ಕರ್ನಾಟಕ

karnataka

By

Published : Apr 1, 2023, 7:12 AM IST

ETV Bharat / state

ಕಾಂಗ್ರೆಸ್​ ತೊರೆದ ಮಾಜಿ ಸಚಿವ ಮನೋಹರ ತಹಶೀಲ್ದಾರ್ : ಏ.7ಕ್ಕೆ ಜೆಡಿಎಸ್​ಗೆ​ ಸೇರ್ಪಡೆ

ಕಾಂಗ್ರೆಸ್​ನ ಮಾಜಿ ಸಚಿವ ಮನೋಹರ ತಹಶೀಲ್ದಾರ್​ ಕಾಂಗ್ರೆಸ್​ ಪಕ್ಷವನ್ನು ತೊರೆದು, ಏಪ್ರಿಲ್​ 7 ರಂದು ಜೆಡಿಎಸ್​ಗೆ ಸೇರ್ಪಡೆಯಾಗಲಿದ್ದಾರೆ. ಈ ಕುರಿತು ಸ್ವತಃ ಅವರೇ ಘೋಷಣೆ ಮಾಡಿದ್ದಾರೆ.

former congress minister joins jds
ಮನೋಹರ ತಹಶೀಲ್ದಾರ್ ಜೆಡಿಎಸ್​ ಸೇರ್ಪಡೆ

ಹಾವೇರಿ: ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿ ಮನೋಹರ ತಹಶೀಲ್ದಾರ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಹಾನಗಲ್‌ನಲ್ಲಿ ಶುಕ್ರವಾರ ನಡೆದ ಸ್ವಾಭಿಮಾನಿ ಸಭೆಯಲ್ಲಿ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಕೈ ತೊರೆದು ತೆನೆಹೊತ್ತ ಮಹಿಳೆಯತ್ತ ಮುಖ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್​ನಿಂದ ನನಗೆ ದ್ರೋಹ ಆಗಿದ್ದಕ್ಕೆ ಪಕ್ಷ ತೊರೆಯುವ ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ.

ಇನ್ನೆಂದೂ ಕಾಂಗ್ರೆಸ್​ ಕಡೆ ತಲೆ ಹಾಕುವುದಿಲ್ಲ- ತಹಶೀಲ್ದಾರ್​.. ಕಾಂಗ್ರೆಸ್ ಹೈಕಮಾಂಡ್ ನನಗೆ ಮಾಡಿದ ದ್ರೋಹವನ್ನು ಪ್ರತಿಭಟಿಸಿ ಪಕ್ಷ ತೊರೆಯುವ ನಿರ್ಧಾರ ಕೈಗೊಂಡಿದ್ದೇನೆ. ಇನ್ನೆಂದೂ ಕಾಂಗ್ರೆಸ್ ಕಡೆ ತಲೆ ಹಾಕುವುದಿಲ್ಲ ಎಂದು ಅವರು ಹೇಳಿದರು. ಕಾಂಗ್ರೆಸ್ ತೊರೆದು ರೈತರ, ಜನಪರವಾದ ಜಾತ್ಯಾತೀತ ಜನತಾದಳ ಪಕ್ಷ ಸೇರಲು ತೀರ್ಮಾನಿಸಿರುವುದಾಗಿ ಮಾಜಿ ಸಚಿವರು ಸ್ಪಷ್ಟಪಡಿಸಿದ್ದಾರೆ. ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷ ನನಗೆ ತಾಯಿಯಾಗಿತ್ತು, ಪಕ್ಷವನ್ನ ತಾಯಿಯಂತೆ ನೋಡಿಕೊಂಡ ನನಗೆ ತಾಯಿಯ ಹಾಲು ವಿಷವಾಗಿ ಪರಿಣಮಿಸಿದೆ. ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷ ತೊರೆಯುತ್ತಿದ್ದೇನೆ ಎಂದು ತಿಳಿಸಿದರು.

20 ವರ್ಷ ಶಾಸಕರಾಗಿ ಸೇವೆ: 1978ರಲ್ಲಿ ಮೊದಲ ಬಾರಿ ಶಾಸಕನಾಗಿದ್ದೆ, ನಂತರ 1989, 1999 ಹಾಗೂ 2013ರಲ್ಲಿ ಒಟ್ಟು 20 ವರ್ಷ ಶಾಸಕನಾಗಿ, ವಿಧಾನಸಭೆ ಉಪಸಭಾಪತಿಯಾಗಿ, ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಹಿರಿತನವನ್ನು ಕಡೆಗಣಿಸಿ 2018ರಲ್ಲಿ ಶಾಸಕನಾಗಿದ್ದರೂ ಸಹ ಕಾಂಗ್ರೆಸ್ ಹೈಕಮಾಂಡ್ ಹೊರಗಿನವರಿಗೆ ಟಿಕೆಟ್ ನೀಡಿತ್ತು. ನಂತರ ನಡೆದ ಉಪಚುನಾವಣೆಯಲ್ಲಿ ಸಹ ನನ್ನ ಮನವೊಲಿಸಿ ಶ್ರೀನಿವಾಸ ಮಾನೆಗೆ ಟಿಕೆಟ್ ನೀಡಿದ್ದರು. ಆದರೂ ಸಹ ನನ್ನೆಲ್ಲ ನೋವು ಮರೆತು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ನಾನು ಶ್ರಮಿಸಿದ್ದೆ ಎಂದರು.

