನ್ನವರ್ ಐಟಿಐ ಮುಗಿಸಿಕೊಂಡು ಗ್ರಾಮದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಆದರೆ, ಅವನಲ್ಲಿದ್ದ ಯೋಗ ಪರಿಣತಿ ವಿಯಟ್ನಾಂ ದೇಶಕ್ಕೆ ತೆರಳುವಂತೆ ಮಾಡಿತ್ತು. 8 ವರ್ಷಗಳ ಹಿಂದೆ ವಿಯಟ್ನಾಂಗೆ ತೆರಳಿದ್ದ ಪ್ರದೀಪ್ಗೆ ಅಲ್ಲಿಯ ಯುವತಿ ಕುಯಾನ್ ತ್ರಾಂಗ್ ಜೊತೆ ಸ್ನೇಹ ಬೆಳೆದಿತ್ತು. ಸ್ನೇಹ ನಂತರ ಪ್ರೀತಿಗೆ ಮರಳಿ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರು ತಮ್ಮ ಪೋಷಕರನ್ನು ಒಪ್ಪಿಸಿ ಮದುವೆಯಾಗಿದ್ದಾರೆ.
ಪ್ರದೀಪ್ ವಿಯಟ್ನಾಂ ದೇಶದಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು ಸ್ವಗ್ರಾಮಕ್ಕೆ ಬಂದು, ಮಂಗಳವಾರ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಮದುವೆಯ ಹಿಂದಿನ ದಿನ ಸೋಮವಾರ ಅರಿಷಿಣ ಶಾಸ್ತ್ರ ಮಾಡಲಾಯಿತು. ಮಂಗಳವಾರ ಮುಂಜಾನೆ ಶುಭ ಮುಹೂರ್ತದಲ್ಲಿ ವಧು-ವರರಿಗೆ ಹಿಂದೂ ಸಂಪ್ರದಾಯದಂತೆ ನಾನಾ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.