ಕರ್ನಾಟಕ

karnataka

ETV Bharat / state

ಕಾಂಗ್ರೆಸ್‌ನವರು ಘರ್​ ವಾಪ್ಸಿ ವದಂತಿ ಹಬ್ಬಿಸಿದ್ದಾರೆ: ಮಾಜಿ ಸಚಿವ ಬಿ ಸಿ ಪಾಟೀಲ್ - ಈಟಿವಿ ಭಾರತ್ ಕನ್ನಡ ಸುದ್ದಿ

ಕಾಂಗ್ರೆಸ್​ನಲ್ಲಿ ಮೂರ್ನಾಲ್ಕು ಗುಂಪುಗಳಿದ್ದು, ಜನರನ್ನು ಬೇರೆಡೆ ಸೆಳೆಯಲು ಘರ್​ ವಾಪ್ಸಿ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.

ಮಾಜಿ ಸಚಿವ ಬಿ. ಸಿ ಪಾಟೀಲ್
ಮಾಜಿ ಸಚಿವ ಬಿ. ಸಿ ಪಾಟೀಲ್

By ETV Bharat Karnataka Team

Published : Aug 22, 2023, 5:53 PM IST

ಮಾಜಿ ಸಚಿವ ಬಿ. ಸಿ ಪಾಟೀಲ್

ಹಾವೇರಿ : ರಾಜ್ಯ ಕಾಂಗ್ರೆಸ್​ನಲ್ಲಿ ಮೂರ್ನಾಲ್ಕು ಗುಂಪುಗಳಿವೆ. ಈ ಗುಂಪುಗಳ ಬಗ್ಗೆ ಮತದಾರರಿಗೆ ಗೊತ್ತಾದರೆ, ಲೋಕಸಭೆ ಚುನಾವಣೆಯಲ್ಲಿ ಹಿನ್ನೆಡೆಯಾಗಲಿದೆ. ಹೀಗಾಗಿ, ಕಾಂಗ್ರೆಸ್‌ನವರು ಘರ್​ ವಾಪ್ಸಿ ವದಂತಿ ಹಬ್ಬಿಸಿದ್ದಾರೆ ಎಂದು ಮಾಜಿ ಸಚಿವ ಬಿ. ಸಿ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಎಸ್ ಟಿ ಸೋಮಶೇಖರ್​ ಬಿಜೆಪಿಯ ಸಭೆಯಲ್ಲಿ ಭಾಗವಹಿಸಿದ್ದಾರೆ. ಅವರ ಜೊತೆ ನಾನು ಮಾತನಾಡಿದ್ದೇನೆ. ಸಿಎಂ ಸಿದ್ದರಾಮಯ್ಯ ಬಗ್ಗೆ ಒಳ್ಳೆಯ ಮಾತನಾಡಿದ್ದಕ್ಕೆ ಈ ರೀತಿ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ ಎಂದರು. ಕಾಂಗ್ರೆಸ್ಸಿನಲ್ಲಿ ಸಾಕಷ್ಟು ಗೊಂದಲ ಶುರುವಾಗಿದೆ. ರಾಜಣ್ಣ ಇದೇ ಅವಧಿಯಲ್ಲಿ ಜಿ. ಪರಮೇಶ್ವರ್ ಸಿಎಂ ಆಗಬೇಕು ಎಂದು ಹೇಳಿದ್ದಾರೆ. ಇನ್ನು ಡಿ ಕೆ ಶಿವಕುಮಾರ್ ನಾನು ಸಿಎಂ ಆಗಬೇಕು ಎನ್ನುತ್ತಿದ್ದಾರೆ. ಸಿದ್ದರಾಮಯ್ಯರದು ಒಂದು ಗುಂಪು. ಕಾಂಗ್ರೆಸ್‌ನಲ್ಲಿ ಮೂರ್ನಾಲ್ಕು ಗುಂಪಾಗಿದ್ದು, ಜನರನ್ನು ಬೇರೆ ಕಡೆ ಸೆಳೆಯಲು ಈ ರೀತಿ ಘರ್​ ವಾಪ್ಸಿ ಮಾತುಗಳನ್ನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್​​ನಲ್ಲಿ 136 ಶಾಸಕರಿದ್ದಾಗ ಸಹ ಬೇರೆ ಪಕ್ಷದವರನ್ನ ಕರೆತರುತ್ತಿದ್ದಾರೆ ಎಂದರೆ ಪಕ್ಷದಲ್ಲಿ ಸರಿ ಇಲ್ಲ ಎನ್ನುವ ಸೂಚನೆ ನೀಡುತ್ತೆ. ಕಾಂಗ್ರೆಸ್‌ನಲ್ಲಿ ಬಿರುಕು ಇದೆ, ಒಳ್ಳೆ ವಾತಾವರಣ ಇಲ್ಲ. ಇನ್ನು ನಾವು 17 ಶಾಸಕರು ಮುಂಬೈಗೆ ಹೋದಾಗ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ವಲಸಿಗರನ್ನ ಕಾಂಗ್ರೆಸ್ಸಿಗೆ ಕರೆತರುವುದಿಲ್ಲ. ಸೂರ್ಯ ಚಂದ್ರರಿರುವ ತನಕ ವಲಸಿಗರನ್ನ ಕರೆತರುವುದಿಲ್ಲ ಎಂದಿದ್ದರು. ಈಗ ಸೂರ್ಯ ಚಂದ್ರ ಇಲ್ವಾ? ಎಂದು ಬಿ ಸಿ ಪಾಟೀಲ್ ಲೇವಡಿ ಮಾಡಿದ್ರು.

