ಹಾವೇರಿ : ಮಹದಾಯಿ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಹದಾಯಿ ಯೋಜನೆಗೆ ಡಿಪಿಆರ್ ಕೊಟ್ಟಿದ್ದೇ ಕೇಂದ್ರ ಸರ್ಕಾರ ಎಂದು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಸರ್ಕಾರ ಮಹದಾಯಿ ಯೋಜನೆಗೆ ಕ್ಲಿಯರೆನ್ಸ್ ಕೊಡುತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಹೇಳಿದ್ದು ನಂಬಿದರೇ ರಾಜ್ಯವನ್ನು ಅಧೋಗತಿಗೆ ತಗೆದುಕೊಂಡು ಹೋಗುತ್ತಾರೆ. ಮಹದಾಯಿ ಯೋಜನೆಗೆ ಡಿಪಿಆರ್ ಕೊಟ್ಟಿದ್ದೇ ಕೇಂದ್ರ ಸರ್ಕಾರ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಮಹದಾಯಿ ಯೋಜನೆ ಸಂದರ್ಭ ಅನಾವಶ್ಯಕವಾಗಿ ಟ್ರಿಬ್ಯುನಲ್ ರಚಿಸಲು ಸುಪ್ರೀಂ ಕೋರ್ಟ್ ಅಫಿಡವಿಟ್ ನೀಡಿತ್ತು. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದರು. ಈ ಕುರಿತಂತೆ ಸಿಎಂ ಸಿದ್ದರಾಮಯ್ಯ ಯಾಕೆ ಮಾತನಾಡುವುದಿಲ್ಲ. ಮಹದಾಯಿ ಯೋಜನೆಯಲ್ಲಿ ನಾವು ಮಾಡಿದ ಇಂಟರಲಿಂಕಿಂಗ್ ಕ್ಯಾನಲ್ಗೆ ಇವರು ಅಡ್ಡಗೋಡೆ ಕಟ್ಟಿದರು. ಕಾಂಗ್ರೆಸ್ ಸರ್ಕಾರವು ಯೋಜನೆ ಆಗಬಾರದು ಎಂದು ಗೋಡೆ ಕಟ್ಟಲು ಅಫಿಡವಿಟ್ ಸಲ್ಲಿಸಿದರು ಬೊಮ್ಮಾಯಿ ಆರೋಪಿಸಿದರು.
ಇಡೀ ಜಗತ್ತಿನಲ್ಲಿ ಈ ರೀತಿಯಲ್ಲಿ ಒಂದು ಯೋಜನೆಯನ್ನು ತಡೆಯಲು ಗೋಡೆ ಕಟ್ಟಿದ್ದ ಉದಾಹರಣೆ ಇಲ್ಲಾ. ಈ ರೀತಿ ಗೋಡೆ ಕಟ್ಟಿದರೆ ನೀರು ಎಲ್ಲಿಂದ ಬರುತ್ತೆ. ಇದರ ಬಗ್ಗೆ ಅಂದು ಸಿಎಂ ಸಿದ್ದರಾಮಯ್ಯ ಮಾತನಾಡಲಿಲ್ಲ. ಈಗ ಕೇಂದ್ರ ಸರ್ಕಾರ ಡಿಪಿಆರ್ ಅಪ್ರೂವಲ್ ಮಾಡಿದೆ. ಇನ್ನು ಅರಣ್ಯ ಇಲಾಖೆಯ ಒಪ್ಪಿಗೆ ಪಡೆಯಬೇಕು. ಈಗಾಗಲೇ ನಮ್ಮ ಸರ್ಕಾರ ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಂಡಿದೆ. ಕ್ಲಿಯರೆನ್ಸ್ ಕೊಡುವ ಇಲಾಖೆಯ ಕಚೇರಿ ಇದೀಗ ಬೆಂಗಳೂರಿನಲ್ಲಿಯೇ ಇದೆ. ಆ ಕೆಲಸವನ್ನು ಮೊದಲು ಮಾಡಿ. ಎಲ್ಲದರಲ್ಲೂ ರಾಜಕಾರಣ ಮಾಡಲು ಹೋದರೆ ರಾಜ್ಯ ಹಿತದೃಷ್ಠಿಗೆ ಧಕ್ಕೆಯಾಗುತ್ತದೆ ಎಂದು ಹೇಳಿದರು.