ಹಾವೇರಿ: ಕನಕದಾಸರ ಭಕ್ತಿಗೆ ಕೃಷ್ಣನು ತಿರುಗಿ ದರ್ಶನ ನೀಡಿರುವಾಗ, ಕಾಗಿನೆಲೆ ಶ್ರೀಗಳ ಪಾದಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಒಲಿಯುವುದಿಲ್ಲವೇ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ನಡೆದ ಕುರುಬರ ಎಸ್ಟಿ ಪಾದಯಾತ್ರೆ ಆರಂಭದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಯಾವ ಜಾತಿಯ ಅರ್ಹತೆಯನ್ನು ಕಸಿದುಕೊಳ್ಳುತ್ತಿಲ್ಲ, ಬದಲಿಗೆ ನಮ್ಮ ಅರ್ಹತೆಯ ಮೀಸಲಾತಿ ಕೇಳುತ್ತಿದ್ದೇವೆ ಎಂದರು.
ಕುರುಬರ ಎಸ್ಟಿ ಪಾದಯಾತ್ರೆ ಆರಂಭದ ಸಮಾವೇಶದಲ್ಲಿ ಸಚಿವರ ಮಾತು ಎಸ್ಟಿ ಮೀಸಲಾತಿ ಹೋರಾಟಕ್ಕೆ ಎಲ್ಲಾ ಪಕ್ಷದ ಕುರುಬ ಮುಖಂಡರು ಇಚ್ಚಾಶಕ್ತಿ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣ ನಿಸ್ವಾರ್ಥವಾಗಿ ಎಸ್ಟಿ ಮೀಸಲಾತಿ ಹೋರಾಟ ಆರಂಭಿಸಿರುವ ಕಾಗಿನೆಲೆ ಶ್ರೀಗಳು ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.
ರಾಜಕೀಯವನ್ನು ಬದಿಗಿಟ್ಟು ಬಂದಿರುವ ನಾವು, ರಾಜ್ಯದಲ್ಲಿರುವ ಬಡ ಕುರುಬರಿಗೆ ಸೌಲಭ್ಯ ಕಲ್ಪಿಸುವುದಕ್ಕಾಗಿ ಈ ಹೋರಾಟ ಪ್ರಾರಂಭಿಸಿದ್ದೇವೆ. ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಕುರುಬ ಜನಾಂಗಕ್ಕೆ ಎಸ್ಟಿ ಮೀಸಲಾತಿ ಸಿಗುವವರೆಗೂ ಹೋರಾಟ ಮುಂದುವರೆಸುವುದಾಗಿ ಈಶ್ವರಪ್ಪ ತಿಳಿಸಿದರು.