ಕಾಂಗ್ರೆಸ್‌ನಲ್ಲಿ ಅಭದ್ರತೆ ಕಾಡುತ್ತಿದೆ. ಹೀಗಾಗಿ ಈ ರೀತಿ ವದಂತಿ ಸೃಷ್ಟಿ ಮಾಡುತ್ತಿದ್ದಾರೆ. ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಬಿಜೆಪಿಗೆ ವಲಸಿಗರು ಬಂದಿದ್ದರಿಂದ ಬಿಜೆಪಿಯಲ್ಲಿ ಅಶಿಸ್ತು ಶುರುವಾಯಿತು ಎಂದು ನೀಡಿರುವ ಹೇಳಿಕೆ, ನಮಗೆ ಬೇಸರ ತಂದಿದೆ ಎಂದು ಪಾಟೀಲ್ ತಿಳಿಸಿದರು. ಈ ರೀತಿ ಹೇಳುತ್ತಿರುವ ಈಶ್ವರಪ್ಪ ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ತಮ್ಮ ಮಗನ ಕೈಬಿಟ್ಟು ಹಾವೇರಿ ಬಿಜೆಪಿಯಲ್ಲಿ ಒಡಕು ಮೂಡಿಸುತ್ತಿದ್ದಾರೆ ಎಂದು ಪಾಟೀಲ್ ಆರೋಪಿಸಿದರು.

ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲಿಸಲು ಹೊರಟಿದ್ದಾರೆ. ಪಕ್ಷ ಇನ್ನು ಯಾವ ಅಭ್ಯರ್ಥಿ ಘೋಷಣೆ ಮಾಡುವ ಮುನ್ನವೇ ಹಾವೇರಿಯಲ್ಲಿ ಬಿಜೆಪಿಗೆ ದ್ರೋಹ ಮಾಡಿದವರನ್ನ ಸೇರಿಸಿಕೊಂಡು ಈ ರೀತಿ ಮಾಡುತ್ತಿದ್ದಾರೆ. ನಾವು ವಲಸಿಗರು ಬಿಜೆಪಿ ವಿರುದ್ಧ ಕೆಲಸ ಮಾಡಿಲ್ಲ ಎಂದು ಬಿ ಸಿ ಪಾಟೀಲ್ ಹೇಳಿದರು.

ಈಶ್ವರಪ್ಪ ಹೇಳಿಕೆ ಬೇಸರ ತಂದಿದೆ : ಕೆ ಎಸ್ ಈಶ್ವರಪ್ಪ ಹೇಳಿಕೆಗೆ ಬಿಜೆಪಿಯ ಯಾವ ನಾಯಕರು ತಪ್ಪು ಎನ್ನಲಿಲ್ಲ. ಸೋಮಶೇಖರ್ ಸಹ ತಮ್ಮ ಮನಸ್ಸಿಗೆ ಬೇಜಾರಾಗಿದೆ ಎಂದು ತಿಳಿಸಿದ್ದರು. ಅದನ್ನು ಸರಿಪಡಿಸುವ ಕೆಲಸವಾಗುತ್ತಿದೆ. ಇಲ್ಲಿಂದ ಹೋಗುವವರಿಗೇನು ಅಲ್ಲಿ ಸಚಿವ ಸ್ಥಾನ ಇಲ್ಲ. ಸೋಮಶೇಖರ್ ಅನುದಾನಕ್ಕಾಗಿ ಸಿಎಂ ಭೇಟಿ ಮಾಡಿದ್ದರಲ್ಲಿ ತಪ್ಪಿಲ್ಲ. ಅಲ್ಲಿ ಇರುವ ಸಚಿವ ಸ್ಥಾನದ ಅಕಾಂಕ್ಷಿಗಳಿಗೇ ಸಚಿವ ಸ್ಥಾನ ಸಿಗುತ್ತಿಲ್ಲ. ನಮ್ಮ ಜಿಲ್ಲೆಯಲ್ಲಿ ಸಹ ನನಗೆ ಈಶ್ವರಪ್ಪ ಹೇಳಿಕೆ ಬೇಸರ ತಂದಿದೆ ಎಂದು ಬಿ ಸಿ ಪಾಟೀಲ್ ತಿಳಿಸಿದರು.

