ಕರ್ನಾಟಕ

karnataka

ಹಾವೇರಿ: ಶಿಲ್ಪಕಲೆಗಳಿಂದ ಕಂಗೊಳಿಸುತ್ತಿರುವ ಪುರಸಿದ್ದೇಶ್ವರ ದೇವಸ್ಥಾನಕ್ಕೆ ಹಸಿರಿನ ಮೆರುಗು

By

Published : Jul 4, 2023, 10:56 PM IST

ಹಾವೇರಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಪುರಸಿದ್ದೇಶ್ವರ ದೇವಸ್ಥಾನಕ್ಕೆ ನಿತ್ಯವೂ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನ
ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನ

ಪುರಸಿದ್ದೇಶ್ವರ ದೇವಸ್ಥಾನದ ಬಗ್ಗೆ ಇತಿಹಾಸಕಾರ ಪ್ರೋ ಪಿ ಸಿ ಹಿರೇಮಠ ಅವರು ಮಾತನಾಡಿದ್ದಾರೆ

ಹಾವೇರಿ:ಏಲಕ್ಕಿನಗರಿ ಹಾವೇರಿಗೆ ಕಳಸಪ್ರಾಯವಾಗಿರುವದು ಪುರಸಿದ್ದೇಶ್ವರ ದೇವಸ್ಥಾನ. ಈ ದೇವಸ್ಥಾನ ಪುರಾತತ್ವ ಇಲಾಖೆಯ ಸುಪರ್ದಿಗೆ ಬಂದ ಮೇಲೆ ದೇವಸ್ಥಾನದ ಚಿತ್ರಣವೇ ಬದಲಾಗಿದೆ. 25 ವರ್ಷದ ಹಿಂದೆ ಜೀರ್ಣೋದ್ದಾರಗೊಂಡ ದೇವಸ್ಥಾನದ ಆವರಣದಲ್ಲಿ ಇದೀಗ ಹಸಿರು ಕಂಗೊಳಿಸುತ್ತಿದೆ.

ಬಣ್ಣ ಬಣ್ಣದ ಪುಷ್ಪಗಳು ಉದ್ಯಾನದ ಸೌಂದರ್ಯವನ್ನ ಇಮ್ಮಡಿಗೊಳಿಸಿವೆ. ರಾಜ್ಯದ ವಿವಿಧ ರಾಜಮನೆತನಗಳ ಆಡಳಿತ ಕಂಡ ಪ್ರಾಂತ್ಯ ಹಾವೇರಿ. ರಾಜ್ಯದ ಪ್ರಥಮ ರಾಜಮನೆತನ ಕದಂಬರಿಂದ ಹಿಡಿದು ಇತ್ತೀಚಿನ ಮೈಸೂರು ಒಡೆಯರ ಕಾಲದವರೆಗೆ ವಿವಿಧ ರಾಜಮನೆತನಗಳು ಇಲ್ಲಿ ಆಳ್ವಿಕೆ ನಡೆಸಿವೆ.

ಹಾವೇರಿಯನ್ನಾಳಿದ ಬಹುತೇಕ ರಾಜಮನೆತನಗಳು ಇಲ್ಲಿ ತಮ್ಮ ಕುರುಹುಗಳನ್ನ ಸ್ಥಾಪಿಸಿವೆ. ಅಂತಹ ರಾಜಮನೆತನಗಳಲ್ಲಿ ಒಂದಾದ ಕಲ್ಯಾಣಿ ಚಾಲುಕ್ಯರು ಹಾವೇರಿ ಪ್ರಾಂತ್ಯದ ಮಹತ್ತರವಾದ ದೇವಸ್ಥಾನಗಳನ್ನ ನಿರ್ಮಿಸಿದ್ದಾರೆ. ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನ, ಗಳಗನಾಥದ ಗಳನಾಥೇಶ್ವರ ದೇವಸ್ಥಾನ ಮತ್ತು ಚೌಡಯ್ಯದಾನಪುರದ ಮುಕ್ತೇಶ್ವರ ದೇವಸ್ಥಾನ ಪ್ರಮುಖ ದೇವಸ್ಥಾನಗಳು. ಅದರಲ್ಲೂ ಹಾವೇರಿಯಲ್ಲಿರುವ ಪುರಸಿದ್ದೇಶ್ವರ ದೇವಸ್ಥಾನದ ಕಲಾಸೊಬಗು ಕಣ್ಮನ ಸೆಳೆಯುತ್ತಿದೆ. ಹಾವೇರಿ ಪುರಸಿದ್ದೇಶ್ವರ ದೇವಸ್ಥಾನ ಕಲ್ಯಾಣಿ ಚಾಲುಕ್ಯರ ವಿಶೇಷ ಸ್ಮಾರಕಗಳಲ್ಲಿ ಒಂದಾಗಿದೆ.