ಸೌಜನ್ಯಕ್ಕೂ ಸಹ ಕಾಂಗ್ರೆಸ್​ ಮುಖಂಡರು ನನ್ನನ್ನು ಸಂಪರ್ಕಿಸಿಲ್ಲ- ತಹಶೀಲ್ದಾರ್..​ ಈ ಬಾರಿಯಾದರೂ ನನಗೆ ಅವಕಾಶ ನೀಡುವಂತೆ ದೆಹಲಿವರೆಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭೇಟಿಯಾಗಿ ಮನವಿ ಮಾಡಿದ್ದೆ. ಕೆಪಿಸಿಸಿ ಮುಖಂಡರಿಗೂ ಭೇಟಿಯಾಗಿ ಟಿಕೆಟ್ ನೀಡುವ ಕುರಿತು ಮಾತನಾಡಿದ್ದೆ. ಆದರೆ 2018 ರಿಂದ ನನ್ನನ್ನು ಕಣದಿಂದ ಹಿಂದೆ ಸರಿಸುವ ಪ್ರಯತ್ನ ನಡೆದಿದೆ. ಹಾನಗಲ್ ಅಭ್ಯರ್ಥಿ ಎಂದು ಶ್ರೀನಿವಾಸ ಮಾನೆ ಘೋಷಣೆಯ ನಂತರ ಸೌಜನ್ಯಕ್ಕೂ ಸಹ ಕಾಂಗ್ರೆಸ್ ಮುಖಂಡರು ನನ್ನ ಸಂಪರ್ಕ ಮಾಡಿಲ್ಲಾ ಎಂದು ಹೇಳಿದರು.

ಇದರಿಂದ ನನಗೆ ಅಪಮಾನವಾಗಿದೆ ಈ ಎಲ್ಲದರಿಂದ ನೊಂದು ಕಾಂಗ್ರೆಸ್ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಹೀಗಾಗಿ ಕಾಂಗ್ರೆಸ್‌ಗೆ ಗುಡ್ ಬೈ ಹೇಳುತ್ತಿದ್ದೇನೆ. ಶ್ರೀನಿವಾಸ್ ಮಾನೆಗೆ ಟಿಕೆಟ್ ಅನೌನ್ಸ್​ ಆದ ನಂತರ ಒಂದು ವಾರದಿಂದ ತಾಲೂಕಿನ ನನ್ನ ಹಿಂಬಾಲಕರು ಮತ್ತು ಆಪ್ತರೊಂದಿಗೆ ನಮ್ಮ ಮುಂದಿನ ನಡೆ ಕುರಿತ ಚರ್ಚಿಸಿದ್ದೇನೆ. ಇನ್ನು ಮುಂದೆ ತಾಲೂಕಿನ ಮತದಾರರೇ ನನಗೆ ಹೈಕಮಾಂಡ್ ಎಂದು ಮನೋಹರ್​ ತಹಶೀಲ್ದಾರ್​ ಹೇಳಿದರು.

ಏ.7 ರಂದು ಜೆಡಿಎಸ್​ ಸೇರ್ಪಡೆ: ಪಕ್ಷೇತರವಾಗಿ ಸ್ಪರ್ಧಿಸುವ ಚಿಂತನೆ ಸಹ ನಡೆದಿತ್ತು. ಆದರೆ ಯಾವುದಾದರು ಪಕ್ಷದ ಜೊತೆಗಿದ್ದರೆ ಪಕ್ಷದ ಸಿದ್ಧಾಂತ, ಪ್ರಣಾಳಿಕೆ, ನಾಯಕತ್ವ ಇರುವ ಕಾರಣ ರೈತರ ಪರವಾಗಿರುವ ಜಾತ್ಯಾತೀತ ಜನತಾದಳ ಪಕ್ಷ ಸೇರ್ಪಡೆಗೊಳ್ಳಲು ಅಂತಿಮವಾಗಿ ನಿರ್ಧರಿಸಿದ್ದೇನೆ. ಏಪ್ರಿಲ್7 ರಂದು ಜೆಡಿಎಸ್‌ನ ಪಂಚರತ್ನ ಯಾತ್ರೆ ಹಾನಗಲ್ಲಿಗೆ ಆಗಮಿಸುತ್ತಿದೆ. ಅಂದು ತಾಲೂಕಿನ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಜೆಡಿಎಸ್ ಸೇರ್ಪಡೆಯಾಗುತ್ತೇನೆ ಎಂದು ತಹಶೀಲ್ದಾರ್ ತಿಳಿಸಿದರು.

ಮನೊಹರ​ ತಹಶೀಲ್ದಾರ್ ಸುಮಾರು ಐದು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದರು. ಕಾಂಗ್ರೆಸ್ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಇವರು ಶಾಸಕರಾಗಿ, ಸಚಿವರಾಗಿ ಮತ್ತು ವಿಧಾನಸಭೆ ಉಪಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿ ತೊರೆಯಲ್ಲ, ಕಾಂಗ್ರೆಸ್ ಸೇರಲ್ಲ: ಕೈ ಆಹ್ವಾನ ತಳ್ಳಿಹಾಕಿದ ಸಚಿವ ಬೈರತಿ ಬಸವರಾಜ್

ABOUT THE AUTHOR

...view details