ಒಬ್ಬ ಹಿರಿಯ ನಾಯಕರು ಹೇಳಿಕೆ ನೀಡುವುದು ಮತ್ತು ಹೇಳಿಕೆ ನೀಡಿಲ್ಲ ಎನ್ನುವುದು ಅವರಿಗೆ ಗೌರವ ತರುವುದಿಲ್ಲ. ಕೆ ಎಸ್ ಈಶ್ವರಪ್ಪ ಅವರಿಂದ ಈ ರೀತಿಯ ಮಕ್ಕಳಾಟಿಕೆಯ ಮಾತುಗಳು ಬರುವುದರ ಮೇಲೆ ಯಾರ ಅಶಿಸ್ತಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು ಎಂದರು. ಪಕ್ಷ ಸರ್ವೆ ಮೂಲಕ ಲೋಕಸಭೆಗೆ ಅಭ್ಯರ್ಥಿಯನ್ನ ಆಯ್ಕೆ ಮಾಡುತ್ತೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರನ್ನ ಆರಿಸಿ ಕಳಿಸುವುದು ನಮ್ಮ ಕರ್ತವ್ಯ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ ಮಾಡಿದವರನ್ನ ಪೋಷಿಸುತ್ತಿರುವುದು ಒಳ್ಳೆಯದಲ್ಲ. ಇದು ಜಿಲ್ಲೆಯ ಬಿಜೆಪಿಯಲ್ಲಿ ಒಡಕು ಉಂಟು ಮಾಡುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷರು ಈ ಕುರಿತಂತೆ ಹೇಳಿಕೆ ನೀಡಿದ್ದರೆ ಮಾಡಲಿ. ಅದನ್ನ ಬಿಟ್ಟು ಈ ರೀತಿ ಮಾಡುತ್ತಿರುವುದು ಸರಿಯಲ್ಲ ಎಂದು ಬಿ ಸಿ ಪಾಟೀಲ್​ ಹೇಳಿದ್ರು.

ಲೋಕಸಭೆ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ನಡೆಯುವಂತಹ ಚುನಾವಣೆ. ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಬೊಮ್ಮಾಯಿ ಕಾರಣ ಎನ್ನುವುದು ತಪ್ಪು. ಪಕ್ಷದ ಸೋಲಿಗೆ ಒಳಮೀಸಲಾತಿ, ಬಿಟ್ಟಿ ಭರವಸೆಗಳಿಗೆ ಮೋಸ ಹೋಗಿರುವುದೇ ಕಾರಣ ಎಂದು ಬಿ ಸಿ ಪಾಟೀಲ್ ತಿಳಿಸಿದರು.

ಚಂದ್ರಯಾನ 3ರ ಬಗ್ಗೆ ನಟ ಪ್ರಕಾಶ್​ ರೈ ವ್ಯಂಗ್ಯ ವರ್ತನೆ ಮೂರ್ಖತನದ್ದು. ಪ್ರಕಾಶ್ ರೈ ಈ ನಡೆ ದೇಶದ್ರೋಹ. ರಷ್ಯಾದಂತಹ ದೇಶವೇ ಸೋತಿದೆ. ಅಂತದ್ದರಲ್ಲಿ ಭಾರತ ಯಶಸ್ವಿ ಕಾರ್ಯಾಚರಣೆ ನಡೆಸುತ್ತಿದೆ. ಇದು ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂತಹ ಕ್ಷಣ. ಪ್ರಕಾಶ್ ರೈ ವರ್ತನೆ ಖಂಡನೀಯ ಎಂದರು.

ಇನ್ನು ರಾಜ್ಯ ಸರ್ಕಾರ ರೈತ ವಿರೋಧಿಯಾಗಿದೆ. ಸಚಿವ ಚಲುವರಾಯಸ್ವಾಮಿ ಮೇಲಿನ ಆರೋಪದ ತನಿಖೆಯಾಗುತ್ತದೆ. ತನಿಖೆ ನಂತರ ಸತ್ಯಾಂಶ ಬಯಲಾಗಲಿದೆ ಎಂದು ಬಿ ಸಿ ಪಾಟೀಲ್​ ಹೇಳಿದರು.

ಇದನ್ನೂ ಓದಿ:ಗ್ಯಾರಂಟಿ ನೆಪದಲ್ಲಿ ಮೂಲಸೌಕರ್ಯ ಅಭಿವೃದ್ದಿಗೆ ತಡೆಯೊಡ್ಡಿದರೆ, ಬೀದಿಗಿಳಿದು ಹೋರಾಟ ಮಾಡ್ತೇವಿ: ಮಾಜಿ ಸಚಿವ ಬಿ ಸಿ ಪಾಟೀಲ್

ABOUT THE AUTHOR

...view details