12 ನೇ ಶತಮಾನದ ಪೂರ್ವಭಾಗದಲ್ಲಿ ನಿರ್ಮಿಸಲಾಗಿದೆ:ಪುರಸಿದ್ದೇಶ್ವರ ದೇವಸ್ಥಾನ ಗರ್ಭಗೃಹ,ಸುಕನಾಶಿ,ನಂದಿಮಂಟಪ ಮತ್ತು ಮುಖಮಂಟಪ ಹೊಂದಿದೆ. ಸಿದ್ದೇಶ್ವರ ದೇವಸ್ಥಾನ 11ನೇ ಶತಮಾನದ ಕೊನೆಯ ಭಾಗ ಅಥವಾ 12 ನೇ ಶತಮಾನದ ಪೂರ್ವಭಾಗದಲ್ಲಿ ನಿರ್ಮಿಸಲಾಗಿದೆ ಎನ್ನುತ್ತಾರೆ ಇತಿಹಾಸಕಾರ ಪ್ರೋ. ಪಿ. ಸಿ ಹಿರೇಮಠ.

ದೇವಸ್ಥಾನದ ವಾಸ್ತುಶಿಲ್ಪದ ಮೇಲೆ ಈ ಅಂಶ ಬೆಳಕಿಗೆ ಬರುತ್ತದೆ. ಆದರೆ, ಈ ದೇವಸ್ಥಾನ ಯಾರು ನಿರ್ಮಿಸಿದ್ದಾರೆ, ಯಾವಾಗ ನಿರ್ಮಿಸಿದ್ದಾರೆ ಎನ್ನುವ ಕುರಿತಂತೆ ಯಾವುದೇ ಸ್ಪಷ್ಟ ಶಾಸನಗಳು ಇಲ್ಲ. ಬಹುತೇಕ ದೇವಸ್ಥಾನಗಳು ಪೂರ್ವಕ್ಕೆ ಮುಖಮಾಡಿದ್ದರೆ, ಪುರಸಿದ್ದೇಶ್ವರ ದೇವಸ್ಥಾನ ಪಶ್ಚಿಮಕ್ಕೆ ಮುಖಮಾಡಿದೆ. ದೇವಸ್ಥಾನವನ್ನ ಸೋಪುಕಲ್ಲು ಅಥವಾ ಮೃದುವಾದ ಕಲ್ಲಿನಿಂದ ಕೆತ್ತಲ್ಪಟ್ಟಿದೆ.

ಈ ದೇವಸ್ಥಾನದ ಮೂರು ಭಾಗದಲ್ಲಿ ಪ್ರವೇಶ ಹೊಂದಿರುವುದು ಮತ್ತೊಂದು ವಿಶೇಷ. ದೇವಸ್ಥಾನವನ್ನ ಪಶ್ಚಿಮ ಭಾಗದಿಂದ ಪ್ರವೇಶಿಸಿದರೆ ನವರಂಗವಿದ್ದು, ನವರಂಗದ ಸುತ್ತಲೂ ಕಕ್ಷಾಶನವಿದೆ. ಕಕ್ಷಾಶನದ ಮೇಲೆ 14 ಕಂಬಗಳಿದ್ದು, ಅವುಗಳಿಗೆ ಪಾದ ಮತ್ತು ಪೀಠಗಳು ಇಲ್ಲ. ಮಧ್ಯಭಾಗದಲ್ಲಿರುವ ನಾಲ್ಕು ಕಂಬಗಳನ್ನ ಮಾತ್ರ ವಿಶೇಷವಾಗಿ ಕೆತ್ತಲಾಗಿದೆ. ಈ ಕಂಬಗಳ ಮೇಲೆ ಶಿಲಾಶಾಸನಗಳಿವೆ. ಸುಕನಾಶಿ ಪ್ರವೇಶಿಸುತ್ತಿದ್ದಂತೆ ನಂದಿವಿಗ್ರಹ ಮತ್ತು ಪುರಸಿದ್ದೇಶ್ವರ ಮೂರ್ತಿ ಇದೆ. ಇಲ್ಲಿರುವ ಪುರಸಿದ್ದೇಶ್ವರ ಕಾಳಮುಖಶೈವ ಪಂತಕ್ಕೆ ಸೇರಿದ ಒಬ್ಬ ಯತಿಯಾಗಿದ್ದು, ಗರ್ಭಗೃಹದಲ್ಲಿ ಶಿವಲಿಂಗವಿದೆ.

