ಹಾವೇರಿ: ಈಗಾಗಲೇ ಹಲವು ವೈಶಿಷ್ಟ್ಯಗಳಿಗೆ ಹಾವೇರಿ ಜಿಲ್ಲೆ ಹೆಸರುವಾಸಿಯಾಗಿದೆ. ಇದೀಗ ಬ್ಯಾಡಗಿ ತಾಲೂಕಿನ ಗುಡ್ಡದಮಲ್ಲಾಪುರ ಗ್ರಾಮದಲ್ಲಿ ವಿಶಿಷ್ಟ ಘಟನೆಯೊಂದು ನಡೆದಿದೆ.
ಹಾವೇರಿಯಲ್ಲಿ ಕರುವನ್ನು ಮಠದ ಪೀಠಾಧಿಕಾರಿಯನ್ನಾಗಿ ಮಾಡಲು ನಿರ್ಧಾರ ಗುಡ್ಡದಮಲ್ಲಾಪುರದ ಹುಚ್ಚೇಶ್ವರ ಮಠದಲ್ಲಿ ಕಳೆದ ನಾಲ್ಕು ಶತಮಾನಗಳಿಂದ ವೃಷಭರೂಪಿ ಸ್ವಾಮೀಜಿಗಳನ್ನು ಪಟ್ಟಾಧಿಕಾರ ಮಾಡಲಾಗುತ್ತದೆ. ಮಠದಲ್ಲಿ ಹಿರಿಯಶ್ರೀ ಮತ್ತು ಕಿರಿಯಶ್ರೀಗಳು ಎಂದು ಎರಡು ವೃಷಭರೂಪಿ ಸ್ವಾಮೀಜಿಗಳನ್ನು ನೇಮಕ ಮಾಡಲಾಗುತ್ತಿದೆ. ಹೀಗೆ ನೇಮಕ ಮಾಡಿದ ಸ್ವಾಮೀಜಿಗಳು ಲಿಂಗೈಕ್ಯರಾದರೆ ಮತ್ತೆ ಮರುಜನ್ಮ ಪಡೆಯುತ್ತಾರೆ ಎಂಬ ನಂಬಿಕೆ ಇಲ್ಲಿ ಮನೆ ಮಾಡಿದೆ.
ಹೌದು, ಕಳೆದ ಮಾರ್ಚ್ನಲ್ಲಿ ಲಿಂಗೈಕ್ಯರಾದ ಕಿರಿಯಶ್ರೀಗಳು ಈಗ ಬ್ಯಾಡಗಿ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಜನಿಸಿದ್ದಾರೆ ಎನ್ನುವುದು ನಂಬಿಕೆ. ಗ್ರಾಮದ ನಾಗರಾಜಪ್ಪ ಮತ್ತಿಹಳ್ಳಿ ಎಂಬುವರ ಮನೆಯಲ್ಲಿ ಜನಿಸಿದ ಕರು ಕಿರಿಯ ಮೂಕಪ್ಪಶ್ರೀಗಳ ಮರುಜನ್ಮ ಎಂದು ಗುರುತಿಸಲಾಗಿದೆ. ಈ ರೀತಿ ಜನಸಿದ ಕರು ತಾಯಿಯ ಹಾಲು ಕುಡಿಯುವುದಿಲ್ಲವಂತೆ, ಕರು ಗುಡ್ಡದಮಲ್ಲಾಪುರ ಗ್ರಾಮದ ಕಡೆ ಮುಖಮಾಡಿ ಮಲುಗುತ್ತದೆ. ಮಠದ ಪ್ರಸಾದ ತೀರ್ಥ ತಂದರೆ ಸ್ವೀಕರಿಸುತ್ತದೆ. ನಂತರ ತಾಯಿಯ ಹಾಲು ಕುಡಿಯುತ್ತದೆ ಎನ್ನುವುದು ನಂಬಿಕೆ.
ಬ್ಯಾಡಗಿ ತಾಲೂಕಿನ ಕಬ್ಬೂರು ಗ್ರಾಮದ ನಾಗರಾಜಪ್ಪ ಮತ್ತಿಹಳ್ಳಿ ಎಂಬುವವರ ಕುಟುಂಬದಲ್ಲಿ ಕರುವೊಂದು ಜನಿಸಿದೆ. ಈ ಕರು ಜನಿಸಿ ನಾಲ್ಕು ದಿನಗಳ ಹಾಲು ಕುಡಿದಿಲ್ಲವಂತೆ. ಈ ಕುರಿತಂತೆ ನಾಗರಾಜಪ್ಪ ಮಠಕ್ಕೆ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಮಠದ ಧರ್ಮಾಧಿಕಾರಿಯನ್ನ ಕರು ಗುರುತಿಸಿತು. ಅಲ್ಲದೆ ಮಠದ ಪ್ರಸಾದವನ್ನು ಸ್ವೀಕರಿಸಿದೆ. ತಮ್ಮ ಮನೆಯಲ್ಲಿ ಜನಿಸಿದ ಕರು ಗುಡ್ಡದಮಲ್ಲಾಪುರ ಗ್ರಾಮದ ಹುಚ್ಚೇಶ್ವರಮಠದ ಪೀಠಾಧಿಕಾರಿಯಾಗುತ್ತಿರುವುದಕ್ಕೆ ಕುಟುಂಬದ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಕರುವಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ಕರುವಿಗೆ ದಿನನಿತ್ಯ ಮೂರು ಬಾರಿ ಲಿಂಗಪೂಜೆ ಮಾಡಲಾಗುತ್ತದೆ. ಅಲ್ಲದೆ ಮಠದಲ್ಲಿ ನಡೆಯುವ ಹಲವು ಆಚರಣೆಗಳನ್ನು ಇಲ್ಲಿ ನಡೆಸಲಾಗುತ್ತದೆ. ನಂತರ ಕರುವಿಗೆ ತಾಯಿಯ ಹಾಲು ಕುಡಿಯಲು ಅವಕಾಶ ನೀಡಲಾಗುತ್ತದೆ. ಕರುವಿಗೆ 9 ತಿಂಗಳು ಆದ ನಂತರ ಮಠದ ಪೀಠಾಧಿಕಾರಿಯನ್ನಾಗಿ ಮಾಡಲಾಗುತ್ತದೆ ಎಂದು ಕರು ಜನಿಸಿದ ಮನೆಯ ಸದಸ್ಯ ಅರುಣ ಮತ್ತಿಹಳ್ಳಿ ತಿಳಿಸಿದ್ದಾರೆ.