ಸುಕನಾಶಿಯೊಳಗೆ ನಂದಿವಿಗ್ರಹ ಬಂದಿರುವುದು ಮತ್ತು ನಂದಿಮಂಟಪದಲ್ಲಿ ನಂದಿ ಮೂರ್ತಿ ಇರದೆ ಗಣೇಶ ಮೂರ್ತಿ ಇದೆ. ಬಹುಶಃ ಇದು ಮೂಲತಃ ವೈಷ್ಣವ ಮಂದಿರವಾಗಿದ್ದು, ಕಾಲಾಂತರ ಶೈವ ಮಂದಿರವಾಗಿ ಮಾರ್ಪಟ್ಟಿರುವ ಸಂಶಯವನ್ನ ಇತಿಹಾಸಕಾರರು ವ್ಯಕ್ತಪಡಿಸುತ್ತಾರೆ. ದೇವಸ್ಥಾನದ ಹೊರಭಾಗದಲ್ಲಿ ಕೆತ್ತನೆ ನೋಡಿದರೆ ಶಿಲ್ಪಿಗಳ ನಾಜೂಕಿನ ಕಾರ್ಯ ಆಕರ್ಷಣೀಯವಾಗಿದೆ. ಸಿಂಹ, ಶಾರ್ದೋಲ್, ಆನೆ ಕಾಲಮುಖಪಂಥಕ್ಕೆ ಸೇರಿದ ಯತಿಗಳ ಮೂರ್ತಿಗಳನ್ನ ಕೆತ್ತಲಾಗಿದೆ.

ದೇವಸ್ಥಾನಕ್ಕೆ ದಿನನಿತ್ಯ ನೂರಾರು ಪ್ರವಾಸಿಗರ ಭೇಟಿ:ಗರ್ಭಗೃಹದ ಹೊರಭಾಗದಲ್ಲಿ ಮೂರು ಕೋಷ್ಟಕಗಳಿವೆ. ಮೂರು ಕೋಷ್ಟಕದಲ್ಲಿ ಯಾವ ಕೋಷ್ಟಕದಲ್ಲಿ ಸಹ ಮೂರ್ತಿಗಳಿಲ್ಲಾ. ಪುರಸಿದ್ದೇಶ್ವರ ದೇವಾಲಯ 25 ವರ್ಷಗಳ ಹಿಂದೆ ಜೀರ್ಣೋದ್ದಾರಗೊಂಡಿದೆ. ಭಾರತ ಪುರಾತತ್ವ ಇಲಾಖೆಯ ಸುಪರ್ದಿಗೆ ಬಂದ ಮೇಲೆ ದೇವಸ್ಥಾನದ ಆವರಣದ ಚಿತ್ರಣವೇ ಬದಲಾಗಿದೆ. ದೇವಾಲಯ ಆವರಣದಲ್ಲಿ ಹಸಿರು ಉದ್ಯಾನ ನಿರ್ಮಿಸಲಾಗಿದ್ದು, ನೋಡುಗರನ್ನ ಈ ದೇವಾಲಯ ಆಕರ್ಷಿಸುತ್ತದೆ. ಹಾವೇರಿ ಜಿಲ್ಲೆಯ ಪ್ರಮುಖ ಪ್ರವಾಸಿಕೇಂದ್ರವಾಗಿರುವ ಸಿದ್ದೇಶ್ವರ ದೇವಸ್ಥಾನಕ್ಕೆ ದಿನನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ.

ಇದನ್ನೂ ಓದಿ:ಬತ್ತಿದ ಕಬಿನಿ : ಹಿನ್ನೀರಿನಲ್ಲಿ ಕಾಣಿಸುತ್ತಿವೆ ಐತಿಹಾಸಿಕ ಪುರಾತನ ದೇವಾಲಯದ ಕುರುಹುಗಳು

ABOUT THE AUTHOR

...view details